ಪ್ರಸಾದಕ್ಕೂ ವಿಷ ಬೆರಕೆ: 11 ಸಾವು
Team Udayavani, Dec 15, 2018, 6:26 AM IST
ಚಾಮರಾಜನಗರ/ಹನೂರು: ದೇಗುಲದ ಪ್ರಸಾದದಲ್ಲೂ ವಿಷಬೆರಕೆ ಮಾಡಿ 11 ಮಂದಿಯನ್ನು ಬಲಿತೆಗೆದುಕೊಂಡ ಅಮಾನವೀಯ ಘಟನೆ ಇಲ್ಲಿನ ಮಾರ್ಟಳ್ಳಿ ಬಳಿಯಿರುವ ಸುಳುವಾಡಿಯ ಕಿಚ್ಕುತ್ ಮಾರಮ್ಮನ ದೇವಾಲಯದಲ್ಲಿ ಶುಕ್ರವಾರ ನಡೆದಿದೆ. ಆಹಾರ ಸೇವನೆ ಮಾಡಿರುವ 70ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಚಾಮರಾಜನಗರ, ಮೈಸೂರು ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ಗುಂಪುಗಳ ನಡುವಿನ ವೈಮನಸ್ಸಿನಿಂದಾಗಿ ಒಂದು ಗುಂಪು ಆಹಾರದಲ್ಲಿ ವಿಷ ಬೆರೆಸಿರುವ ಶಂಕೆ ವ್ಯಕ್ತವಾಗಿದೆ. ಮೃತರನ್ನು ಶಾಂತರಾಜು(42), ಗೋಪಿಯಮ್ಮ (38), ಅನಿತಾ (12), ದೊಡ್ಡಾಣೆ ಗ್ರಾಮದ ಅಣ್ಣಯ್ಯಪ್ಪ (60) ಮತ್ತು ಎಂ.ಜಿ. ದೊಡ್ಡಿ ಗ್ರಾಮದ ಪಾಪಣ್ಣ (50), ದೊಡ್ಡ ಮಾದಯ್ಯ(65), ರಾಚಯ್ಯ(55), ಕೃಷ್ಣನಾಯ್ಕ (45), ಶಿವು(32), ಶಕ್ತಿವೇಲು (28) ಮತ್ತು ಪ್ರೀತಮ್(9) ಮೃತಪಟ್ಟವರು. ಇನ್ನುಳಿದಂತೆ ಬಿದರಹಳ್ಳಿ, ಮಹದೇಶ್ವರ ಬೆಟ್ಟ, ವಡಕೆಹಳ್ಳ, ರಾಮಾಪುರ, ಎಲ್ಲೆಮಾಳ ಮತ್ತಿತರ ಗ್ರಾಮಗಳ 70ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಈ ಪೈಕಿ 12 ಮಂದಿ ತೀವ್ರ ಅಸ್ವಸ್ಥರಾಗಿದ್ದು ಕಾಮಗೆರೆಯ
ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಮಗೆರೆಯ ಆಸ್ಪತ್ರೆಯಲ್ಲಿ 35, ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ 40 ಕ್ಕೂ ಹೆಚ್ಚು ಮಂದಿ ಹಾಗೂ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನಾಯ್ತು?: ಶುಕ್ರವಾರ ಸುಳುವಾಡಿ ಗ್ರಾಮದ ಕಿಚ್ ಕುತ್ ಮಾರಮ್ಮ ದೇವಸ್ಥಾನದಲ್ಲಿ ಗೋಪುರ ನಿರ್ಮಾಣ ಹಾಗೂ ಸುತ್ತುಗೋಡೆ ನಿರ್ಮಾಣಕ್ಕೆ ಭೂಮಿಪೂಜೆ ಏರ್ಪಡಿಸಲಾ ಗಿತ್ತು. ಪೂಜೆಯ ಬಳಿಕ ಅನ್ನಸಂತರ್ಪಣೆಗಾಗಿ ವೆಜಿಟೇಬಲ್ ಬಾತ್ ತಯಾರಿಸಲಾಗಿತ್ತು. ಈ ಸಂದರ್ಭದಲ್ಲಿ ಸೇರಿದ್ದ 70ಕ್ಕೂ ಹೆಚ್ಚು ಜನ ಆಹಾರ ಸೇವಿಸಿದ್ದಾರೆ. ಕೆಲವರು ದೇವಾಲಯದ ಸಮೀಪವೇ ತಲೆಸುತ್ತು ಬಂದು ವಾಂತಿ ಮಾಡಿಕೊಂಡಿದ್ದಾರೆ. ಇನ್ನು ಕೆಲವರಿಗೆ ತಂತಮ್ಮ ಗ್ರಾಮಗಳಿಗೆ ಹಿಂದಿರುಗಿದ ಬಳಿಕ ವಾಂತಿ ಕಾಣಿಸಿಕೊಂಡಿದೆ.
ಈ ಮಧ್ಯೆ ಚೆನ್ನೈಗೆ ತೆರಳಿದ್ದ ಸಿಎಂ ಕುಮಾರಸ್ವಾಮಿ ಮೈಸೂರಿಗೆ ತೆರಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಆರೋಗ್ಯ ವಿಚಾರಿಸಿದರು.
ಆಹಾರಕ್ಕೆ ಕೀಟನಾಶಕ ಬೆರೆಸಿರುವ ಶಂಕೆ
ಸುಳುವಾಡಿಯ ಕಿಚ್ಕುತ್ ಮಾರಮ್ಮ ದೇವಸ್ಥಾನ ಚಿಕ್ಕದಾಗಿದ್ದು, ನೂತನ ಗೋಪುರ ಹಾಗೂ ಸುತ್ತುಗೋಡೆ ನಿರ್ಮಾಣ ವಿಚಾರದಲ್ಲಿ ಗ್ರಾಮದ ಎರಡು ಗುಂಪುಗಳ ನಡುವೆಯೇ ವೈಮನಸ್ಸಿತ್ತು ಎನ್ನಲಾಗಿದೆ. ಈ ವೈಷಮ್ಯವೇ ಆಹಾರದಲ್ಲಿ ವಿಷ ಬೆರೆಸಲು ಕಾರಣವಾಗಿದೆಯೇ ಎಂಬ ಸಂದೇಹ ಮೂಡಿದೆ. ಇದಕ್ಕೆ ಪೂರಕವೆಂಬಂತೆ ಮೈಸೂರಿನ ಕೆ.ಆರ್.ಆಸ್ಪತ್ರೆ ವೈದ್ಯರೂ ಕೀಟನಾಶಕ ಬೆರಕೆಯಾಗಿರುವ ಶಂಕೆ ಇದೆ ಎಂದಿದ್ದಾರೆ. ಅಸ್ವಸ್ಥರ ರೋಗ ಲಕ್ಷಣವನ್ನು ನೋಡಿದಾಗ ಆಹಾರದಲ್ಲಿ ಆರ್ಗನೋ ಫಾಸ್ಪರಸ್ ಎಂಬ
ಕೀಟನಾಶಕದ ಅಂಶ ಬೆರೆತಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅಸ್ವಸ್ಥರ ವಾಂತಿಯ ಸ್ಯಾಂಪಲ್ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಿದ್ದು, ಅಲ್ಲಿಂದ ವರದಿ ಬಂದ ನಂತರವಷ್ಟೇ ನಿಖರ ಕಾರಣ ತಿಳಿದು ಬರಲಿದೆ ಎಂದು
ಕೆ.ಆರ್.ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ರಮೇಶ್ ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಸಾದ್ ಸಹ ವಿಷ ಬೆರೆತಿರುವ ಬಗ್ಗೆ ಶಂಕಿಸಿದ್ದಾರೆ. ಅನೈರ್ಮಲ್ಯ ಅಥವಾ ಕಲಾಯಿಯಿಲ್ಲದ ತಾಮ್ರದ ಪಾತ್ರೆಯಲ್ಲಿ ಆಹಾರ ತಯಾರಿಸಿ ಅದರಿಂದ ವಿಷಾಹಾರವಾಗಿದ್ದರೆ ಇಷ್ಟೊಂದು ಪ್ರಮಾಣದ ಸಾವುನೋವು ಸಂಭವಿಸುತ್ತಿರಲಿಲ್ಲ. ಆಹಾರದಲ್ಲಿ ಕ್ರಿಮಿನಾಶಕ ಬೆರೆಸಿರಬಹುದು ಎಂಬ ಸಂಶಯವಿದೆ ಎಂದಿದ್ದಾರೆ.
50 ಕಾಗೆಗಳ ಸಾವು
ವಿಷಾಹಾರ ಸೇವಿಸಿ ಮನುಷ್ಯರಷ್ಟೇ ಅಲ್ಲ, 50 ಕಾಗೆಗಳೂ ಸಾವನ್ನಪ್ಪಿವೆ. ಜನ ಊಟ ಮಾಡಿ ಬಿಟ್ಟದ್ದನ್ನು ಸೇವಿಸಿದ್ದ ಕಾಗೆಗಳು ಕೂಡ ಸ್ಥಳದಲ್ಲೇ ಸತ್ತು ಬಿದ್ದಿವೆ. ಘಟನೆ ಯಿಂದ ಆಘಾತಕ್ಕೊಳಗಾದ ಜನರು ದೇವಾಲ ಯದ ಸಮೀಪ ಹೋಗಿ ನೋಡಿದಾಗ ಸಾಮೂಹಿಕವಾಗಿ 50ಕ್ಕೂ ಹೆಚ್ಚು ಕಾಗೆಗಳು ಸತ್ತುಬಿದ್ದಿರುವುದು ಕಂಡು ಬಂದಿದೆ. ಅಲ್ಲದೆ ಎಲೆಯಲ್ಲುಳಿದಿದ್ದ ಅರೆಬರೆ ಆಹಾರ
ಸೇವಿಸಿದ ನಾಯಿಗಳು ಸಹ ಅಸ್ವಸ್ಥಗೊಂಡಿವೆ.
ನಾಡದೇವತೆ ಮುನಿದಳೇ?
ಯದುವಂಶದ ಕುಲದೇವತೆ ಚಾಮುಂಡಿ ಬೆಟ್ಟದ ಶ್ರೀಚಾಮುಂಡೇಶ್ವರಿ ಅಮ್ಮನವರ ಹಾಗೂ ಸಮೂಹ ದೇವಸ್ಥಾನಗಳ ಅರ್ಚಕರು ಸೇರಿದಂತೆ ನೌಕರ ವರ್ಗ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿ ಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದ್ದರಿಂದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಡದೇವತೆ ಚಾಮುಂಡೇಶ್ವರಿ ತಾಯಿಗೆ ಶುಕ್ರವಾರ ಪೂಜೆ, ಪುನಸ್ಕಾರ, ನೈವೇದ್ಯ
ಸಮರ್ಪಣೆ ಸೇರಿದಂತೆ ಎಂದಿನ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಲಿಲ್ಲ. ಇದರಿಂದ ಅಮ್ಮ ಮುನಿದ ಕಾರಣ ಈ ದುರಂತ ಸಂಭವಿಸಿತೆ ಎಂಬುದು ಕೂಡ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಇಬ್ಬರು ವಶಕ್ಕೆ
ಪ್ರಕರಣ ಸಂಬಂಧ ರಾಮಾಪುರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಚಿನ್ನಪ್ಪಿ ಮತ್ತು ಮಾದೇಶ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಚಿನ್ನಪ್ಪಿ ಎಂಬಾತ ಕಿಚ್ಕುತ್ ಮಾರಮ್ಮನ ದೇವಾಲಯದ ಮುಖ್ಯಸ್ಥನಾಗಿದ್ದಾನೆ. ಕಳೆದ ನಾಲ್ಕು ದಿನಗಳ ಹಿಂದೆ ದೇವಾಲಯದ ಗೋಪುರ ನಿರ್ಮಾಣ ಸ್ಥಳದ ಜಮೀನಿನ ವಿಚಾರಕ್ಕೆ
ಸಂಬಂಧಿಸಿದಂತೆ ಚಿನ್ನಪ್ಪಿ ಮತ್ತು ಮಾದೇಶನ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಇಂದಿನ ವಿಷಾಹಾರ ಪ್ರಕರಣಕ್ಕೂ ಈ ಗಲಾಟೆಗೆ ಯಾವುದಾದರೂ ಸಂಬಂಧವಿದೆಯೇ ಎಂಬುದನ್ನು ತಿಳಿಯಲು ಈ ಇಬ್ಬರನ್ನೂ ರಾಮಾಪುರ ಪೊಲೀಸರು ವಶಕ್ಕೆ ಪಡೆದು
ವಿಚಾರಣೆಗೊಳಪಡಿಸಿದ್ದಾರೆ.
ಐದು ಲಕ್ಷ ಪರಿಹಾರ
ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಸಂಜೆ ಚೆನ್ನೈನಿಂದ ಮೈಸೂರಿಗೆ ವಿಶೇಷ ವಿಮಾನದಲ್ಲಿ ಬಂದು, ವಿಮಾನ ನಿಲ್ದಾಣದಲ್ಲಿಯೇ ಚಾಮರಾಜನಗರ ಜಿಲ್ಲೆಯ ಸುಳುವಾಡಿ ಗ್ರಾಮದ ಘಟನೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ತಕ್ಷಣವೇ ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿ, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದರು. ನಂತರ ಮುಖ್ಯಮಂತ್ರಿಗಳು ಕೆ.ಆರ್. ಆಸ್ಪತ್ರೆ ಹಾಗೂ ಜೆಎಸ್ ಎಸ್ಆಸ್ಪತ್ರೆಯಲ್ಲಿ ದಾಖಲಾಗಿರುವ ಅಸ್ವಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಮೈಸೂರಿನಿಂದ 15 ಆ್ಯಂಬುಲೆನ್ಸ್ಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲೂ
ತಕ್ಷಣವೇ ಸೂಚನೆ ನೀಡಿದ್ದರು. ಈ ಘಟನೆಯಲ್ಲಿ ಅಸ್ವಸ್ಥಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವಂತೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ.
ಆಹಾರದ ಮಾದರಿಯನ್ನುಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು. ತನಿಖೆ ನಡೆಸಿ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅಸ್ವಸ್ಥರಾಗಿರುವವರಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಕಾವೇರಿ, ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ