ಜಿಪಂ ಅಧ್ಯಕ್ಷ ಮಂಜುನಾಥ ರಾಜೀನಾಮೆ
Team Udayavani, Sep 24, 2019, 3:00 AM IST
ಚಿಕ್ಕಬಳ್ಳಾಪುರ: ಜಿಪಂ ಅಧ್ಯಕ್ಷರಾಗಿ ಅತ್ಯಂತ ಕ್ರಿಯಾಶೀಲವಾಗಿ ಜಿಲ್ಲೆಯ ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಕಾರ್ಯ ನಿರ್ವವಹಿಸುತ್ತಿದ್ದ ಎಚ್.ವಿ.ಮಂಜುನಾಥಗೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ವರಿಷ್ಠರು ಸೂಚಿಸಿರುವುದು ಜಿಲ್ಲೆಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಈ ಹಿಂದೆ ಜಿಪಂ ಅಧ್ಯಕ್ಷ ಸ್ಥಾನಕ್ಕೆ ವರಿಷ್ಠರ ಸೂಚನೆಯಂತೆ ರಾಜೀನಾಮೆ ಸಲ್ಲಿಸಿದ್ದ ಎಚ್.ವಿ.ಮಂಜುನಾಥ, ಬಳಿಕ ಬದಲಾದ ರಾಜಕೀಯ ಕಾರಣಗಳಿಂದ ವರಿಷ್ಠರ ಸೂಚನೆಯಂತೆ ಕೊನೆ ಗಳಿಗೆಯಲ್ಲಿ ತಮ್ಮ ರಾಜೀನಾಮೆ ವಾಪಸ್ ಪಡೆದು ಜಿಪಂ ಅಧ್ಯಕ್ಷರಾಗಿ ಮುಂದುವರಿದಿದ್ದರು. ಆದರೆ ಇದೀಗ ಮತ್ತೆ ರಾಜೀನಾಮೆ ಪಡೆದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸದ್ಯ ಜಿಪಂ ಅಧ್ಯಕ್ಷ ಮಂಜುನಾಥ ತಮ್ಮ ರಾಜೀನಾಮೆ ಪತ್ರವನ್ನು ಸರ್ಕಾರದ ಪ್ರದಾನ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಎರಡನೇ ಬಾರಿಗೆ ರಾಜೀನಾಮೆ: ಜಿಪಂನಲ್ಲಿ ಆಡಳಿತರೂಢ ಸ್ವಪಕ್ಷೀಯ ಸದಸ್ಯರ ಬಂಡಾಯದಿಂದ ಅದರಲ್ಲೂ ಆಗ ಕಾಂಗ್ರೆಸ್ನಲ್ಲಿದ್ದ ಶಾಸಕ ಡಾ.ಕೆ.ಸುಧಾಕರ್ ಬೆಂಬಲಿತ ಜಿಪಂ ಸದಸ್ಯರ ಜಿಪಂ ಸಾಮಾನ್ಯ ಸಭೆ ಬಹಿಷ್ಕಾರದಿಂದ ಬೇಸತ್ತು ಜಿಪಂ ಸ್ಥಾನಕ್ಕೆ ಎಚ್.ವಿ.ಮಂಜುನಾಥ ಜೂನ್ 26 ರಾಜೀನಾಮೆ ನೀಡಿದ್ದರು. ಆದರೆ ಆಗ ಶಾಸಕರಾಗಿದ್ದ ಡಾ.ಕೆ.ಸುಧಾಕರ್, ಪಕ್ಷದ ಶಾಸಕಾಂಗ ಸಭೆಗೆ ಹಾಜರಾದ ಹಿನ್ನಲೆಯಲ್ಲಿ ಸುಧಾಕರ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಸುಳಿವು ಅರಿತು ಸಿದ್ದರಾಮಯ್ಯ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ರಾಜ್ಯ ನಾಯಕರು ಜಿಪಂ ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಮಂಜುನಾಥ್ಗೆ ಸೂಚಿಸಿದ್ದದರು.
ಆಗ ಜು. 9ರಂದು ಆಂಗೀಕಾರಕ್ಕೆ ಎರಡು ದಿನ ಬಾಕಿ ಇರುವಾಗ ಮಂಜುನಾಥ ತಮ್ಮ ರಾಜೀನಾಮೆ ವಾಪಸ್ ಪಡೆದಿದ್ದರು. ಈಗ ಸುಧಾಕರ್ ಪಕ್ಷದಿಂದ ವಜಾಗೊಂಡು ಶಾಸಕ ಸ್ಥಾನದಿಂದ ಅರ್ನಹಗೊಂಡ ಬಳಿಕ ಸುಧಾಕರ ಪರ ಗುರುತಿಸಿಕೊಂಡಿರುವ ಪಕ್ಷದ ಸದಸ್ಯರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ತಂತ್ರ ಮಾಡಿ ಇದೀಗ ಎಚ್.ವಿ.ಮಂಜುನಾಥ್ರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಸಿ, ಸುಧಾಕರ್ ಬೆಂಬಲಿಗರಿಗೆ ಜಿಪಂ ಸದಸ್ಯರಿಗೆ ಪಟ್ಟಾಭಿಷೇಕ ಮಾಡಲು ಮುಂದಾಗಿರುವುದು ಕುತೂಹಲ ಮೂಡಿಸಿದೆ.
ಬಂಡಾಯ ಸೋಲಿಸಿ ಗೆದ್ದಿದ್ದ ಮಂಜುನಾಥ: ಜಿಪಂ ಅಧ್ಯಕ್ಷರಾಗಿದ್ದ ಪಿ.ಎನ್.ಕೇಶವರೆಡ್ಡಿ ರಾಜೀನಾಮೆಯಿಂದ ತೆರವಾಗಿದ್ದ ಜಿಪಂ ಅಧ್ಯಕ್ಷ ಸ್ಥಾನಕ್ಕೆ 2017ರ ಮಾ.7 ರಂದು ನಡೆದಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಂಡಾಯ ಕಾಂಗ್ರೆಸ್ ಸದಸ್ಯರನ್ನು ಸೋಲಿಸಿ ಎಚ್.ವಿ.ಮಂಜುನಾಥ ಆಯ್ಕೆಗೊಂಡಿದ್ದರು. ಎರಡು, ಮೂರು ಸಾಮಾನ್ಯ ಸಭೆಗಳನ್ನು ಯಶಸ್ವಿಯಾಗಿ ನಡೆಸಿದ್ದರು. ಆದರೆ 2018ರ ಡಿಸೆಂಬರ್ 26 ರಂದು ಎಚ್.ವಿ.ಮಂಜುನಾಥ ಅಧ್ಯಕ್ಷತೆಯಲ್ಲಿ ನಡೆಸಿದ್ದ ಜಿಪಂ ಸಾಮಾನ್ಯ ಸಭೆಗೆ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ಬೆಂಬಲಿತ ಕಾಂಗ್ರೆಸ್ ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕರಿಸುವ ಮೂಲಕ ಮಂಜುನಾಥ ರಾಜೀನಾಮೆಗೆ ಪಟ್ಟು ಹಿಡಿದಿದ್ದರು.
ಆದರೆ ಲೋಕಸಭಾ ಚುನಾವಣೆ ಘೊಷಣೆಯಾದ ಕಾರಣ ಮಂಜುನಾಥ ಅಧ್ಯಕ್ಷರಾಗಿ ಮುಂದುವರಿದಿದ್ದರು. ಜೂ. 24ರಂದು ಬೆಂಗಳೂರಿನ ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಪಂ ಅಧ್ಯಕ್ಷ ಎಚ್.ವಿ.ಮಂಜುನಾಥ ಹಾಗೂ ಉಪಾಧ್ಯಕ್ಷೆ ನಿರ್ಮಲ ಮುನಿರಾಜುಗೆ ರಾಜೀನಾಮೆ ನೀಡುವಂತೆ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಂಸದರ, ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಜಿಲ್ಲೆಯ ಹಾಲಿ, ಮಾಜಿ ಶಾಸಕರ ಸಮ್ಮುಖದಲ್ಲಿ ಸೂಚಿಸಿದ್ದರು. ಇದೀಗ ಮತ್ತೆ ಪಕ್ಷದ ವರಿಷ್ಠರು ರಾಜೀನಾಮೆ ಪಡೆದಿದ್ದಾರೆ.
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ: ಎಚ್.ವಿ.ಮಂಜುನಾಥ ಜಿಪಂ ಅಧ್ಯಕ್ಷರಾಗಿ ವಿಶೇಷವಾಗಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಹಾಗೂ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ವಿಶೇಷ ಒತ್ತು ಕೊಟ್ಟಿದ್ದರು. ಹಾಗಾಗಿಯೆ ಕಳೆದ ವರ್ಷ 31ನೇ ಸ್ಥಾನದಲ್ಲಿದ್ದ ಜಿಲ್ಲೆಯ ಫಲಿತಾಂಶ 20ನೇ ಸ್ಥಾನಕ್ಕೆರಿತ್ತು. ಈ ವರ್ಷವು ಕೂಡ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆಗೆ ನಿರಂತರವಾಗಿ ಸಭೆಗಳನ್ನು ನಡೆಸಿ ಶೈಕ್ಷಣಿಕ ಗುಣಮಟ್ಟಕ್ಕೆ ಒತ್ತು ಕೊಟ್ಟಿದ್ದರು.
ಜಿಪಂ ಅಧ್ಯಕ್ಷ ಮಂಜುನಾಥ ಹೇಳಿದ್ದೇನು?: ಬದಲಾದ ರಾಜಕೀಯ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಜಿಪಂ ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲು ಪಕ್ಷ ಸೂಚಿಸಿದ ಹಿನ್ನೆಲೆಯಲ್ಲಿ ಮತ್ತೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದೆ. ಈ ಅವಧಿಯಲ್ಲೂ ಈ ಸ್ಥಾನದಿಂದ ನಿರ್ವಹಿಸಬೇಕಾದ ಕರ್ತವ್ಯವನ್ನು ಆತ್ಮಸಾಕ್ಷಿಗನುಗುಣವಾಗಿ ನಿರ್ವಹಿಸಿದ್ದೇನೆ. ಆ ತಾತ್ಕಾಲಿಕ ಅವಧಿ ಮುಗಿದಿದ್ದು, ಜಿಪಂ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದೇನೆ ಎಂದು ಜಿಪಂ ಅಧ್ಯಕ್ಷ ಮಂಜುನಾಥ ತಿಳಿಸಿದರು.
ಅವಕಾಶ ಕಲ್ಪಿಸಿದ ಪಕ್ಷದ ನಿರ್ದೇಶನಗಳಿಗೆ ಬದ್ಧರಾಗಿ ನಡೆಯುವುದು ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಸಾರ್ವಜನಿಕ ಜೀವನದ ನೀತಿ ಸಂಹಿತೆಯ ಭಾಗವೆಂದು ಭಾವಿಸುತ್ತೇನೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು. ಮೂರು ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆ ಯಶಸ್ವಿಯಾಗಿ ಅಧಿಕಾರ ವಿಕೇಂದ್ರೀಕರಣದ ಆಶಯಗಳು ಈಡೇರಬೇಕು. ಜನಪ್ರತಿನಿಧಿಗಳಿಗೆ ಇನ್ನೂ ಹೆಚ್ಚಿನ ಸ್ವಾತಂತ್ರ, ಅನುದಾನ ಮತ್ತು ಸಮಯ ಇರಬೇಕೆಂಬ ನನ್ನ ಈ ಹಿಂದಿನ ಅನಿಸಿಕೆಯನ್ನು ಮತ್ತೂಮ್ಮೆ ಪುನರುಚ್ಚರಿಸಬಯಸುತ್ತೇನೆ. ಈ ಹಿನ್ನೆಲೆಯಲ್ಲಿ ತಜ್ಞರ ಮಾರ್ಗದರ್ಶನದಲ್ಲಿ ಸಾರ್ವಜನಿಕ ಚರ್ಚೆ ನಡೆಯಲಿ ಎಂದರು.
ಮಂಚೇನಹಳ್ಳಿ ಪ್ರಕಾಶ್ಗೆ ಅಧ್ಯಕ್ಷ ಸ್ಥಾನ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅರ್ನಹ ಶಾಸಕ ಡಾ.ಕೆ.ಸುಧಾಕರ್ ಪರ ಗುರುತಿಸಿಕೊಂಡಿರುವ ಜಿಲ್ಲೆಯ ಮಂಚೇನಹಳ್ಳಿ ಜಿಪಂ ಸದಸ್ಯ ಪಿ.ಎನ್.ಪ್ರಕಾಶ್ಗೆ ಅಧ್ಯಕ್ಷ ಸ್ಥಾನ ನೀಡಿ ಅವರನ್ನು ಪಕ್ಷದಲ್ಲಿಯೆ ಉಳಿಸಿಕೊಳ್ಳುವ ತಂತ್ರ ರೂಪಿಸಿ ಮಂಜುನಾಥರಿಂದ ರಾಜೀನಾಮೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್ಗೆ ಗೆಲುವು ಪ್ರತಿಷ್ಠೆಯಾಗಿರುವುದರಿಂದ ಜತೆಗೆ ಆರಂಭದಿಂದಲೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಪಿ.ಎನ್.ಪ್ರಕಾಶ್ಗೆ ಜಿಪಂ ಅಧ್ಯಕ್ಷ ಸ್ಥಾನ ಕೊಡುವ ಭರವಸೆಯನ್ನು ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಮತ್ತಿತರ ನಾಯಕರು ನೀಡಿದ್ದಾರೆ. ಆದರೆ, ಕಾಂಗ್ರೆಸ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಆಕಾಂಕ್ಷಿಗಳಿದ್ದು, ಜಿಪಂ ಅಧ್ಯಕ್ಷರ ಆಯ್ಕೆಯಲ್ಲಿ ವಿನೂತನ ಬೆಳವಣಿಗೆ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
Lok Sabha Election: ಚುನಾವಣಾ ಪ್ರಚಾರದ ಅಬ್ಬರ; ಕೂಲಿ ಕಾರ್ಮಿಕರಿಗೆ ಬರ!