ಅಂತರ್ಜಲ ಸ್ಥಿತಿ ಅವಲೋಕಿಸಿದ ಕೇಂದ್ರ ಜಲಶಕ್ತಿ ತಂಡ
Team Udayavani, Jul 13, 2019, 3:00 AM IST
ಚಿಕ್ಕಬಳ್ಳಾಪುರ: ದೇಶದಲ್ಲಿ ಜಲ ಸಂರಕ್ಷಣೆ ಆಂದೋಲನವನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ನಿಟ್ಟಿನಲ್ಲಿ ಜಲಶಕ್ತಿ ಅಭಿಯಾನದ ನೋಡಲ್ ಅಧಿಕಾರಿಯಾಗಿರುವ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಪರ ಕಾರ್ಯದರ್ಶಿ ಪಂಕಜ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಕಳೆದ ಎರಡು ದಿನಗಳಿಂದ ಜಿಲ್ಲೆಗೆ ಭೇಟಿ ನೀಡಿ ನೀರಿನ ಸಂರಕ್ಷಣೆ ಪೂರೈಕೆ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚಿಸಿತು.
ಶುಕ್ರವಾರ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಖುದ್ದು ಭೇಟಿ ನೀಡಿ ಕ್ಷೇತ್ರ ಪರಿಶೀಲನೆ ನಡೆಸುವ ಮೂಲಕ ಜಿಲ್ಲೆಯ ಅಂತರ್ಜಲ ಪರಿಸ್ಥಿತಿಯನ್ನು ಅವಲೋಕಿಸಿತು. ಜಿಲ್ಲೆಗೆ ಗುರುವಾರ ಸಂಜೆ ಭೇಟಿ ಕೊಟ್ಟು ಜಿಲ್ಲಾಡಳಿತದೊಂದಿಗೆ ಜಿಲ್ಲೆಯ ಅಂತರ್ಜಲ ಪರಿಸ್ಥಿತಿ ಕುರಿತು ಪ್ರಗತಿ ಪರಾಮರ್ಶೆ ನಡೆಸಿದ್ದ ಪಂಕಜ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ, ಜಿಲ್ಲೆಯ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಗೌರಿಬಿದನೂರು ತಾಲೂಕುಗಳಿಗೆ ಖುದ್ದು ಕ್ಷೇತ್ರ ಭೇಟಿ ನೀಡಿ ಜಿಲ್ಲಾಡಳಿತ ಜಲ ಸಂರಕ್ಷಣೆ ಹಾಗೂ ಅಂತರ್ಜಲ ವೃದ್ಧಿಗೆ ಕೈಗೊಂಡಿರುವ ಕಾಮಗಾರಿಗಳನ್ನು ವೀಕ್ಷಿಸಿದರು.
ಜಿಲ್ಲೆಯಲ್ಲಿ ಎಲ್ಲೆಲ್ಲಿ ಭೇಟಿ: ಚಿಕ್ಕಬಳ್ಳಾಪುರ ತಾಲೂಕಿನ ಕಣಿವೆ ನಾರಾಯಣಪುರದ ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆಯಡಿ ಬರೋಬ್ಬರಿ 50 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಿರುವ ಸಸಿಗಳ ತೋಪು ವೀಕ್ಷಿಸಿದರು. ಅಲ್ಲಿಂದ ನೇರವಾಗಿ ಚದಲಪುರದ ದೊಡ್ಡಮರಳಿ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊಳವೆಬಾವಿ ಬಳಿ ಕೈಗೊಂಡಿರುವ ಜಲ ಮರುಪೂರಣ ಕಾಮಗಾರಿಯನ್ನು ವೀಕ್ಷಿಸಿದರು.
ಬಳಿಕ ನಗರದ ಭಾರತಿನಗರದ 20ನೇ ವಾರ್ಡ್ನಲ್ಲಿ ಇತ್ತೀಚೆಗೆ ಜಿಲ್ಲಾಡಳಿತ ಪಾಳು ಬಿದ್ದಿದ್ದ ಕಲ್ಯಾಣಿಯನ್ನು ಪುನಶ್ಚೇತನಗೊಳಿಸಿರುವ ಕಾರ್ಯವನ್ನು ಖುದ್ದು ಪರಿಶೀಲನೆ ನಡೆಸಿದರು. ಈ ವೇಳೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹಾಗೂ ಜಿಪಂ ಸಿಇಒ ಗುರುದತ್ ಹೆಗಡೆ ಅಧಿಕಾರಿಗಳ ತಂಡಕ್ಕೆ ಮಾಹಿತಿ ನೀಡಿದರು.
ಹೆಚ್.ಎನ್ ವ್ಯಾಲಿ ಕಾಮಗಾರಿ ವೀಕ್ಷಣೆ: ನಗರದ ಹೊರ ವಲಯದ ಕಂದವಾರ ಕೆರೆಯಲ್ಲಿ ನಡೆಯುತ್ತಿರುವ ಹೆಚ್.ಎನ್.ವ್ಯಾಲಿ ಕಾಮಗಾರಿಗಳನ್ನು ವೀಕ್ಷಿಸಿದ ತಂಡ ಅಲ್ಲಿಂದ ನಗರದ ಹೊರ ವಲಯದ ರಂಗಸ್ಥಳದಲ್ಲಿರುವ ಕಲ್ಯಾಣಿ ಪರಿಶೀಲಿಸಿ ನಂತರ ನರೇಗಾ ಯೋಜನೆಯಡಿ ನಿರ್ಮಿಸಿರುವ ಪೋಶೆಟ್ಟಿಹಳ್ಳಿಗೆ ಸೇರಿದ ಚೆಕ್ ಡ್ಯಾಂ, ಪೋಶೆಟ್ಟಿಹಳ್ಳಿ ಮತ್ತು ಮಂಚೇನಹಳ್ಳಿ ರಸ್ತೆ ಬದಿ ಇರುವ ಅರಣ್ಯ ಪ್ರದೇಶವನ್ನು ಹಾಗೂ ಗೌರಿಬಿದನೂರು ತಾಲೂಕಿನ ಗೌಡಗೆರೆಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ವಾಟರ್ ಫೂಲ್ಗಳನ್ನು ಪರಿಶೀಲಿಸಿದರು.
ಜಿಲ್ಲಾಡಳಿತ ಕೈಗೊಂಡಿರುವ ಹಲವು ಜಲ ಸಂರಕ್ಷಣ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿಗಳ ತಂಡ, ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗೆ ಪೂರಕವಾಗಿ ಚೆಕ್ ಡ್ಯಾಂ, ರೈತರ ಹೊಲಗಳಲ್ಲಿ ಬದು ನಿರ್ಮಾಣ, ಗುಂಡು ತೋಪುಗಳ ನಿರ್ಮಾಣ ಮೂಲಕ ಹಸಿರೀಕರಣಕ್ಕೆ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಜಿಪಂ ಸಿಇಒ ಗುರುದತ್ ಹೆಗಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ರವೀಂದ್ರನಾಥ್ ತಲವಾಡೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಕಾಪಾಲಕ ಅಭಿಯಂತರರಾದ ಶಿವಕುಮಾರ್ ಲಾಕೋರ್, ಚಿಕ್ಕಬಳ್ಳಾಪುರ ತಾಪಂ ಇಒ ಕೆ.ಪಿ.ಸಂಜೀವಪ್ಪ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪರಿಶೀಲನಾ ಕಾರ್ಯದಲ್ಲಿ ಭಾಗವಹಿಸಿದ್ದರು.
ತಂಡದಲ್ಲಿ ಯಾರ್ಯಾರು ಇದ್ದರು?: ಜಿಲ್ಲೆಯ ಅಂತರ್ಜಲ ಪರಿಸ್ಥಿತಿ ಪರಾಮರ್ಶೆಗೆ ಎರಡು ದಿನಗಳ ಅಧ್ಯಯನಕ್ಕಾಗಿ ಆಗಮಿಸಿದ್ದ ತಂಡದಲ್ಲಿ ಕೇಂದ್ರ ಜಲಶಕ್ತಿ ಅಭಿಯಾನದ ತಂಡ ಸದಸ್ಯರಾದ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಪರ ಕಾರ್ಯದರ್ಶಿ ಪಂಕಜ್ ಕುಮಾರ್, ಕೇಂದ್ರ ಆಯುಷ್ ಸಚಿವಾಲಯದ ನಿರ್ದೇಶಕ ಶಶಿರಂಜನ್ ಕುಮಾರ್, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ನಿರ್ದೇಶಕ ಮನೋಜ್ ಕುಮಾರ್ ಗಂಗೇಯಾ, ಕೇಂದ್ರ ಅಂತರ್ಜಲ ಮಂಡಳಿಯ ತಾಂತ್ರಿಕ ಅಧಿಕಾರಿ ಯು.ಆರ್. ರಾಕಿ, ಇಂಜಿನಿಯರ್ ದಿಲೀಪ್ ಮತ್ತಿತರರು ಆಗಮಿಸಿದ್ದರು.
ದೇಶದ ಹಲವು ರಾಜ್ಯಗಳಲ್ಲಿ ನೀರಿನ ತೀವ್ರ ಕೊರತೆಯಿರುವ ಹಿನ್ನೆಲೆಯಲ್ಲಿ ಜಲ ಸಂರಕ್ಷಣೆ ಆಂದೋಲನವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಕೇಂದ್ರ ಸರ್ಕಾರವು ಜಲ ಭದ್ರತೆಗಾಗಿ ಜಲಶಕ್ತಿ ಅಭಿಯಾನ ಎಂಬ ವಿನೂತನ ಕಾರ್ಯಕ್ರಮವನ್ನು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಜು.1 ರಿಂದ ಸೆಪ್ಟೆಂಬರ್ 15 ರವರೆಗೆ ಮೊದಲ ಹಂತದಲ್ಲಿ ಹಮ್ಮಿಕೊಂಡಿ ದ್ದು, ಇದರ ಮೂಲ ಉದ್ದೇಶ ಅಂತರ್ಜಲ ಹೆಚ್ಚಿಸುವುದು. ಜಲ ಸಂರಕ್ಷಣೆಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವುದು.
-ಪಂಕಜ್ ಕುಮಾರ್, ನೋಡಲ್ ಅಧಿಕಾರಿ, ಜಲಶಕ್ತಿ ಅಭಿಯಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ