ಜಿಂಕೆ ಬೇಟೆಯಾಡಿದ ವ್ಯಕ್ತಿಯ ಬಂಧನ
Team Udayavani, Jun 12, 2021, 2:52 PM IST
ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ವಲಯದ ಕನ್ನಮಂಗಲ ಗಸ್ತಿನ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡುತ್ತಿದ್ದು ವ್ಯಕ್ತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ನಾರಾಯಣದಾಸರಹಳ್ಳಿಯ ನಿವಾಸಿ ದೇವರಾಜ್(33) ಬಂಧಿತ ಆರೋಪಿ, ಕನ್ನಮಂಗಲ ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಬೇಟೆಯಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಎಸಿಎಫ್ ಶ್ರೀಧರ್ ಹಾಗೂ ಆರ್.ಎಫ್.ಓ ದಿವ್ಯ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಭಾಸ್ಕರ್ಬಾಬು,ಜಯಚಂದ್ರ,ಅರಣ್ಯ ರಕ್ಷಕರಾದ ಕಾಶಿನಾಥ್,ಗೋವಿಂದರಾಜು ಮತ್ತು ಸಂದೀಪ್ ಕಾರ್ಯಚರಣೆ ನಡೆಸಿ ದೇಸಿ ಬಂದೂಕು ಮೂಲಕ ಜಿಂಕೆಯನ್ನು ಬೇಟೆಯಾಡಿದ್ದ ದೇವರಾಜ್ ಎಂಬಾತನನ್ನು ಬಂಧಿಸಿ ಇನ್ನೂ ತಲೆ ಮರೆಸಿಕೊಂಡಿರುವ ಮೂವರು ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಂಡಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ಕನ್ನಮಂಗಲ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಜಿಂಕೆ ಬೇಟೆಯಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಾಜ್ ಎಂಬಾತನನ್ನು ಬಂಧಿಸಿ ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದೆ ಎಂದು ಎಸಿಎಫ್ ಶ್ರೀಧರ್ ತಿಳಿಸಿದ್ದಾರೆ.