ಡೀಸಿ ಗ್ರಾಮ ವಾಸ್ತವ್ಯ: ಗ್ರಾಮಾಭಿವೃದ್ಧಿ ನಿರೀಕ್ಷೆ
ಬೋದಗೂರಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಪರಿಶೀಲನೆ, ಶಿಥಿಲಾವಸ್ಥೆಯಲ್ಲಿದ್ದ ಸರ್ಕಾರಿ ಶಾಲಾ ಕಟ್ಟಡ ನೆಲಸಮ
Team Udayavani, Feb 20, 2021, 12:52 PM IST
ಚಿಕ್ಕಬಳ್ಳಾಪುರ: ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ದು ಅವರ ಅಹವಾಲು ಪರಿಹರಿಸುವ ಸಲುವಾಗಿ “ಜಿಲ್ಲಾಧಿಕಾರಿಗಳ ನಡೆ, ಗ್ರಾಮಗಳ ಕಡೆ’ ಕಾರ್ಯಕ್ರಮದಡಿ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೋದಗೂರು ಗ್ರಾಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಕೈಗೊಳ್ಳ ಲಾಗಿದೆ. ಈ ಗ್ರಾಮದಲ್ಲಿ ಸೌಕರ್ಯಗಳು ಹೇಗಿವೆ, ಸಮಸ್ಯೆಗಳೇನು, ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ವಿವರ ಹೀಗಿದೆ.
180 ಮನೆ, 834 ಜನಸಂಖ್ಯೆ: ಕಸಬಾ ಹೋಬಳಿ ಆನೂರು ಗ್ರಾಪಂನ ಬೋದಗೂರು ಗ್ರಾಮ ಒಟ್ಟು 634-25 ವಿಸ್ತೀರ್ಣ ಹೊಂದಿದ್ದು, 250-01 ಖರಾಬು ಹಾಗೂ 384-20 ಸಾಗುವಳಿ ವಿಸ್ತೀರ್ಣ, 211 ಖಾತೆದಾರರಿದ್ದಾರೆ. ಪ.ಜಾತಿಯ ಪುರುಷರು 75, ಮಹಿಳೆಯರು 68 ಹಾಗೂ ಪ.ಪಂಗಡದ ಪುರುಷರು 142, ಮಹಿಳೆಯರು 142 ಸೇರಿ ಒಟ್ಟು 834 ಜನ ಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ 30 ಕಚ್ಚಾಮನೆಗಳು, 130 ಪಕ್ಕ ಮನೆಗಳು ಹಾಗೂ 20 ಆಶ್ರಯ ಮನೆಗಳು ಸೇರಿ ಒಟ್ಟು 180 ಮನೆಗಳಿವೆ. ಗ್ರಾಮದಲ್ಲಿ 693 ಮತದಾರರಿದ್ದು, ಎಪಿಎಲ್ 02, ಬಿಪಿಎಲ್ 203, ಅಂತ್ಯೋದಯ 12 ಸೇರಿ ಒಟ್ಟು 217 ಪಡಿತರ ಚೀಟಿ ಹೊಂದಿದ್ದಾರೆ. ಗ್ರಾಮದಲ್ಲಿ 136 ಅತಿ ಸಣ್ಣ, 50 ಸಣ್ಣ ಹಾಗೂ 25 ದೊಡ್ಡ ರೈತರಿದ್ದಾರೆ.
ಸ್ಮಶಾನಕ್ಕೆ ಮಂಜೂರು: ಗ್ರಾಮದ ಸರ್ವೆ ಸಂಖ್ಯೆ 46 ರಲ್ಲಿ 0.23 ಗುಂಟೆ ಸ್ಮಶಾನಕ್ಕೆ ಮಂಜೂರಾಗಿದೆ. ಅದನ್ನು ಪಿಡಿಒ ಅವರಿಗೆ ಹಸ್ತಾಂತರಿಸಲಾಗಿದೆ. ಇನ್ನುಳಿ ದಂತೆ ಸರ್ವೆ ಸಂಖ್ಯೆ 128ರಲ್ಲಿ 2 ಎಕರೆ ಜಾಗ ಎಸ್.ಸಿ/ಎಸ್.ಟಿ ಜನಾಂಗ ಸ್ಮಶಾನಕ್ಕೆ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಬಸ್ ನಿಲ್ದಾಣ ಇಲ್ಲ: ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ, ಆರೋಗ್ಯ ಉಪ ಕೇಂದ್ರಯಿದ್ದು ಮಜಿನರೇಗಾ ಯೋಜನೆಯಡಿ ಸ್ತ್ರೀಶಕ್ತಿ ಭವನ ನಿರ್ಮಿಸಲಾಗಿದೆ. ಇದು ಹೊರತುಪಡಿಸಿ ಬ್ಯಾಂಕ್, ಅಂಚೆ, ಬಸ್ ನಿಲ್ದಾಣ ಯಾವುದೇ ಸೌಲಭ್ಯ ಇಲ್ಲ ದಾಗಿದ್ದು, ಮುಜರಾಯಿ ಇಲಾಖೆಗೆ ಸೇರಿದ ಆಂಜಿನೇಯಸ್ವಾಮಿ ಹಾಗೂ ಈಶ್ವರ ಮತ್ತು ಶನೇಶ್ವರ ದೇವಾಲಯ ಮಾತ್ರವಿದೆ.
ನಿರೀಕ್ಷೆ: ಗ್ರಾಮ ಲೆಕ್ಕಾಧಿಕಾರಿಗಳು ಕಚೇರಿ, ಕೃಷಿ ಸಹಾಯ ಕರ ವಸತಿಗೃಹ ಹಾಗೂ ಒಂದು ಅಂಗನವಾಡಿ ಕೇಂದ್ರ ಸೌಲಭ್ಯ ಮಾತ್ರ ಹೊಂದಿದೆ. ಒಟ್ಟಾರೆ ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ ಮಾಡಲಿದ್ದಾರೆ ಎಂಬ ಕಾರಣಕ್ಕೆಗ್ರಾಮಸ್ಥರು ಸಹ ಸಂತೋಷವಾಗಿದ್ದು, ನಮ್ಮೂರಿಗೆ ಏನಾದರೂ ಅನುಕೂಲ ಮಾಡಿಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಶಿಥಿಲ ಶಾಲಾ ಕಟ್ಟಡ ನೆಲಸಮ: ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂಬ ಸುದ್ದಿ ಪ್ರಕಟ ಆಗುತ್ತಿದ್ದಂತೆ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದ ಸರ್ಕಾರಿ ಶಾಲಾ ಕಟ್ಟಡವನ್ನುಗ್ರಾಮಸ್ಥರ ಸಹಕಾರದೊಂದಿಗೆ ನೆಲಸಮಗೊಳಿಸಿ ತೆರವುಗೊಳಿಸಿದ್ದಾರೆ.
ಮಜಿನರೇಗಾ ಯೋಜನೆ ಮೂಲಕ ಜಿಲ್ಲೆಯಲ್ಲಿ ವಿವಿಧೆಡೆ ಅನೇಕ ಸೌಲಭ್ಯ ಕಲ್ಪಿಸಲಾಗಿದ್ದು, ಗ್ರಾಮದಲ್ಲಿ ಮಾತ್ರ ಸರ್ಕಾರಿ ಶಾಲೆಗೆ ಭದ್ರ ಕಾಂಪೌಂಡ್-ಪೌಷ್ಟಿಕ ತೋಟ ಭಾಗ್ಯ ಇಲ್ಲದಂತಾಗಿದೆ.
ಅಧಿಕಾರಿಗಳ ಸಾಥ್: ಗ್ರಾಮ ವಾಸ್ತವ್ಯ ಹಿನ್ನೆಲೆ ತಹಶೀಲ್ದಾರ್ ಬಿ.ಎಸ್.ರಾಜೀವ್, ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ಮೂರ್ತಿ, ಸಿಡಿಪಿಒ ನಾಗ ವೇಣಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ವಿ.ಮಂಜುನಾಥ್, ಶ್ರಿನಿವಾಸ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮತ್ತಿ ತರರು ಗ್ರಾಮಸ್ಥರೊಂದಿಗೆ ಸಂಪರ್ಕ ಸಾಧಿಸಿ ಗ್ರಾಮಕ್ಕೆ ಅಗತ್ಯವಾಗಿರುವ ಸೌಲಭ್ಯಗಳ ಕುರಿತುಮಾಹಿತಿ ಸಂಗ್ರಹಿಸಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಹಕ್ಕು ಪತ್ರ ವಿತರಿಸಲು ಸಿದ್ಧತೆ :
ಗ್ರಾಮದಲ್ಲಿ ಒಟ್ಟು 13 ಫವತಿ ಖಾತೆಗಳಿಗೆ ಅರ್ಜಿ ಸ್ವೀಕರಿಸಿ ಈಗಾಗಲೇ 10 ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇನ್ನುಳಿದ 3 ಪ್ರಕರಣ ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿದೆ. ಗ್ರಾಮದಲ್ಲಿ 94ಸಿ ಮತ್ತು 94 ಸಿಸಿ ಮೂಲಕ 309 ಅರ್ಜಿ ಸಲ್ಲಿಸಲಾಗಿದ್ದು, ಫೆ.20 ರಂದು ಹಕ್ಕುಪತ್ರ ವಿತರಿಸಲು ತಾಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ.
ಪ್ರಮಾಣ ಪತ್ರ ವಿತರಣೆ : ಆಶ್ರಯ ಯೋಜನೆಯಡಿ 0.20 ಗುಂಟೆ ಜಮೀನು ಮಂಜೂರು ಮಾಡಲು ಎಲ್ಲಾ ಕ್ರಮ ಕೈಗೊಳ್ಳಲಾಗಿದ್ದು, ಸರ್ವೆ ಕಾರ್ಯ ಸಹ ಪೂರ್ಣಗೊಳಿಸಲಾಗಿದೆ. ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 34 ವಿದ್ಯಾರ್ಥಿಗಳಿಗೆ ಜಾತಿಮತ್ತು ಆದಾಯ ಪ್ರಮಾಣಪತ್ರಗಳುಮಂಜೂರಾಗಿದ್ದು ಅದನ್ನು ವಿತರಿಸಲು ತಯಾರಾಗಿದೆ.
ಒತ್ತುವರಿ ತೆರವು :
ಗ್ರಾಮದಲ್ಲಿ 75.05 ಗುಂಟೆ ಕೆರೆಯ ಸರ್ವೆ ಕಾರ್ಯ ಮಾಡಿ ಒತ್ತುವರಿ ತೆರವುಗೊಳಿಸಿ ಟ್ರಂಚಿಂಗ್ ಮಾಡಿ ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಜೊತೆಗೆ ಗ್ರಾಮದಲ್ಲಿ 2.16 ಗುಂಟೆ ಸರ್ಕಾರಿ ತೋಪಿನಲ್ಲಿ ಒತ್ತುವರಿ ತೆರವುಗೊಳಿಸಿ ಸಂರಕ್ಷಣೆ ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದ ಅಂಗವಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ಪರಿಸರ ಸಂರಕ್ಷಣೆ ಮಾಡಲು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ ಜನಸಾಮಾನ್ಯರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. – ಬಿ.ಎಸ್.ರಾಜೀವ್, ತಹಶೀಲ್ದಾರ್ ಶಿಡ್ಲಘಟ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ