ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ: ಯಡಿಯೂರಪ್ಪ
ಬಿಜೆಪಿ ಅಧಿಕಾರಕ್ಕೆ ಬಂದ್ರೆ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಜಾರಿ, ದೇಶದಲ್ಲಿ 300ಕ್ಕೂ ಅಧಿಕ ಸ್ಥಾನದಲ್ಲಿ ಬಿಜೆಪಿಗೆ ಗೆಲುವು
Team Udayavani, Apr 12, 2019, 12:27 PM IST
ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಖರಾಯಪಟ್ಟಣದಲ್ಲಿ ರೋಡ್ ಶೋ ನಡೆಸಿದರು.
ಚಿಕ್ಕಮಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಕ್ಷಣ ಬಯಲುಸೀಮೆಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಲು ಅಯ್ಯನಕೆರೆ ಹಾಗೂ
ಮದಗದಕೆರೆಗೆ ನೀರು ಹರಿಸುವ ಹಾಗೂ ಶಾಶ್ವತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಪರ ಸಖರಾಯಪಟ್ಟಣದಲ್ಲಿ ರೋಡ್ ಶೋ ನಡೆಸಿ ಚುನಾವಣಾ ಪ್ರಚಾರ ಮಾಡಿದ ನಂತರ ಮಾತನಾಡಿದ ಅವರು, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲಾಗುತ್ತದೆ. ದೇಶಾದ್ಯಂತ ನರೇಂದ್ರ ಮೋದಿ
ಅವರ ಗಾಳಿ ಬೀಸುತ್ತಿದೆ. 300ಕ್ಕೂ ಹೆಚ್ಚು ಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. 2014 ರ ಚುನಾವಣೆಗಿಂತ ಇನ್ನೂ ಉತ್ತಮ ವಾತಾವರಣ ಈ ಚುನಾವಣೆಯಲ್ಲಿ ಬಿಜೆಪಿ ಪರ ಕಂಡು ಬಂದಿದೆ ಎಂದರು.
ಈ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಇನ್ನೊಂದು ವಾರ ಪೂರ್ಣ ಸಮಯವನ್ನು ಪಕ್ಷ ಗೆಲ್ಲಿಸಲು ಮೀಸಲಿಡಬೇಕು. ಜೆಡಿಎಸ್, ಕಾಂಗ್ರೆಸ್
ಕಾರ್ಯಕರ್ತರನ್ನು ಭಿನ್ನಾಭಿಪ್ರಾಯ ಮರೆತು ಅವರಲ್ಲಿಗೆ ಹೋಗಿ ಮೋದಿ ಗೆಲ್ಲಿಸಲು ಬಿಜೆಪಿಗೆ ಮತ ಹಾಕಬೇಕೆಂದು ಮನವೊಲಿಸಬೇಕು. ಪ್ರತಿ ಬೂತ್ನಲ್ಲೂ ಶೇ.90ರಷ್ಟು ಮತ ಚಲಾವಣೆಯಾಗುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.
ಪಕ್ಷದ ಪ್ರಣಾಳಿಕೆಯಲ್ಲಿ ಪ್ರತಿ ರೈತನಿಗೆ ವರ್ಷಕ್ಕೆ 6 ಸಾವಿರ ರೂ.ಗಳನ್ನು ಆತ ಬದುಕಿರುವವರೆಗೆ ನೀಡಲು ನಿರ್ಧರಿಸಲಾಗಿದೆ. 60 ವರ್ಷ ಮೀರಿದ ರೈತನಿಗೆ
ಪಿಂಚಣಿ, ಪಕ್ಕಾ ವಸತಿ ಸೌಲಭ್ಯ ನೀಡುವ ಭರವಸೆ ನೀಡಲಾಗಿದೆ. ರೈತರಿಗೆ ಒಂದು ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ಹಾಗೂ ಶೇ.33ರಷ್ಟು ಸ್ಥಾನಗಳನ್ನು
ಮಹಿಳೆಯರಿಗೆ ಮೀಸಲಿಡಲು ಯೋಚಿಸಲಾಗಿದೆ.
ಪ್ರತಿ ಮನೆಗೆ ಶುದ್ಧ ನೀರು, ಉತ್ತಮ ಗ್ರಾಮೀಣ ರಸ್ತೆ, 60 ಸಾವಿರ ಕಿ.ಮೀ. ಹೆದ್ದಾರಿ ಅಭಿವೃದ್ಧಿ, ಜಮ್ಮು ಕಾಶ್ಮೀರಕ್ಕೆ ನೀಡಿರುವ 370ನೆಯ ವಿಧಿ ರದ್ದತಿ
ಮಾಡುವ ಭರವಸೆಗಳನ್ನು ನೀಡಲಾಗಿದೆ ಎಂದಾಗ, ಸಾರ್ವಜನಿಕರಿಂದ ಕರತಾಡನ ಮುಗಿಲು ಮುಟ್ಟಿತು. ಶಾಸಕ ಸಿ.ಟಿ.ರವಿ ಮಾತನಾಡಿ, ಈ ಬಾರಿ
ನಡೆಯುತ್ತಿರುವ ಚುನಾವಣೆ ದೇಶ ಉಳಿಸುವ ಚುನಾವಣೆ. ಚೋರರು ಮತ್ತು ಚೌಕಿದಾರರ ನಡುವಿನ ಚುನಾವಣೆ, ನರೇಂದ್ರ ಮೋದಿ ಚೌಕಿದಾರರಾದರೆ, ಚೋರರೆಲ್ಲರೂ ಒಂದೆಡೆ ಸೇರಿದ್ದಾರೆ. ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರದ
ನಡುವಿನ ಚುನಾವಣೆ, ನರೇಂದ್ರ ಮೋದಿ ಅತ್ಯಂತ ಪ್ರಾಮಾಣಿಕತೆಯಿಂದ 5 ವರ್ಷ ಆಡಳಿತ ನಡೆಸಿದ್ದಾರೆ. ಮತ್ತೊಂದೆಡೆ ಭ್ರಷ್ಟಾಚಾರಿಗಳೆಲ್ಲರೂ ಒಂದಾಗಿದ್ದಾರೆ.
ರಾಷ್ಟ್ರವಾದ ಮತ್ತು ತುಕಡೆ ಗ್ಯಾಂಗ್ ನಡುವಿನ ಚುನಾವಣೆ. ರಾಷ್ಟ್ರವಾಧವನ್ನು ಅಳವಡಿಸಿಕೊಂಡಿರುವ ಬಿಜೆಪಿ ಒಂದೆಡೆ ನೇತೃತ್ವ ವಹಿಸಿದ್ದರೆ, ಕಾಂಗ್ರೆಸ್ ತುಕಡೆ ಗ್ಯಾಂಗ್ನ ನೇತೃತ್ವ ವಹಿಸಿಕೊಂಡಿದೆ ಎಂದು
ಹೇಳಿದರು. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ
ನನ್ನನ್ನು 26 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದೀರಿ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 40 ಸಾವಿರ ಮತಗಳ ಅಂತರದಿಂದ ಶೋಭ ಕರಂದ್ಲಾಜೆ ಅವರನ್ನು ಗೆಲ್ಲಿಸಬೇಕು. ಆ ಮೂಲಕ ನರೇಂದ್ರ ಮೋದಿ
ಮತ್ತೂಮ್ಮೆ ಪ್ರಧಾನಿಯಾಗುವಂತೆ ಮಾಡಬೇಕೆಂದು ಕರೆ ನೀಡಿದರು.
ಪಟ್ಟಣದ ಕಲ್ಮರಡಿ ಮಠದ ಗೇಟ್ ಮುಂಭಾಗದಿಂದ ಆರಂಭವಾದ ರೋಡ್ಶೋನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಜತೆ ಶಾಸಕರಾದ ಸಿ.ಟಿ.ರವಿ, ಬೆಳ್ಳಿಪ್ರಕಾಶ್, ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಜಿ.ಪಂ. ಸದಸ್ಯರಾದ ಬಿ.ಜೆ. ಸೋಮಶೇಖರಪ್ಪ, ವಿಜಯಕುಮಾರ್, ರವೀಂದ್ರ ಬೆಳವಾಡಿ, ಗ್ರಾಮಾಂತರ ಅಧ್ಯಕ್ಷ ಚಿಕ್ಕದೇವನೂರು ರವಿ, ಶಕ್ತಿ ಕೇಂದ್ರದ ಅಧ್ಯಕ್ಷ ಚಿದಾನಂದ್, ಮುಖಂಡರಾದ
ನಾಗರಾಳು ಚಂದ್ರಣ್ಣ, ದಿನೇಶ್, ನಾಯಕ್ ಕೃಷ್ಣಸ್ವಾಮಿ, ಶ್ರೀನಿವಾಸಗೌಡ ಭಾಗವಹಿಸಿದ್ದರು.
ಮುತ್ತಿಗೆ: ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ರೋಡ್ಶೋನಲ್ಲಿ ನೂರಾರು ಜನ ಕಾರ್ಯಕರ್ತರು ಪಾಲ್ಗೊಂಡಿದ್ದರು. ರೋಡ್
ಶೋ ಸಡಿರಾಯಪಟ್ಟಣದ ಬಸ್ ನಿಲ್ದಾಣದ ಸಮೀಪಕ್ಕೆ ಬಂದಾಗ ಚಿಕ್ಕಮಗಳೂರು ಕಡೆಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ವಿಧಾನ
ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಅವರು ಕಾರಿನಲ್ಲಿ ಬಂದರು. ಗಾಯತ್ರಿ ಶಾಂತೇಗೌಡ ಅವರನ್ನು ನೋಡಿದಾಕ್ಷಣ ಕಾರ್ಯಕರ್ತರು ಮೋದಿ, ಮೋದಿ ಎಂಬ ಘೋಷಣೆ ಕೂಗುತ್ತ ಕಾರನ್ನು ಅಡ್ಡಗಟ್ಟಿ ಮುತ್ತಿಗೆ
ಹಾಕಿದರು. ಆ ಸಂದರ್ಭದಲ್ಲಿ ಕೆಲಕಾಲ ಬಿಜೆಪಿ ಕಾರ್ಯಕರ್ತರು ಹಾಗೂ ಗಾಯತ್ರಿಶಾಂತೇಗೌಡ ಅವರ ನಡುವೆ ಮಾತಿನ ಚಕಮಕಿ ನಡೆಯಿತು.
ಪರಿಸ್ಥಿತಿ ವಿಕೋಪಕ್ಕೆ ಹೋಗುವುದಕ್ಕೂ ಮೊದಲು ಎಚ್ಚೆತ್ತ ಬಿಜೆಪಿ ಮುಖಂಡರು ಹಾಗೂ ಪೊಲೀಸರು ಕಾರ್ಯಕರ್ತರನ್ನು ದೂರಕ್ಕೆ ಕಳುಹಿಸಿ ಗಾಯತ್ರಿ ಶಾಂತೇಗೌಡ ಅವರ ಕಾರನ್ನು ಮುಂದಕ್ಕೆ ಕಳುಹಿಸಿಕೊಟ್ಟರು.
ಪ್ರಚಾರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಪ್ರತಿ ಬಾರಿ ಬಿಜೆಪಿ ರಾಜ್ಯ ಸರ್ಕಾರ ಬೀಳುವುದಕ್ಕೆ
ಮುಹೂರ್ತ ನಿಗದಿ ಮಾಡುತ್ತಿದೆ. ಈಗ ಮತ್ತೂಮ್ಮೆ ನಿಗದಿ ಮಾಡಲು
ಮುಂದಾಗುವಿರಾ ಎಂಬ ಪ್ರಶ್ನೆ ಮುಂದಿಟ್ಟಾಗ, ಈ ಬಾರಿ ನಾವೇನೂ ಮುಹೂರ್ತ ಇಡಬೇಕಾಗಿಲ್ಲ. ರಾಜ್ಯದಲ್ಲಿ 22 ಸ್ಥಾನಗಳಲ್ಲಿ
ಬಿಜೆಪಿ ಗೆಲುವು ಶೇ.100ರಷ್ಟು ಖಚಿತ. ದೇಶದಲ್ಲಿ 300 ಸ್ಥಾನ ಪಡೆಯುವುದು ನಿಶ್ಚಿತ. ಹಾಗಾಗಿ ಚುನಾವಣಾ ಫಲಿತಾಂಶ ಬಂದಾಕ್ಷಣ ಕಾಂಗ್ರೆಸ್-ಜೆಡಿಎಸ್ ನಡುವೆ ಭಿನ್ನಮತ ಉಲ್ಬಣಗೊಂಡು ರಾಜಕೀಯ ಏರುಪೇರು ಉಂಟಾಗಿ ಸರ್ಕಾರ ಬೀಳುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
MUST WATCH
ಹೊಸ ಸೇರ್ಪಡೆ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ