ಬರಪೀಡಿತ ಬಯಲುಸೀಮೆಗೆ ನದಿ ಜೋಡಣೆ ಆಗುತ್ತಾ?
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ರಿಂದ ಚೊಚ್ಚಲ ಬಜೆಟ್ ಇಂದು • ಬರದ ಜಿಲ್ಲೆ ಜನರ ಬೆಟ್ಟದಷ್ಟು ನಿರೀಕ್ಷೆ
Team Udayavani, Jul 5, 2019, 10:19 AM IST
ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಅತ್ಯಧಿಕ ಸ್ಥಾನಗಳನ್ನು ಪಡೆದು 2ನೇ ಬಾರಿಗೆ ಕೇಂದ್ರ ದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಿರುವ ಬಜೆಟ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಬರಪೀಡಿತ ಜಿಲ್ಲೆಯ ಪಾಲಿಗೆ ಮಹತ್ವದ್ದಾಗಿರುವ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಕೂಸಾದ ನದಿ ಜೋಡಣೆ ಯೋಜನೆಗೆ ಕೇಂದ್ರ ಶ್ರೀಕಾರ ಹಾಡುತ್ತಾ ಎಂಬುದನ್ನು ಚಾತಕ ಪಕ್ಷಿಗಳಂತೆ ಎದುರು ನೋಡುವಂತಾಗಿದೆ.
ಬಿತ್ತನೆ ಪ್ರಮಾಣ ಪಾತಳಕ್ಕೆ: ಆರೇಳು ವರ್ಷಗಳಿಂದ ತೀವ್ರ ಬರಗಾಲಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವ ಜಿಲ್ಲೆಯಲ್ಲಿ ದಶಕಗಳಿಂದಲೂ ನೀರಿಗೆ ಹಾಹಾಕಾರ ಅನುಭವಿಸು ವಂತಾಗಿದ್ದು, ಈ ವರ್ಷವೂ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಕೈ ಕೊಟ್ಟಿರುವುದರಿಂದ ಬಿತ್ತನೆ ಪ್ರಮಾಣ ಪಾತಳಕ್ಕೆ ಕುಸಿದಿದೆ.
ಕಳೆದ ಬಾರಿ ನದಿ ಜೋಡಣೆ ಯೋಜನೆಯನ್ನು ಹುಸಿ ಗೊಳಿಸಿರುವ ಬಿಜೆಪಿ ಸರ್ಕಾರ, ಈ ಬಾರಿ ಪೂರ್ಣ ಬಹುಮತದೊಂದಿಗೆ ಅಧಿಕಾರದಲ್ಲಿರುವುದರಿಂದ ನದಿ ಜೋಡಣೆ ಬಗ್ಗೆ ಬರದ ನಾಡಿನ ರೈತರು, ಜನ ಸಾಮಾನ್ಯರು ಸಾಕಷ್ಟು ನಿರೀಕ್ಷೆ ಹೊಂದಿದ್ದಾರೆ.
ಕೈಗಾರಿಕೆಗಳ ಸ್ಥಾಪನೆ ಅಗತ್ಯ: ಯಾವುದೇ ಶಾಶ್ವತ ನದಿ, ನಾಲೆಗಳು ಇಲ್ಲದ ಬರಡು ಜಿಲ್ಲೆಯಲ್ಲಿ ಕೃಷಿಯೇ ಪ್ರಧಾನ ಕಸುಬಾಗಿದ್ದು, ಆದರೆ ನೀರಾವರಿ ಇಲ್ಲದ ಕಾರಣ ಕೃಷಿಯಿಂದಲೂ ವಿಮುಖರಾಗುವ ರೈತರ ಸಂಖ್ಯೆ ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಹೀಗಾಗಿ ಜಿಲ್ಲೆಗೆ ಕೃಷಿಗೆ ಪೂರಕವಾಗಿರುವ ನೀರಾವರಿ ಯೋಜನೆ ಗಳನ್ನು ಕಲ್ಪಿಸಬೇಕಿದೆ. ಜೊತೆಗೆ ದುಡಿಯುವ ಜನರು ಹೆಚ್ಚಾಗಿರುವ ಕೂಲಿ ಕಾರ್ಮಿಕರಿಗೆ ಉದ್ಯೋಗಕ್ಕೆ ಆಸರೆ ಯಾಗುವ ಕೈಗಾರಿಕೆಗಳ ಸ್ಥಾಪನೆಗೆ ಬಜೆಟ್ನಲ್ಲಿ ಕೇಂದ್ರ ಗಮನ ಹರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಮುಖ್ಯವಾಗಿ ನೆರೆಯ ಆಂಧ್ರಪ್ರದೇಶಕ್ಕೆ ಬಂದಿರುವ ಕೃಷ್ಣ ನದಿ ನೀರನ್ನು ಕೂಗಳತೆಯ ದೂರದಲ್ಲಿರುವ ಬರ ಪೀಡಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸುವ ಕಾರ್ಯವನ್ನು ಕೇಂದ್ರ ಕೈಗೆತ್ತಿಕೊಂಡರೆ ಈ ಭಾಗದ ರೈತರಿಗೆ ಹೆಚ್ಚಿನ ಲಾಭವಾಗಿ ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲಿದೆ.
ನೀರಾವರಿ ಯೋಜನೆಗಳಿಗೆ ಬೇಕಿದೆ ನೆರವು: ಜಿಲ್ಲೆಗೆ ರಾಜ್ಯ ಸರ್ಕಾರ ರೂಪಿಸಿರುವ ಎತ್ತಿನಹೊಳೆ ಯೋಜನೆ, ಹೆಚ್.ಎನ್ ವ್ಯಾಲಿ ಯೋಜನೆಗಳು ಕುಂಟುತ್ತಾ ಸಾಗಿವೆ. ಹೀಗಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ರೂಪಿಸಿರುವ ನೀರಾವರಿ ಯೋಜನೆಗಳಿಗೆ ಹಣಕಾಸಿನ ನೆರವು ಕೊಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಈ ಭಾಗದ ಸಂಸದರಾಗಿರುವ ಬಿ.ಎನ್.ಬಚ್ಚೇಗೌಡ, ಜಿಲ್ಲೆಗೆ ರೂಪಿಸಿರುವ ಎತ್ತಿನಹೊಳೆ ಮತ್ತಿತರ ಯೋಜನೆ ಗಳಿಗೆ ಕೇಂದ್ರದಿಂದ ಹಣಕಾಸು ನೆರವು ಕಲ್ಪಿಸಲಾಗುವುದು ಎಂದು ಹೇಳಿದ್ದರು.
ಬೆಳೆ ಸಂಸ್ಕರಣ ಘಟಕ: ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆ ಜೊತೆಗೆ ರೈತರ ಬೆಳೆಗಳನ್ನು ಸಂಸ್ಕ ರಣೆ ಮಾಡಲು ಅಗತ್ಯ ಸಂಸ್ಕರಣ ಘಟಕ, ವೈನ್ ಪಾರ್ಕ್ ಸ್ಥಾಪನೆ ಹಾಗೂ ಹೂವು, ಹಣ್ಣು, ತರಕಾರಿ, ರೇಷ್ಮೆ, ಹಾಲು ಉತ್ಪಾದಿಸುವ ಜಿಲ್ಲೆಯಲ್ಲಿ ಹೆದ್ದಾರಿ ಪಕ್ಕದಲ್ಲಿದ್ದು, ಅಂತಾ ರಾಷ್ಟ್ರೀಯ ಮಾರುಕಟ್ಟೆ ಸ್ಥಾಪಿಸಿದರೆ ಹೆಚ್ಚು ಅನುಕೂಲ ಎಂಬ ಮಾತು ಅನ್ನದಾತರು ವ್ಯಕ್ತಪಡಿಸುತ್ತಿ ದ್ದಾರೆ.
ಸಾಲ ಮನ್ನಾ ನಿರೀಕ್ಷೆ: ಕಳೆದ ಬಾರಿ ರೈತರ ಸಾಲ ಮನ್ನಾ ಮಾಡಲಿಲ್ಲ ಎಂಬ ಆರೋಪ ಎನ್ಡಿಎ ಸರ್ಕಾರದ ಮೇಲಿದೆ. ಆದರೆ ಈ ಬಾರಿಯೂ ಪೂರ್ಣ ಪ್ರಮಾಣ ದಲ್ಲಿ ಹೊಸ ಸರ್ಕಾರ ಮಂಡಿಸಲಿರುವ ಬಜೆಟ್ನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾ ಆಗಬಹುದು ಎನ್ನುವ ನಿರೀಕ್ಷೆ ರೈತರು ಹೊಂದಿದ್ದಾರೆ.
ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ರೈತರು ಇದ್ದು, ರಾಜ್ಯ ಸರ್ಕಾರದ ಹಲವು ಷರತ್ತುಗಳು ಬಹಳಷ್ಟು ರೈತರಿಗೆ ಸಾಲ ಮನ್ನಾ ಯೋಜನೆ ಲಾಭವಾಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಬಹುದು ಎನ್ನುವ ನಿರೀಕ್ಷೆಯನ್ನು ರೈತರು ಹೊಂದಿದ್ದಾರೆ.
ವಿಶೇಷವಾಗಿ ಬೆಳೆ ವಿಮಾ ಕಳೆದ ವರ್ಷದ ಹಣ ಕೈ ಸೇರದ ಬಗ್ಗೆ ರೈತರು ಆಕ್ರೋಶಗೊಂಡಿದ್ದು, ಅದರ ಹಣ ಕೂಡ ಈ ಬಜೆಟ್ನಲ್ಲಿ ಬಿಡುಗಡೆ ಆಗಬಹುದೆಂದು ನಿರೀಕ್ಷಿಸಿದ್ದಾರೆ. ಉಳಿದಂತೆ ಜಿಲ್ಲೆಯ ವಿಶ್ವ ವಿಖ್ಯಾತ ನಂದಿ ಬೆಟ್ಟದ ಅಭಿವೃದ್ಧಿ, ಸಂಸದರ ಆದರ್ಶ ಗ್ರಾಮಕ್ಕೆ ಹೆಚ್ಚಿನ ಅನುದಾನ, ಗ್ರಾಮೀಣ ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ.
● ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್
Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ
Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ
Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್
Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ