ಕಾನೂನು ಅರಿವಿನಿಂದ ಸ್ವಸ್ಥ ಸಮಾಜ ನಿರ್ಮಾಣ
Team Udayavani, Nov 3, 2019, 3:00 AM IST
ಚಿಕ್ಕಬಳ್ಳಾಪುರ: ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಮ್ಮದಿ ಕಾಪಾಡಲು ಸಮಾಜದ ಕಟ್ಟ ಕಡೆಯ ನಾಗರಿಕನಿಗೂ ಕಾನೂನು ಅರಿವು ಮೂಡಿಸುವುದು ಅಗತ್ಯ. ಕಾನೂನು ತಿಳುವಳಿಕೆ ಮೂಡಿಸದೇ ನಾವು ಉತ್ತಮ ನಾಗರಿಕ ಸಮಾಜ ನಿರೀಕ್ಷಿಸುವುದು ಅಸಾಧ್ಯ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಸ್.ಹೆಚ್.ಕೋರಡ್ಡಿ ತಿಳಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಶನಿವಾರ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಹೊಸದಾಗಿ ನೇಮಕಗೊಂಡ ಪ್ಯಾನಲ್ ವಕೀಲರಿಗೆ ಆಯೋಜಿಸಲಾಗಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಧಃಪತನ: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಮಾನವೀಯ ಹಾಗೂ ನೈತಿಕ ಮೌಲ್ಯಗಳು ಕುಸಿಯುತ್ತಿರುವುದರಿಂದ ಸಮಾಜ ಅಧಃಪತನದತ್ತ ಸಾಗಿದೆ. ಆದ್ದರಿಂದ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕಾನೂನು ಅರಿವು ಅಗತ್ಯವಾಗಿದೆ ಎಂದರು.
ಕಡಿಮೆ ಖರ್ಚಿನಲ್ಲಿ ನ್ಯಾಯ: ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣ ಮಾಡಬೇಕಾದರೆ ಅಪರಾಧಗಳನ್ನು ತಡೆಯಬೇಕಾದರೆ ಕಾನೂನು ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಪ್ಯಾನಲ್ ವಕೀಲರು, ನಾಗರಿಕರಿಗೆ ಕಾನೂನು ಬಗ್ಗೆ ಅರಿವು ಮೂಡಿಸಬೇಕು. ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆ ಮಾಡಲು ಜನತಾ ಲೋಕ ಅದಾಲತ್ ಮೂಲಕ ಜನತಾ ನ್ಯಾಯಾಲಯಗಳನ್ನು ನಡೆಸುತ್ತಿದೆ. ಇದರಿಂದ ಜನರಿಗೆ ತ್ವರಿತಗತಿಯಲ್ಲಿ ಕಡಿಮೆ ಖರ್ಚಿನಲ್ಲಿ ನ್ಯಾಯ ಸಿಗುತ್ತದೆ ಎಂದು ಸಲಹೆ ನೀಡಿದರು.
ಗ್ರಂಥಾಲಯ, ಇ-ಲೈಬ್ರರಿ: ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ ಮಾತನಾಡಿ, ಕಾನೂನು ಪರದಿ ತುಂಬ ವಿಸ್ತಾರ ಹಾಗೂ ಸಂಕೀರ್ಣವಾದದ್ದು. ಎಷ್ಟೇ ಅಧ್ಯಯನ ಮಾಡಿದರೂ ಕಾನೂನು ವ್ಯಾಪ್ತಿ ವಿಶಾಲವಾಗಿರುತ್ತದೆ. ಆದ್ದರಿಂದ ಕಿರಿಯ ವಕೀಲರು ನಿರಂತರವಾಗಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ವಕೀಲರ ಸಂಘ ವೃತ್ತಿಗೆ ಬರುವ ವಕೀಲರಿಗ ಎಲ್ಲಾ ರೀತಿಯ ಸೌಕರ್ಯಗಳನ್ನು ಸಂಘದ ವತಿಯಿಂದ ಕಲ್ಪಿಸಲಾಗುತ್ತಿದೆ.
ವಿಶೇಷವಾಗಿ ಗ್ರಂಥಾಲಯ ಹಾಗೂ ಇ-ಲೈಬ್ರರಿ ಸಹ ತೆರೆಯಲಾಗಿದ್ದು, ಅಧ್ಯಯನಕ್ಕೆ ಹೆಚ್ಚಿನ ಒತ್ತು ಕೊಡಬೇಕೆಂದರು. ಕಾರ್ಯಾಗಾರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ದೇವರಾಜ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವಿನೋದ್ ಕುಮಾರ್, ವಕೀಲರ ಸಂಘದ ಪದಾಧಿಕಾರಿಗಳಾದ ಸುರೇಶ್ ಬಾಬು, ಹರಿಕೃಷ್ಣ ಸೇರಿದಂತೆ ಪ್ಯಾನಲ್ ವಕೀಲರು ಉಪಸ್ಥಿತರಿದ್ದರು.
ವಕೀಲರಿಗೆ ವಿಶೇಷ ಉಪನ್ಯಾಸ: ಮೊದಲ ದಿನದ ಕಾರ್ಯಾಗಾರದಲ್ಲಿ ಬೆಂಗಳೂರು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎ.ಎಸ್.ಆಂಟಿನ್, ಹಿಂದೂ ವಿವಾಹ ಕಾಯ್ದೆ ಹಾಗೂ ಹಿಂದೂ ಉತ್ತರಾಧಿಕಾರದ ಕಾಯ್ದೆ ಕುರಿತು ಹಾಗೂ ಎಸ್.ಆರ್.ಸೋಮಶೇಖರ್, ಭಾರತೀಯ ಸಾಕ್ಷ ಅಧಿನಿಯಮ ಹಾಗೂ ಪೋಕೊÕà ಕಾಯ್ದೆ ಕುರಿತು ಪ್ಯಾನಲ್ ವಕೀಲರಿಗೆ ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಯಿತು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಸುಮಾರು 30 ಕ್ಕೂ ಹೆಚ್ಚು ವಕೀಲರು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.
ವಕೀಲರಿಗೆ ಸಮಾಜದ ಆಗು ಹೋಗಗಳ ಬಗ್ಗೆ ಚಿಂತನೆ ಇರಬೇಕಿದೆ. ಪ್ರಸ್ತುತ ಸಮಾಜ ಸಮಸ್ಯೆ, ಸವಾಲುಗಳಿಗೂ ಪರಿಹಾರಕ್ಕೆ ವಕೀಲರು ಹುಡುಕಾಟ ನಡೆಸಬೇಕು. ಹುಟ್ಟಿನಿಂದ ಸಾವಿನವರೆಗೂ ಪ್ರತಿಯೊಬ್ಬರು ಕಾನೂನು ಪರಧಿಯಲ್ಲಿ ಇರುವುದರಿಂದ ಕಾನೂನನ್ನು ನಾವು ಬಿಟ್ಟರೂ ಅದು ನಮ್ಮನ್ನು ಬಿಡುವುದಿಲ್ಲ. ಪ್ಯಾನಲ್ ವಕೀಲರು ತಮ್ಮ ವೃತ್ತಿ ಘನತೆಯನ್ನು ಎತ್ತಿಹಿಡಿದು ಕಾರ್ಯ ನಿರ್ವಹಿಸಬೇಕು.
-ಎ.ಎಸ್.ಆಂಟಿನ್, ನಿವೃತ್ತ ನ್ಯಾಯಾಧೀಶ, ಬೆಂಗಳೂರು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls; ಮೊಯ್ಲಿ ಕೊನೇ ಚುನಾವಣೆ ಅಸ್ತ್ರದಿಂದ ಚಿಕ್ಕಬಳ್ಳಾಪುರ ಟಿಕೆಟ್ ಕಗ್ಗಂಟು
Gruha Jyothi scheme: ಗೃಹಜ್ಯೋತಿ ಗ್ರಾಹಕರ ಜೇಬಿಗೆ ಕತ್ತರಿ!
Chikaballapura: ಲೋಕ ಸಮರ ಹೊತ್ತಲ್ಲೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ
Hot meal: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ಬಿಸಿಯೂಟ
Chikballapur; ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕ್ಷೇತ್ರ ಕಳೆದ ಬಾರಿ ಬಿಜೆಪಿ ವಶ