ಬೆಲೆ ಕುಸಿತ: ಹೂ ಕೋಸು ನಾಶಪಡಿಸಿದ ರೈತ
Team Udayavani, Mar 5, 2021, 7:21 PM IST
ಚಿಂತಾಮಣಿ: ಹೂ ಕೋಸಿನ ಬೆಲೆ ಮಾರುಕಟ್ಟೆಯಲ್ಲಿ ಕುಸಿತವಾಗಿದ್ದು, ಸಾಲ ಸೋಲ ಮಾಡಿ ಬೆಳೆ ಬೆಳೆಗೆ ಹಾಕಿದ ಬಂಡವಾಳ ಸಹ ಸಿಗದೇ ಮನನೊಂದ ರೈತನೊಬ್ಬ ಉತ್ತಮವಾಗಿದ್ದ ಹೂ ಕೋಸಿನ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ ಘಟನೆ ಚಿಂತಾಮಣಿ ತಾಲೂಕಿನ ಕೋನಪಲ್ಲಿಯಲ್ಲಿ ನಡೆದಿದೆ.
ಬಯಲುಸೀಮೆ ಪ್ರದೇಶಗಳಾದ ಅವಿಭಜಿತ ಕೋಲಾರ ಮತ್ತುಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸುಮಾರು ವರ್ಷಗಳಿಂದ ಉತ್ತಮ ಮಳೆ, ಬೆಳೆ ಇಲ್ಲದೇ ರೈತರು ಸದಾ ಕಾಲ ಸಂಕಷ್ಟಕ್ಕೀಡಾಗುತ್ತಿದ್ದಾರೆ.ಈ ಬಾರಿ ಉತ್ತಮ ಮಳೆಯಾಗಿದ್ದ ಕಾರಣ ಕೆರೆ ಕುಂಟೆ ಹಾಗೂ ಕೊಳವೆ ಬಾವಿಗಳಲ್ಲಿ ಸಿಗುವ ಅಲ್ಪಸ್ವಲ್ಪ ನೀರಿನಿಂದ ಚಿಂತಾಮಣಿ ತಾಲೂಕು ಅಂಬಾಜಿ ದುರ್ಗಾ ಹೋಬಳಿ ಕೋನಪಲ್ಲಿ ಗ್ರಾಮದ ರೈತ ನಾಗೇಶ್ ಎಂಬುವವರು ತಮ್ಮ ಒಂದು ಎಕರೆ ಪ್ರದೇಶದಲ್ಲಿ 60ಸಾವಿರಕ್ಕೂ ಹೆಚ್ಚು ಬಂಡವಾಳ ಹಾಕಿ ಉತ್ತಮವಾಗಿ ಹೂ ಕೋಸು ಬೆಳೆದಿದ್ದರು. ಲಾಕ್ಡೌನ್ ಹಾಗೂ ಕೊರೊನಾ ಕಾರಣಗಳಿಂದ ಮದುವೆ, ಸಮಾರಂಭ ಕಡಿಮೆಯಾಗಿ ನಡೆಯುತ್ತಿರುವ ಕಾರಣದಿಂದ ಹೂ ಕೋಸನ್ನು ಕೇಳುವವರೇ ಇಲ್ಲದೇ ಹಾಗೂ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವ ಕಾರಣದಿಂದ ಮನನೊಂದ ರೈತ ನಾಗೇಶ್, ಹೂಕೋಸನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾರೆ. 60 ಸಾವಿರಕ್ಕೂ ಹೆಚ್ಚು ನಷ್ಟವುಂಟಾಗಿದ್ದು, ಬೆಲೆ ನಷ್ಟ ಪರಿಹಾರ ನೀಡುವಂತೆ ಸರ್ಕಾರ ಹಾಗೂ ಸ್ಥಳೀಯ ಆಡಳಿತಕ್ಕೆ ಒತ್ತಾಯಿಸಿದ್ದಾರೆ.