ನಡು ರಸೆಯಲ್ಲೇ ಕಂಬವಿದ್ದರೂ ರಸ್ತೆ ಕಾಮಗಾರಿ ನಡೆಯುತ್ತೆ !
ವಿದ್ಯುತ್ ಕಂಬ ತೆರವುಗೊಳಿಸದೇ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರ
Team Udayavani, Feb 4, 2021, 3:28 PM IST
ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ರಸ್ತೆಯ ಮಧ್ಯದಲ್ಲಿದ್ದ ವಿದ್ಯುತ್ ಕಂಬವನ್ನು ತೆರವುಗೊಳಿಸದೇ ಹಾಗೆ ಬಿಟ್ಟು ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ನಡು ರಸ್ತೆಯಲ್ಲೇ ಕಂಬಿವಿದ್ದರೂ ಅದನ್ನು ತೆರವುಗೊಳಿಸದೇ ಹೀಗೂ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತದೆಯೇ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಕೆಸ್ತೂರು ಗ್ರಾಮದ ನಾಯಕರ ಬಡಾವಣೆಯಲ್ಲಿ ನೀರಾವರಿ ಇಲಾಖೆಯಿಂದ ಟಿಎಸ್ಪಿ ಯೋಜನೆಯಡಿ 15 ಲಕ್ಷ ರೂ.ವೆಚ್ಚದ ರಸ್ತೆ ಹಾಗೂ ಚರಂಡಿ ಕಾಮಗಾರಿ ಪೂರ್ಣಗೊಳಿಸಲಾಗಿದೆ.
ಇಲ್ಲಿನ ನಿವಾಸಿಗಳು ಕಾಮಗಾರಿ ಮಾಡುವ ಸಂದರ್ಭದಲ್ಲಿ ಕಂಬವನ್ನು ಸ್ಥಳಾಂತರಿಸಿ ನಂತರ ಕಾಮಗಾರಿಯನ್ನು ಶುರು ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಇದ್ಯಾವುದಕ್ಕೂ ಸ್ಪಂದಿಸದೇ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಂಬವನ್ನು ಹಾಗೆಯೇ ಬಿಟ್ಟು ರಸ್ತೆಯನ್ನು ಅಭಿವೃದ್ಧಿಪಡಿಸಿದ್ದಾರೆ.
ಇದನ್ನೂ ಓದಿ: ಕೌಟುಂಬಿಕ ಕಲಹ: ಮನನೊಂದ ತಾಯಿ ಮಗ ಜಲಾಶಯಕ್ಕೆ ಹಾರಿ ಆತ್ಮಹತ್ಯೆ
ಕಾಮಗಾರಿ ಪೂರ್ಣಗೊಂಡು ತಿಂಗಳಾದರೂ ಕಂಬವನ್ನು ಬದಲಾಯಿಸಲು ಯಾರೂ ಮುಂದಾಗುತ್ತಿಲ್ಲ, ಇದರಿಂದ ಬಡಾವಣೆಯಲ್ಲಿ ವಾಹನ ಸವಾರರು ಕಿರಿಕಿರಿ ಅನುಭವಿಸುವ ಪರಿಸ್ಥಿತಿ ಇದೆ. ಇದರಿಂದ ಆಪಾಯವೂ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಕೊಳ್ಳೇಗಾಲ ನೀರಾವರಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಹಾಗೂ ಕೆಇಬಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕೂಡಲೇ ಸಮಸ್ಯೆಯನ್ನು ಬಗ್ಗೆ ಹರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ಆಗ್ರಹಿದ್ದಾರೆ.
ಬಡಾವಣೆ ಹೋಗುವ ಡೆಕ್ ಶಿಥಿಲ: ಗ್ರಾಮ ಪಂಚಾಯಿತಿ ಹಿಂಭಾಗವಿರುವ ಬಡಾವಣೆಗೆ ಹೋಗುವ ರಸ್ತೆ ಪ್ರಾರಂಭದಲ್ಲಿರುವ ಡೆಕ್ ಕುಸಿದು ಬಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಜೊತೆಗೆ ಶಿಥಿಲಗೊಂಡಿರುವ ಕಾಮಗಾರಿ ಸ್ಥಳದಲ್ಲಿ ಡೆಕ್ ನಿರ್ಮಾಣ ಮಾಡುವ ಬದಲು ಅವಶ್ಯಕತೆಯಿಲ್ಲದ ಸ್ಥಳದಲ್ಲಿ ಡೆಕ್ ಚರಂಡಿ ನಿರ್ಮಾಣ ಮಾಡಿ ಕೈ ತೊಳೆದುಕೊಂಡಿದ್ದಾರೆ. ಸರ್ಕಾರದ ಅನುದಾನವನ್ನು ಉಪಯುಕ್ತ ಜಾಗವನ್ನು ಬಿಟ್ಟು ಬೇರೆ ಕಡೆ ಮಾಡಿರುವುದು ಸರಿಯಾದ ಕ್ರಮವಲ್ಲ, ಇನ್ನಾದರೂ ಅಪಾಯಕ್ಕೆ ಆಹ್ವಾನ ನೀಡುವ ಜಾಗವನ್ನು ಗುರುತಿಸಿ ದುರಸ್ತಿಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಬಡಾವಣೆಯ ರಸ್ತೆಯ ಮಧ್ಯದಲ್ಲಿ ವಿದ್ಯುತ್ ಕಂಬ ಹಾದು ಹೋಗಿದೆ. ಕಾಮಗಾರಿ ನಡೆಯುವ ಸಮಯದಲ್ಲಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಂಬ ತೆರವುಗೊಳಿಸಲು ಮನವಿ ಮಾಡಿದ್ದರೂ ಸಂಬಂಧಪಟ್ಟ ಜೆಇ ಹಾಗೂ ಗುತ್ತಿಗೆದಾರರು ಕ್ರಮ ಕೈಗೊಂಡಿಲ್ಲ. ಇದರಿಂದ ಸಣ್ಣ ಪುಟ್ಟ ಅಪಘಾತಗಳಾಗಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ.
ನಿಂಗರಾಜು, ಬಡಾವಣೆಯ ನಿವಾಸಿ
ಫೈರೋಜ್ ಖಾನ್