ಕಂದವಾರ ಕೆರೆ ತಲುಪಿದ ಹೆಚ್ಎನ್ ವ್ಯಾಲಿ ನೀರು
Team Udayavani, Feb 7, 2020, 3:00 AM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ತೀವ್ರ ಪ್ರಮಾಣದಲ್ಲಿ ಕ್ಷೀಣಿಸಿರುವ ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿ ಜಿಲ್ಲೆಯ ಒಟ್ಟು 44 ಕೆರೆಗಳಿಗೆ ನೀರು ತುಂಬಿಸುವ ಮಹತ್ವಕಾಂಕ್ಷಿ ಹೆಬ್ಬಾಳ ನಾಗವಾರ ಸಂಸ್ಕರಿತ ತ್ಯಾಜ್ಯ ನೀರು ಹರಿಸುವ ಕಾಮಗಾರಿ ಪೂರ್ಣಗೊಂಡು ಗುರುವಾರ ನಗರದ ಕಂದವಾರ ಕೆರೆಗೆ ನೀರು ತಲುಪಿತು.
ಬೆಂಗಳೂರಿನ ಹೆಬ್ಬಾಳ-ನಾಗವಾರ ವ್ಯಾಲಿಯಿಂದ ಎರಡು ಹಂತದಲ್ಲಿ ಸಂಸ್ಕರಿಸಿದ ನೀರನ್ನು 114 ಕಿ.ಮೀ. ಉದ್ದ ಅಳವಡಿಸಿರುವ ಪೈಪ್ಲೈನ್ ಮೂಲಕ ಬಾಗಲೂರುನಿಂದ ಜಿಲ್ಲೆಯ ಇತರೆ ಕೆರೆಗಳಿಗೆ ನೀರು ಪಂಪ್ ಮಾಡಲು ಪಂಪ್ಹೌಸ್ ನಿರ್ಮಿಸಿರುವ ಕಂದವಾರ ಕೆರೆಗೆ ಬಂದಿದ್ದು, ಕೆರೆ ನೀರು ಹರಿಯುವುದನ್ನು ತಾಲೂಕಿನ ಜನತೆ ನೋಡಿ ಸಂತಸ ಪಟ್ಟರು.
ಜನರಿಂದ ವೀಕ್ಷಣೆ: ನಗರದ ಹೊರ ವಲಯದ ತಿರ್ನಹಳ್ಳಿ ಹಾಗೂ ಬಂಡಹಳ್ಳಿ ಮಾರ್ಗಮಧ್ಯೆ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಿರುವ ಛೇಂಬರ್ನಿಂದ ಕಾಲುವೆಗಳ ಮೂಲಕ ಕಂದವಾರ ಕೆರೆ ನೀರು ಹಾಯಿಸುತ್ತಿದ್ದು, ತಾಲೂಕಿನ ಸಹಸ್ರಾರು ಸಾರ್ವಜನಿಕರು, ಸುತ್ತಮುತ್ತಲಿನ ಗ್ರಾಮಸ್ಥರು ಕುತೂಹಲದಿಂದ ಬಂದು ಎಚ್ಎನ್ ವ್ಯಾಲಿ ನೀರನ್ನು ವೀಕ್ಷಿಸಿದರು.
ಹೊಸ ಭರವಸೆ: ಪಕ್ಕದ ಕೋಲಾರ ಜಿಲ್ಲೆಗೆ ಸರ್ಕಾರ ಕೆರೆಗಳು ತುಂಬಿಸಲು ಕೋರಮಂಗಳ, ಚಲಘಟ್ಟ ವ್ಯಾಲಿ ಯೋಜನೆ ರೂಪಿಸಿ ಸಕಾಲದಲ್ಲಿ ಅನುಷ್ಠಾನಗೊಳಿಸಿದರೂ ಚಿಕ್ಕಬಳ್ಳಾಪುರಕ್ಕೆ ರೂಪಿಸಿದ ಹೆಬ್ಬಾಳ ನಾಗವಾರ ವ್ಯಾಲಿ ನೀರು ಸಕಾಲದಲ್ಲಿ ಕಾಮಗಾರಿ ಮುಗಿಯದೇ ಸುಮಾರು ಆರು ತಿಂಗಳಲ್ಲಿ ಮುಗಿಯಬೇಕಿದ್ದ ಕಾಮಗಾರಿ ಎರಡು ವರ್ಷಕ್ಕೆ ಮುಗಿದು ಈಗ ನೀರು ಹರಿಸಿರುವುದು ಜಿಲ್ಲೆಯ ಜನರಲ್ಲಿ ಹೊಸ ಭರವಸೆ ಮೂಡಿದೆ.
ವಿಶೇಷವಾಗಿ ಜಿಲ್ಲೆಯಲ್ಲಿ ಪಾತಾಳಕ್ಕೆ ಕುಸಿದಿರುವ ಅಂತರ್ಜಲ ವೃದ್ಧಿಯಾಗುವ ಆಶಾಭಾವನೆ ಹೊಂದಿದ್ದಾರೆ. ಸರ್ಕಾರ ಈ ಯೋಜನೆಗೆ ಆರಂಭಿಕ ಹಂತವಾಗಿ 883 ಕೋಟಿ ರೂ. ವೆಚ್ಚ ಮಾಡಿದ್ದರೂ ಯೋಜನೆ ಪೂರ್ಣಗೊಳ್ಳಲು ಸಾವಿರ ಕೋಟಿ ರೂ. ತಲುಪಿದೆ. ಕೆರೆಗೆ ನೀರು ಹರಿಯುತ್ತಿರುವ ವಿಷಯ ತಿಳಿದು ರೈತಪರ ಸಂಘಟನೆಗಳು, ಸುತ್ತಮುತ್ತಲಿನ ರೈತರು ಆಗಮಿಸಿ ನೀರು ಕೆರೆಗೆ ಹರಿಯುವುದನ್ನು ಕಣ್ಣು ತುಂಬಿಕೊಂಡರು. ಯುವಕರು, ರೈತರು ನೀರಿಗೆ ಇಳಿದು ಸೆಲ್ಫಿ ತೆಗೆದುಕೊಂಡರು.
ಸಂತಸ, ಆತಂಕದಿಂದಲೇ ವ್ಯಾಲಿ ನೀರಿಗೆ ಸ್ವಾಗತ: ಈ ಹಿಂದೆ ಕೋಲಾರಕ್ಕೆ ಹರಿಸಿದ್ದ ಕೆ.ಸಿ.ವ್ಯಾಲಿ ನೀರು ಬಹುತೇಕ ಕಪ್ಪು ಬಣ್ಣದ ಜೊತೆಗೆ ವಾಸನೆಯಿಂದ ಕೂಡಿದ್ದ ನೀರು ಹರಿದು ಭಾಗದ ರೈತರಲ್ಲಿ, ಸಾರ್ವಜನಿಕರಲ್ಲಿ ಚರ್ಚೆಗೆ, ಆತಂಕಕ್ಕೆ ಕಾರಣವಾಗಿತ್ತು. ಆದರೆ ಜಿಲ್ಲೆಗೆ ಹರಿಸಿರುವ ಹೆಚ್ಎನ್ ವ್ಯಾಲಿ ನೀರು ಯಾವುದೇ ವಾಸನೆ ಇಲ್ಲದಿರುವುದು ಈ ಭಾಗದ ಜನರಲ್ಲಿ ಸಮಾಧಾನ ತಂದಿದೆ. ಆದರೆ ಸದ್ಯಕ್ಕೆ ಇದರ ಪರಿಣಾಮ ಏನು ಇಲ್ಲ.
ಚಿಕ್ಕಬಳ್ಳಾಪುರ ತಾಲೂಕಿನ ಜನತೆ ಸಂತಸದ ಜೊತೆಗೆ ಆತಂಕದಿಂದಲೇ ವ್ಯಾಲಿ ನೀರನ್ನು ಸ್ವಾಗತ ಮಾಡಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ನೀರಿನ ಗುಣಮಟ್ಟದ ವಿಚಾರದಲ್ಲಿ ಸಂಸ್ಕೃರಿತ ಕೊಳಚೆ ನೀರು ಜಿಲ್ಲೆಯ ಜನ ಜೀವನದ ಮೇಲೆ ಯಾವ ಪರಿಣಾಮ ದುಷ್ಪರಿಣಾಮ ಬೀರುತ್ತದೆ? ಇಲ್ಲ ಅಂತರ್ಜಲ ವೃದ್ಧಿಯಾಗಿ ಜಿಲ್ಲೆಯ ರೈತಾಪಿ ಜನರ ಕೈ ಹಿಡಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.
2017ರಲ್ಲಿ ಯೋಜನೆಗೆ ಸಿದ್ದರಾಮಯ್ಯ ಶಂಕು: 2013 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಗೆ ಎತ್ತಿನಹೊಳೆ ಯೋಜನೆ ಅನುಷ್ಠಾನ ವಿಳಂಬ ಆಗುತ್ತದೆ ಎಂದೇಳಿ 2017ರ ಸೆ.18 ರಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, 883 ಕೋಟಿ ರೂ. ವೆಚ್ಚದ ಹೆಬ್ಬಾಳ ನಾಗವಾರ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆಗಿನ ಜಲ ಸಂಪನ್ಮೂಲ ಸಚಿವರಾಗಿ ಟಿ.ಬಿ.ಜಯಚಂದ್ರ ಇದ್ದು ನಗರದ ಹೊರ ವಲಯದ ಸೋಲಾಲಪ್ಪನ ದಿನ್ನೆ ಸಮೀಪ ಆಗಿನ ಶಾಸಕ ಸದ್ಯ ನೂತನ ಸಚಿವರಾಗಿರುವ ಡಾ.ಕೆ.ಸುಧಾಕರ್ ಅಧ್ಯಕ್ಷತೆ ವಹಿಸಿದ್ದರು. ಶಂಕುಸ್ಥಾಪನೆಗೊಂಡ ಬರೋಬ್ಬರಿ ಎರಡು ವರ್ಷ 5 ತಿಂಗಳಿಗೆ ಯೋಜನೆ ಪೂರ್ಣಗೊಂಡು ನೀರು ಹರಿಯುತ್ತಿದೆ.
ಪ್ರತಿ ನಿತ್ಯ 210 ದಶಲಕ್ಷ ಲೀ. ಸರಬರಾಜು: ಹೆಬ್ಬಾಳ ನಾಗವಾರ ಸಂಸ್ಕೃರಿತ ತ್ಯಾಜ್ಯ ನೀರಾವರಿ ಯೋಜನೆಯಿಂದ ಜಿಲ್ಲೆಯ ಕಂದವಾರ ಕೆರೆಗೆ ಬಾಗಲೂರು ಕೆರೆಯಿಂದ ಪ್ರತಿ ನಿತ್ಯ 210 ದಶಲಕ್ಷ ಲೀ.ನೀರು ಸರಬರಾಜುಗೊಳ್ಳಲಿದೆ. ವಾರ್ಷಿಕ 2.70 ಟಿಎಂಸಿ ನೀರು ಸರಬರಾಜು ಮಾಡುವ ಗುರಿ ಹೊಂದಲಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸೇರಿ ಒಟ್ಟು 65 ಕೆರೆಗಳಿಗೆ ನೀರು ಸರಬರಾಜು ಆಗಲಿದ್ದು ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕು 25, ಗೌರಿಬಿದನೂರು 8, ಶಿಡ್ಲಘಟ್ಟ 9, ಗುಡಿಬಂಡೆ 3 ಕೆರೆಗಳಿಗೆ ಈ ನೀರು ಹರಿಯಲಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಸಂತಸ: ಚಿಕ್ಕಬಳ್ಳಾಪುರದ ಕಂದವಾರ ಕೆರೆಗೆ ಹೆಬ್ಬಾಳ ನಾಗವಾರ ನೀರಾವರಿ ಯೋಜನೆಯ ಕಾಮಗಾರಿ ಮುಗಿದು ಕೆರೆಗೆ ನೀರು ಹರಿದಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಭಾಗದ ನೀರಿನ ಸಮಸ್ಯೆ ಪರಿಹರಿಸಲು ನಾನು ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿನ 44 ಕೆರೆಗಳಿಗೆ ನೀರು ತುಂಬಿಸುವ 900 ಕೋಟಿ ರೂ. ವೆಚ್ಚದ ಹೆಚ್ಎನ್ ವ್ಯಾಲಿ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಿದ್ದೆ. ಯೋಜನೆ ಕಾಮಗಾರಿ ಪೂರ್ಣಗೊಂಡು ಇಂದು ಕಂದವಾರ ಕೆರೆಗೆ ನೀರು ಹರಿಯುತ್ತಿರುವುದು ನನ್ನಲ್ಲಿ ಸಂತಸ ಮೂಡಿಸಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಫೇಸ್ಬುಕ್ನಲ್ಲಿ ಕಂದವಾರ ಕೆರೆಗೆ ಹೆಚ್ಎನ್ ವ್ಯಾಲಿ ನೀರು ಹರಿಯುತ್ತಿರುವ ಛಾಯಾಚಿತ್ರಗಳನ್ನು ಟ್ಯಾಗ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ನೂತನ ಸಚಿವ ಸುಧಾಕರ್ರಿಂದ ಕೆರೆಗೆ ಪೂಜೆ: ಜಿಲ್ಲೆಯ 44 ಕೆರೆಗಳಿಗೆ ನೀರು ಹರಿಸುವ ಕಂದವಾರ ಕೆರೆಗೆ ಹೆಬ್ಬಾಳ ನಾಗವಾರ ನೀರಾವರಿ ಯೋಜನೆಯಿಂದ ನೀರು ಬರುತ್ತಿದ್ದಂತೆ ಗುರುವಾರವಷ್ಟೇ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್, ಬಂಡಹಳ್ಳಿಯ ಸಮೀಪ ನೀರು ಹರಿಸಲು ನಿರ್ಮಿಸಿರುವ ಛೇಂಬರ್ ಸ್ಥಳಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಸಚಿವ ಸುಧಾಕರ್, ಹಿಂದಿನ ಸರ್ಕಾರದಲ್ಲಿ ಸಾಕಷ್ಟು ಹೋರಾಡಿ ರೂಪಿಸಿದ ಈ ಯೋಜನೆ ಇಂದು ಸಕಾರಗೊಂಡು ಕಂದವಾರಕ್ಕೆ ನೀರು ಹರಿದಿರುವುದು ನನಗೆ ಬಹಳ ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ಸಚಿವರು ಬೆಂಬಲಿಗರು, ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.
ಉದಯವಾಣಿ ವಿಶೇಷ ವರದಿ: 883 ಕೋಟಿ ರೂ. ವೆಚ್ಚದಲ್ಲಿ ರೂಪಿಸಿರುವ ಹೆಬ್ಬಾಳ ನಾಗವಾರ ಸಂಸ್ಕೃರಿತ ತ್ಯಾಜ್ಯ ನೀರಾವರಿ ಯೋಜನೆಯಡಿ ಜಿಲ್ಲೆಯ 44 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಂಡು ಕಂದವಾರ ಕೆರೆಗೆ ಗುರುವಾರ ನೀರು ಹರಿಸುವ ಕುರಿತು ಉದಯವಾಣಿ ಚಿಕ್ಕಬಳ್ಳಾಪುರ ಆವೃತ್ತಿಯಲ್ಲಿ ಜ.5 ರಂದೇ “ಕಂದವಾರ ಕೆರೆಗೆ ನಾಳೆ ಹೆಚ್ಎನ್ ವ್ಯಾಲಿ ನೀರು’ ಶೀರ್ಷಿಕೆಯಡಿ ವಿಶೇಷವಾಗಿ ಯೋಜನೆಯ ಕುರಿತು ಸಮಗ್ರ ವರದಿಯನ್ನು ಪ್ರಕಟಿಸಿ ಜಿಲ್ಲೆಯ ಜನರ ಗಮನ ಸೆಳೆದಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ