9 ಅಡಿ ಆಳದಲ್ಲಿ 72ಗಂಟೆ ಕಾಲ ಜೀವಂತ ಸಮಾಧಿಯಾಗ್ತೀನಿ ಎಂದ ಸ್ವಾಮೀಜಿ ಪರಾರಿ!
ಸೋಮವಾರ ಬೆಳಗ್ಗೆ 11.30ಕ್ಕೆ 9ಅಡಿ ಆಳದ ಗುಂಡಿಯಲ್ಲಿ ಜೀವಂತ ಸಮಾಧಿಯಾಗುವುದಾಗಿ ಪ್ರಚಾರ ನಡೆಸಿದ್ದ.
Team Udayavani, Jan 27, 2020, 3:52 PM IST
ಚಿಕ್ಕಬಳ್ಳಾಪುರ: ಒಂಬತ್ತು ಅಡಿ ಆಳದ ಗುಂಡಿಯೊಳಗೆ 72 ಗಂಟೆಗಳ ಕಾಲ ಜೀವಂತ ಸಮಾಧಿಯಾಗುವುದಾಗಿ ಪ್ರಚಾರ ನಡೆಸಿ, ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ ಸ್ವಾಮೀಜಿ ಸೋಮವಾರ ದಿಢೀರ್ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರದ ಚಿಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಚಿಕ್ಕನಹಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ವಾಸ್ತವ್ಯ ಹೂಡಿದ್ದ ತಾರ್ನೇಯಿ ಸಾಯಿ ಎಂಬ ಸ್ವಯಂಘೋಷಿತ ಸ್ವಾಮೀಜಿ ಸೋಮವಾರ ಬೆಳಗ್ಗೆ 11.30ಕ್ಕೆ 9ಅಡಿ ಆಳದ ಗುಂಡಿಯಲ್ಲಿ ಜೀವಂತ ಸಮಾಧಿಯಾಗುವುದಾಗಿ ಪ್ರಚಾರ ನಡೆಸಿದ್ದ.
ಅಲ್ಲದೇ ಗ್ರಾಮದ ವ್ಯಕ್ತಿಯೊಬ್ಬರ ಸ್ಥಳದಲ್ಲಿ ಗುಂಡಿ ತೆಗೆದು ಜೀವಂತ ಸಮಾಧಿಯಾಗುವ ಪ್ರಕ್ರಿಯೆಗೆ ಸಿದ್ಧತೆ ನಡೆಸಲಾಗಿತ್ತು. ಸ್ವಾಮೀಜಿ 72 ಗಂಟೆಗಳ ಕಾಲ ಜೀವಂತ ಸಮಾಧಿಯಾಗುವುದನ್ನು ನೋಡಲು ಜನರು ಆಗಮಿಸತೊಡಗಿದ್ದರು. ಆದರೆ ಸ್ವಾಮೀಜಿ ನಾಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
72ಗಂಟೆಗಳ ಕಾಲ ಜೀವಂತ ಸಮಾಧಿಯಾಗುವ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪರವಾನಿಗೆ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ. ಈ ನಿಟ್ಟಿನಲ್ಲಿ ಸ್ವಾಮೀಜಿ ನಾಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.