ಇಪ್ಪತ್ತು ದಿನಗಳಿಂದ ಇಪ್ಪತ್ತಕ್ಕೂ ಹೆಚ್ಚು ಜಾನುವಾರುಗಳನ್ನು ಬಲಿ ಪಡೆದಿದ್ದ ಹುಲಿ ಸೆರೆ
Team Udayavani, May 19, 2020, 4:57 PM IST
ಚಾಮರಾಜನಗರ: ಕಳೆದ ಇಪ್ಪತ್ತು ದಿನಗಳಿಂದ ಇಪ್ಪತ್ತಕ್ಕೂ ಹೆಚ್ಚು ಜಾನುವಾರುಗಳನ್ನು ಬಲಿ ಪಡೆದಿದ್ದ ಹುಲಿಯೊಂದನ್ನು ಇಂದು ನಡೆದ ಕಾರ್ಯಾಚರಣೆಯಲ್ಲಿ ಕುಂದಕೆರೆ ಅರಣ್ಯ ವಲಯದಲ್ಲಿ ಸೆರೆ ಹಿಡಿಯಲಾಗಿದೆ.
ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಅರಣ್ಯ ವಲಯದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಸಾಕಾನೆಗಳ ಕಾರ್ಯಾಚರಣೆಯಲ್ಲಿ ಹುಲಿಯನ್ನು ಸೆರೆ ಹಿಡಿಯಲಾಗಿದೆ.
ಇದು ಆರು ವರ್ಷದ ಗಂಡು ಹುಲಿಯಾಗಿದ್ದು, ಕುಂದಕೆರೆ ಗ್ರಾಮ ಸಮೀಪದಲ್ಲಿರುವ ಮಹದೇವಪ್ಪ ಎಂಬುವವರ ಜಮೀನಿನಲ್ಲಿ ಸೆರೆ ಹಿಡಿಯಲಾಗಿದೆ.
ಕಳೆದ ಇಪ್ಪತ್ತಕ್ಕೂ ಹೆಚ್ಚು ದಿನಗಳಿಂದ ಜಾನುವಾರುಗಳನ್ನು ಹಿಡಿದು ತಿನ್ನುತ್ತಿದ್ದ ಈ ಹುಲಿಯನ್ನು ಸೆರೆ ಹಿಡಿದ ಕಾರಣ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕಾರ್ಯಾಚರಣೆ ಕೈಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕುಂದುಕೆರೆ ವಲಯದ ಜಮೀನಿನ ಬಳಿ ಹುಲಿಗೆ ಅರವಳಿಕೆ ನೀಡಿ ಸೆರೆ ಹಿಡಿದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಜಯಪ್ರಕಾಶ, ಪಾರ್ಥ ಸಾರಥಿ ಗಣೇಶ, ರೋಹಿತ ಎಂಬ ಸಾಕಾನೆಗಳನ್ನು ಬಳಸಿಕೊಳ್ಳಲಾಗಿದೆ.