ಆಂಧ್ರ ಮಹಿಳೆಗೆ 75 ಲಕ್ಷ ರೂ.ವಂಚನೆ, ಹಲ್ಲೆ : ರೈಸ್ ಮಿಲ್ ಮಾಲೀಕನ ವಿರುದ್ಧ ಮಹಿಳೆ ಆರೋಪ
Team Udayavani, Jan 19, 2021, 1:05 PM IST
ಚಿಂತಾಮಣಿ: ರೈಸ್ ಮಿಲ್ಗೆ ಭತ್ತ ಸರಬರಾಜು ಮಾಡಿರುವ ಹಣ ಕೇಳಿದ್ದಕ್ಕೆ, ರೈಸ್ ಮಿಲ್ ಮಾಲೀಕ ಹಾಗೂ ಆತನ ಸಹಚರರು ಆಂಧ್ರದ ಕರ್ನೂಲ್ ಮಹಿಳೆ ಹಾಗೂ ಆಕೆಯ ಸಂಬಂಧಿಕರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿ ಜಾತಿ ನಿಂದನೆ, ಕೊಲೆ ಬೆದರಿಕೆ ಹಾಕಿರುವ ಆರೋಪ ಬಟ್ಲಹಳ್ಳಿ ಠಾಣೆ ವ್ಯಾಪ್ತಿಯ ಯಗವಕೋಟೆ ಗ್ರಾಮದಲ್ಲಿ ಶನಿವಾರ ವರದಿಯಾಗಿದೆ.
75 ಲಕ್ಷ ರೂ. ಬಾಕಿ: 2020 ಏಪ್ರೀಲ್ 18ರಿಂದ 25 ರ ತನಕ ಕರ್ನೂಲ್ ಜಿಲ್ಲೆಯ ಮೀನಾಕ್ಷಿ ಎಂಬ ಭತ್ತ ವ್ಯಾಪಾರದ ಮಹಿಳೆ
ಚಿಂತಾಮಣಿ ತಾಲೂಕು ಮುರುಗಮಲ್ಲ ಹೋಬಳಿ ಯಗವಕೋಟೆಯಲ್ಲಿನ ಮಹಾಲಕ್ಷ್ಮೀ ರೈಸ್ ಮಿಲ್ನ ಮಾಲೀಕ ರಮೇಶ್ ಎಂಬುವವರಿಗೆ 18 ಲೋಡ್ ಭತ್ತ ಸರಬರಾಜು ಮಾಡಿದ್ದು, ರೈಸ್ ಮಿಲ್ ಮಾಲೀಕ ರಮೇಶ್ ರವರು 40 ಲಕ್ಷ ರೂ. ಸಂದಾಯ ಮಾಡಿದ್ದು, ಉಳಿದ 75 ಲಕ್ಷ ಕೋವಿಡ್ ನಿಂದಾಗಿ ತಡವಾಗಿ ಕೊಡುವುದಾಗಿ ಬಾಕಿ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ನಿಂದನೆ ಆರೋಪ: ಮೀನಾಕ್ಷಿ ಅವರಿಗೆ ಭತ್ತ ಮಾರಿದ್ದ ರೈತರು ಹಣಕ್ಕಾಗಿ ಪೀಡಿಸುತ್ತಿದ್ದರಿಂದ ರೈಸ್ ಮಿಲ್ ಮಾಲೀಕ ರಮೇಶ್
ಬಳಿ ಬಾಕಿ ಹಣ ಕೇಳಿದ್ದು, ಈ ವೇಳೆ ಮಾಲೀಕ ಯಾವುದೇ ಹಣ ನೀಡಬೇಕಾಗಿಲ್ಲ ಎಂದಿದ್ದಾರೆ ಹಾಗೂ ಅವಾಚ್ಯ ಶಬ್ದಗಳಿಂದ
ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಸ್ವಚ್ಛ ಸರ್ವೇಕ್ಷಣ್; ನಂ.1 ಸ್ಥಾನಕ್ಕೆ ಪಾಲಿಕೆ ಪಣ : ಜಾಗೃತಿ ಮೂಡಿಸಲು ಸಿದ್ಧತೆ
ಮೀನಾಕ್ಷಿ ಹಾಗೂ ಸಂಬಂಧಿಕರು ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಬಟ್ಲಹಳ್ಳಿ ಪೊಲೀಸರು ಹಾಗೂ ಚಿಂತಾಮಣಿ ಗ್ರಾಮಾಂತರ ಠಾಣೆಯ ಆರಕ್ಷಕ ವೃತ್ತ ನಿರೀಕ್ಷಕರ ಗಮನಕ್ಕೆ ತಂದು ದೂರು ನೀಡಿದರೂ ಪ್ರಯೋಜನವಾಗಿಲ್ಲ.
ಸೋಮವಾರ ಹಲ್ಲೆಗೊಳಗಾದ ಮಹಿಳೆಯ ಕುಟುಂಬ ದವರು ಹಾಗೂ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಕೋಡಿಗಲ್ ರಮೇಶ್ ಹಾಗೂ ಕರ್ನೂಲ್ನ ಕೆಲ ರೈತರು, ಎಸ್ಪಿ ಮಿಥುನ್ ಕುಮಾರ್ ಅವರಿಗೆ ನ್ಯಾಯ ಒದಿಗಿಸುವಂತೆ ದೂರು ನೀಡಿದ್ದು, ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ದಲಿತ ಮಹಿಳೆ ಮೀನಾಕ್ಷಿ ಮಾತನಾಡಿ, ನಮ್ಮ ಮೇಲೆ ಹಲ್ಲೆ ಮಾಡಿರುವವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡು, ನಮಗೆ ಬರಬೇಕಾಗಿರುವ 75 ಲಕ್ಷ ಹಣ ಕೊಡಿಸಬೇಕು. ಇಲ್ಲವಾದಲ್ಲಿ ರೈಸ್ ಮಿಲ್ ಬಳಿಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.