ಚಾಲಕನಿಗೆ ಸೋಂಕು ದೃಢ
Team Udayavani, Jun 21, 2020, 5:15 AM IST
ಚಾಮರಾಜನಗರ: ಜಿಲ್ಲೆಯಲ್ಲಿ ಎರಡನೇ ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಗುಂಡ್ಲುಪೇಟೆಯ ಹೌಸಿಂಗ್ ಬೋರ್ಡ್ ಕಾಲೋನಿಯ 39 ವರ್ಷದ ಸರಕು ಸಾಗಣೆ ವಾಹನ ಚಾಲಕನಿಗೆ ಕೋವಿಡ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ. ರವಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಚಾಲಕ ತಮಿಳುನಾಡಿಗೆ ಈ ವಾರದಲ್ಲಿ 3 ಬಾರಿ ಈರುಳ್ಳಿ ಸಾಗಣೆ ವಾಹನದಲ್ಲಿ ಹೋಗಿ ಬಂದಿದ್ದ. ಜೂ.18ರಂದು ಕೆಮ್ಮಿನ ಕಾರಣ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದು, ಅಲ್ಲಿ ಈತನ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂ.19ರಂದು ಪ್ರಕರಣ ದೃಢಪಟ್ಟಿದೆ.
ಸೋಂಕಿತನನ್ನು ಚಾಮರಾಜನ ಗರದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆತನ ಪ್ರಾಥಮಿಕ ಸಂಪರ್ಕಿತರಾದ ಪತ್ನಿ, ಮೂವರು ಮಕ್ಕಳು ಮತ್ತಿತರರ 10 ಮಂದಿಯನ್ನು ಪ್ರಾಥಮಿಕ ಸೋಂಕಿತರು ನೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಇವರು ವಾಸವಿದ್ದ ಸುತ್ತ ಮುತ್ತಲ ಪ್ರದೇಶವನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ ಎಂದರು.
ಸೋಂಕಿತ ಗುಂಡ್ಲುಪೇಟೆಯಲ್ಲಿ ಓಡಾಡಿರುವ ಸ್ಥಳಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ. ನಿರ್ಬಂಧಿತ ವಲಯದಲ್ಲಿ ಎಲ್ಲ ಮೂಲ ಸೌಕರ್ಯ, ದಿನಬಳಕೆ ವಸ್ತುಗಳು, ಔಷಧಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತೇವೆ. ಕಂಟೈನ್ಮೆಂಟ್ ವಲಯ ದಲ್ಲಿರುವವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಎಸ್ಪಿ ಆನಂದಕುಮಾರ್ ಇದ್ದರು.
ಓರ್ವ ವಿದ್ಯಾರ್ಥಿ ಗುಣಮುಖ: ಮುಂಬೈನಿಂದ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿ ಕೋವಿಡ್ನಿಂದ ಗುಣ ಮುಖನಾಗಿ ಜಕ್ಕಳ್ಳಿಯ ತಮ್ಮ ಬಂಧು ವಿನ ಮನೆಗೆ ಹೋಗಿ ದ್ದಾರೆ. 14 ದಿನ ಕ್ವಾರಂಟೈನ್ ಮುಗಿಸಿದ ನಂತರ ಮುಂಬೈಗೆ ಕಳುಹಿಸಿಕೊಡಲಾಗುವುದು ಎಂದು ಡಾ. ರವಿ ತಿಳಿಸಿದರು.