ಕಾಡಂಚಿನ ಗ್ರಾಮಗಳ ಸಮಸ್ಯೆ ಆಲಿಸಿದ ಸಚಿವರು
Team Udayavani, Oct 4, 2020, 12:47 PM IST
ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಸುತ್ತಮುತ್ತಲ ಕಾಡಂಚಿನ ಗ್ರಾಮಗಳಾದ ಮೆದಗನಾಣೆ, ಇಂಡಿಗನತ್ತ ಮತ್ತು ತುಳಸಿಕೆರೆ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ಕುಮಾರ್ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಮೆದಗನಾಣೆ ಗ್ರಾಮದ ಸಾರ್ವಜನಿಕರು ರಸ್ತೆ, ಚರಂಡಿ ವಿದ್ಯುತ್ಸಮಸ್ಯೆ, ಪಡಿತರ ಹೊತ್ತು ತರಲು ಇರುವ ಸಮಸ್ಯೆ, ಮಕ್ಕಳ ಶಿಕ್ಷಣದ ಬಗೆಗಿನ ತೊಡಕುಗಳ ಬಗ್ಗೆ ದೂರುಗಳ ಸುರಿಮಳೆಗೈದರು. ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್ಕುಮಾರ್, ಆದ್ಯತೆ ಮೇರೆಗೆ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.
ಕೆಲ ಬೇಡಗಂಪಣರು ತಮಗೆ ಹಿಂದಿನಸರ್ಕಾರದ ಅವಧಿಯಲ್ಲಿ ಶಾಸಕ ನರೇಂದ್ರ ಅವರು ರಾಜೀವ್ ಗಾಂಧಿ ವಸತಿ ನಿಗಮದಿಂದ 1880 ಮನೆ ಮಂಜೂರು ಮಾಡಿಸಿದ್ದರು. ಆದರೆ, ಮನೆ ಪೂರ್ಣಗೊಂಡಿದ್ದರೂ ಅನುದಾನ ಬಿಡುಗಡೆಯಾಗಿಲ್ಲ ಎಂದು ಅಳಲು ತೋಡಿಕೊಂಡರು.
ಸ್ಥಳದಲ್ಲಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮತ್ತು ತಾಪಂ ಇಒ ಅವರನ್ನು ಕರೆದ ಸಚಿವರು, “ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಅನುದಾನ ಬಿಡುಗಡೆ ಮಾಡಲಕ್ರಮವಹಿಸಿ’ ಎಂದು ಸೂಚಿಸಿದರು. ಕೆಲ ಗ್ರಾಮಸ್ಥರು ತಮಗೆ ಉದ್ಯೋಗವಿಲ್ಲದ ಬಗ್ಗೆ ಅಹವಾಲು ನೀಡಿದಾಗ, ನರೇಗಾ ಯೊಜನೆಯಡಿ ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಉದ್ಯೋಗ ಕಲ್ಪಿಸಿಕೊಡುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.