ರೈತರೇ ಬಡ್ಡಿ ಮನ್ನಾ ಯೋಜನೆ ಉಪಯೋಗಿಸಿಕೊಳ್ಳಿ
Team Udayavani, Aug 30, 2020, 12:55 PM IST
ಗುಂಡ್ಲುಪೇಟೆ: ಸಹಕಾರ ಸಂಘಗಳಲ್ಲಿ ಪಡೆದ ಸಾಲದ ಅಸಲು ಪಾವತಿಸುವ ರೈತರಿಗೆ ಸಂಪೂರ್ಣ ಬಡ್ಡಿ ಮನ್ನಾ ಯೋಜನೆ ಉಪಯೋಗಿಸಿಕೊಳ್ಳ ಬೇಕು ಎಂದು ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಸಿ.ಎಸ್. ನಿರಂಜನಕುಮಾರ್ ಹೇಳಿದರು.
ಪಟ್ಟಣದ ಪಿಕಾರ್ಡ್ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಿಸಿ ಮಾತನಾಡಿ, ಇನ್ನು ಮುಂದೆ ಸಹಕಾರ ಸಂಘಗಳಲ್ಲಿ ಪಡೆದ ಸಾಲ ಮನ್ನಾ ಸಾಧ್ಯವಿಲ್ಲ. ರೈತರು ಸಾಲ ಮರುಪಾವತಿಸದೆ ಹೊಸ ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ನಮ್ಮ ತಾಲೂಕಿನಲ್ಲಿ ಶೇ.55ರಷ್ಟು ಮಾತ್ರ ಸಾಲ ಮರು ಪಾವತಿ ಯಾಗಿದೆ. ಉಳಿಕೆ ಶೇ.45ರಷ್ಟು ಸಾಲ ಬಾಕಿ ಇದೆ. ಹೀಗೆ ಮರು ಪಾವತಿಯಾಗದೇ ಇದ್ದರೆ ಸಹಕಾರ ಸಂಘಗಳಿಗೆ ತೊಂದರೆಯಾಗಲಿದೆ. ಇದರಿಂದ ಈಗಾಗಲೇ ಹಲವು ಸಹಕಾರ ಸಂಘಗಳು ವಹಿವಾಟು ನಿಲ್ಲಿಸುವ ಹಂತಕ್ಕೆ ತಲುಪಿವೆ. ಬಿಜೆಪಿ ಸರ್ಕಾರ ಪಿಕಾರ್ಡ್ ಬ್ಯಾಂಕ್ಗಳಲ್ಲಿ ಅಸಲು ಪಾವತಿಸುವ ರೈತರ ಸಂಪೂರ್ಣ ಬಡ್ಡಿ ಮನ್ನಾ ಮಾಡುವ ಮೂಲಕ ರೈತರಿಗೆ ನೆರವಾಗಿದೆ ಎಂದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎನ್.ಮಲ್ಲೇಶ್, ಉಪಾಧ್ಯಕ್ಷೆ ಗೌರಮ್ಮ, ನಿರ್ದೇಶಕರಾದ ಕೊಡಸೋಗೆ ಶಿವಬಸಪ್ಪ, ಎಸ್.ಎಂ. ಮಲ್ಲಿಕಾರ್ಜುನ, ಹೊರೆಯಾಲ ಮಹೇಶ್, ದೇಪಾಪುರ ಶಿವಸ್ವಾಮಿ, ಮಹೇಶ್, ಬಸವಣ್ಣ, ಸಿ.ಜಿ.ನಾಗೇಂದ್ರ, ಶಿವಣ್ಣ, ಬಸವರಾಜು, ಈಶ್ವರಪ್ಪ, ಡಿ.ಎಸ್. ಶಿವಸ್ವಾಮಿ, ಕೂಸಯ್ಯ, ದೇವಮ್ಮ, ಮಹದೇವಪ್ಪ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್, ಮುಖಂಡರಾದ ದೇವಯ್ಯ, ನಂದೀಶ್, ಬಾಬು, ಪ್ರಭಾಕರ್ ಹಾಜರಿದ್ದರು.