ಕಳ್ಳತನ ತಡೆಗೆ ಎಲ್ಎಚ್ಎಂಎಸ್ ಜಾರಿ
ಆಂಧ್ರಪ್ರದೇಶದಲ್ಲಿ ಯೋಜನೆ ಯಶಸ್ವಿ | ಜಿಲ್ಲೆಯಲ್ಲಿ ಶೀಘ್ರ ಕಾರ್ಯರಂಭಕ್ಕೆ ಎಸ್ಪಿ ಮಿಥುನ್ಕುಮಾರ್ ಕ್ರಮ
Team Udayavani, Nov 13, 2020, 7:51 PM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯನ್ನು ಜನಸ್ನೇಹಿ ಮಾಡಲು ವಿಶೇಷ ಕಾಳಜಿ ವಹಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಜಿಲ್ಲೆಯಲ್ಲಿ ಎಲ್ಎಚ್ಎಂಎಸ್(ಕಳ್ಳತನ ನಿಯಂತ್ರಿಸಲು ಬೀಗಹಾಕಿದ ಮನೆಯ ಮೇಲ್ವಿಚಾರಣೆ ಮಾಡುವ ವ್ಯವಸ್ಥೆ) ಜಾರಿಗೊಳಿಸಲು ಮುಂದಾಗಿದ್ದು, ಇದರಿಂದ ಜಿಲ್ಲೆಯ ಜನ ಭವಿಷ್ಯದಲ್ಲಿ ನಿಶ್ಚಿಂತೆಯಿಂದ ಮನೆಗೆ ಬೀಗ ಹಾಕಿ ಪ್ರವಾಸ ಹೋಗಬಹುದಾಗಿದೆ.
ಹೊಸ ವ್ಯವಸ್ಥೆ ಪರಿಚಯ: ನೆರೆಯ ಆಂಧ್ರಪ್ರದೇಶದಲ್ಲಿ ಕಳ್ಳತನದ ಪ್ರಕರಣಗಳನ್ನು ನಿಯಂತ್ರಿಸಲು ಜಾರಿಗೊಳಿಸಿರುವ ಈ ಮಾದರಿಯ ಯೋಜನೆ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲಿ ಪರಿಚಯಿಸಲು ಎಸ್ಪಿ ಮಿಥುನ್ಕುಮಾರ್ ಮುಂದಾಗಿದ್ದಾರೆ. ಸಾಮಾನ್ಯವಾಗಿ ಶುಭ ಸಮಾರಂಭಗಳಲ್ಲಿ ಭಾಗವಹಿಸಲು ಅಥವಾ ಇನ್ನಿತರೆ ಕಾರಣಗಳಿಂದ ಮನೆಯಿಂದ ಹೊರ ಹೋದರೆ ಕಳ್ಳರು ತಮ್ಮ ಕೈಚಳಕ ತೋರಿ ಚಿನ್ನಾಭರಣ-ನಗದು ದೋಚಿ ಪರಾರಿಯಾಗುವ ಘಟನೆಗಳು ಸಂಭವಿಸುತ್ತಿರುವುದು ಸಾಮಾನ್ಯ. ಹೀಗಾಗಿ ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಸಂರಕ್ಷಣೆ ಮಾಡಲು ಈಗಾಗಲೇ ಸಕ್ರಿಯವಾಗಿರುವ ಪೊಲೀಸ್ ಇಲಾಖೆಯಲ್ಲಿ ಇದೀಗ ಹೊಸ ವ್ಯವಸ್ಥೆ ಪರಿಚಯವಾಗಿದೆ.
ಏನಿದು ವ್ಯವಸ್ಥೆ: ಮೊದಲಿಗೆ ಜಿಲ್ಲೆಯಲ್ಲಿ ಕಳ್ಳತನದ ಪ್ರಕರಣಗಳನ್ನು ನಿಯಂತ್ರಣ ಮಾಡುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಸಾರ್ವಜನಿಕರು ಮೊದಲು ಆ್ಯಂಡ್ರಾಯ್ಡ ಫೋನ್ ಮೂಲಕ ಪ್ಲೇಸ್ಟೋರ್ ಗೆ ಹೋಗಿ ಎಲ್.ಹೆಚ್.ಎಂ.ಎಸ್ (ಕಳ್ಳತನ ನಿಯಂ ತ್ರಿಸಲು ಬೀಗಹಾಕಿದ ಮನೆಯ ಮೇಲ್ವಿಚಾರಣೆಮಾಡುವ ವ್ಯವಸ್ಥೆ) ಆ್ಯಪ್ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಳ್ಳಬೇಕು. ಮನೆಯ ಮಾಲೀಕರು ಆ್ಯಪ್ನಲ್ಲಿ ಕೇಳುವ ಮಾಹಿತಿ ಸಲ್ಲಿಕೆ ಮಾಡಿದರೆ (ಮೋಷನ್ ಸೆನ್ಸೆರ್ ಕ್ಯಾಮೆರಾ ಅಳವಡಿಸುತ್ತಾರೆ). ಒಂದು ವೇಳೆ ಕಳ್ಳರು ಮನೆಯೊಳಗೆ ಪ್ರವೇಶಿಸಿದರೆ ತಕ್ಷಣವೇ ಪೊಲೀಸ್ ಕಂಟ್ರೋಲ್ ರೂಂಗೆ ಸಂದೇಶ ರವಾನೆಯಾಗುತ್ತದೆ. ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ಕಳ್ಳರನ್ನು ಸೆರೆಗೆ ಸಹಕಾರಿಯಾಗಲಿದೆ.
ಬಳಕೆ ಮಾಡುವ ವಿಧಾನ: ಮೊದಲು ಎಲ್.ಹೆಚ್. ಎಂ.ಎಸ್ ಚಿಕ್ಕಬಳ್ಳಾಪುರ ಎಂದು ಸರ್ಚ್ ಮಾಡಿ ಅದನ್ನು ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ಮಾಡಿಕೊಂಡು ಓಪನ್ ಮಾಡಿದರೆ ಮೊದಲು ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಮೊದಲು ಹೆಸರು, ಮೊಬೈಲ್ ಸಂಖ್ಯೆ, ಆಯ್ದ ಜಿಲ್ಲೆ, ತಾಲೂಕು, ವಿಳಾಸ, ಲಾಟಿಟ್ಯೂಡ್, ಲಾಂಗಿಟ್ಯೂಡ್ ಅಥವಾ ಪ್ರಸಕ್ತ ಲೊಕೇಶನ್ ಕೊಟ್ಟು ನೋಂದಣಿ ಮಾಡಿಕೊಳ್ಳಬೇಕು.ನಂತರ ರಿಕ್ವೆಸ್ಟ್ ಪೊಲೀಸ್ ವಾಚ್ ಮೇಲೆ ಕ್ಲಿಕ್ ಮಾಡಿ ಪ್ರವಾಸವನ್ನು ಯಾವ ದಿನಾಂಕದಿಂದ ಆರಂಭಿಸುತ್ತಿದ್ದೀರಿ, ಹೋಗುವ ಸಮಯ, ವಾಪಸ್ಸು ಬರುವ ದಿನಾಂಕ ಮತ್ತು ಸಮಯ ನಿಗದಿಪಡಿಸಿ ಯೂಸರ್ ಐಡಿಯನ್ನು ಸಬ್ಮಿಟ್ ಮಾಡಿ ನೋಂದಣಿ ಮಾಡಬಹುದಾಗಿದೆ.
ಪೊಲೀಸ್ ಇಲಾಖೆಗೆ ಹೈಟೆಕ್ ಸ್ಪರ್ಶ: ಪೊಲೀಸ್ ಇಲಾಖೆ ಸಿಬ್ಬಂದಿಗೆ ಅಥವಾ ಬೀಟ್ ಪೊಲೀಸರಿಗೆ ಮಾಹಿತಿ ನೀಡಿ ಹೋದರೂ ಸಹ ಕಳ್ಳತನದ ಭೀತಿಯಲ್ಲಿ ಪ್ರವಾಸ ಕೈಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದೀಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪೊಲೀಸ್ ಇಲಾಖೆಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿ ಎಲ್. ಹೆಚ್.ಎಂ.ಎಸ್ ವ್ಯವಸ್ಥೆ ಪರಿಚಯಿಸಿ ಕಳ್ಳತನದ ಪ್ರಕರಣಗಳನ್ನು ತಡೆಗಟ್ಟುವ ಜೊತೆಗೆ ನಾಗರಿಕರ ಮನೆಗಳಿಗೆ ಕಳ್ಳರಿಂದ ಭದ್ರತೆ ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.
50 ಮೋಷನ್ ಸೆನ್ಸರ್ ಕ್ಯಾಮೆರಾ ಖರೀದಿ : ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಎಲ್.ಹೆಚ್.ಎಂ.ಎಸ್ ವ್ಯವಸ್ಥೆ ಜಾರಿಗೊಳಿಸಲು ಸಕಲ ಸಿದ್ಧತೆ ಮಾಡಿಕೊಂಡು ಈಗಾಗಲೇ 50 ಮೋಷನ್ ಸೆನ್ಸೆರ್ ಕ್ಯಾಮೆರಾಗಳನ್ನು ಖರೀದಿಸಲಾಗಿದೆ. ನಾಗರಿಕರು ಪೊಲೀಸ್ ಇಲಾಖೆಯಿಂದ ಜಾರಿಗೊಳಿಸಿರುವ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಅಪರಾಧ ಪ್ರಕರಣ ತಡೆಗಟ್ಟಲು ಮತ್ತು ಪೊಲೀಸ್ ಇಲಾಖೆಯನ್ನು ಜನಸ್ನೇಹಿ ಮಾಡಲು ಕ್ರಮ ಕೈಗೊಂಡಿರುವ ಎಸ್ಪಿ, ಆಂಧ್ರಪ್ರದೇಶದ ಮಾದರಿಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಂಡಿದ್ದಾರೆ.
ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆ : ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಹೈಟೆಕ್ ಸ್ಪರ್ಶ ನೀಡುವ ಜೊತೆಗೆ ಕಳ್ಳತನದ ಪ್ರಕರಣಗಳನ್ನು ತಡೆಗಟ್ಟಲು ಆರಂಭಿಸಲು ಉದ್ದೇಶಿಸಿರುವ ಎಲ್.ಹೆಚ್.ಎಂ.ಎಸ್ ಜಾರಿಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನೂತನ ವ್ಯವಸ್ಥೆಗೆ ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ. ಪ್ರಾಯೋಗಿಕವಾಗಿ ಜಿಲ್ಲೆಯ 6 ತಾಲೂಕು ಕೇಂದ್ರದಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆ ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆಯಾಗಲಿದೆ.
ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ ತಡೆಗಟ್ಟುವ ಸಲುವಾಗಿ ಎಲ್.ಹೆಚ್.ಎಂ.ಎಸ್ ವ್ಯವಸ್ಥೆ ಜಾರಿಗೆ ಸಿದ್ಧತೆ ಮಾಡಿಕೊಂಡಿ ದ್ದೇವೆ. ನೆರೆಯ ಆಂಧ್ರ ಮತ್ತು ರಾಜ್ಯದ ಕೆಲವೊಂದುಜಿಲ್ಲೆಯಲ್ಲಿ ಈ ಮಾದರಿ ಅನುಷ್ಠಾನ ಬಗ್ಗೆ ಮಾಹಿತಿಯಿದೆ. ಜಿಲ್ಲೆಯ 6 ತಾಲೂಕು ಕೇಂದ್ರದಲ್ಲಿ ಈ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗು ತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದಾರೆ. – ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
– ಎಂ.ಎ.ತಮೀಮ್ ಪಾಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
Lok Sabha Election: ಚುನಾವಣಾ ಪ್ರಚಾರದ ಅಬ್ಬರ; ಕೂಲಿ ಕಾರ್ಮಿಕರಿಗೆ ಬರ!
LS polls 2024: ಅಸೆಂಬ್ಲಿಯಲ್ಲಿ ಜಂಗೀಕುಸ್ತಿ, ಲೋಕ ಸಮರದಲ್ಲಿ ದೋಸ್ತಿ!
High temperature: ಉರಿ ಬಿಸಿಲಿಗೆ ಹೈರಾಣ: ಮಳೆಗಾಗಿ ಕಾದ ಜನ!
Lok Sabha election: ಎಸ್ಸೆಸ್ಸೆಲ್ಸಿ, ಪಿಯುಸಿ ಓದಿರುವ ಅಭ್ಯರ್ಥಿಗಳೇ ಹೆಚ್ಚು!