ಪ್ರವಾಸೋದ್ಯಮ, ಕೈಗಾರಿಕಾ ವಲಯಕ್ಕೆ ಬೇಕು ಆದ್ಯತೆ
Team Udayavani, Mar 4, 2020, 3:00 AM IST
ಚಿಕ್ಕಬಳ್ಳಾಪುರ: ಭಾರತ ರತ್ನಗಳಾದ ಜಗತ್ ಪ್ರಸಿದ್ಧ ಇಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ, ಖ್ಯಾತ ವಿಜ್ಞಾನಿ ಸಿ.ಎನ್.ಆರ್.ರಾವ್, ವೈಚಾರಿಕ ಚಿಂತಕ ಡಾ.ಎಚ್.ನರಸಿಂಹಯ್ಯರಂತಹ ಮಹಾನ್ ದಿಗ್ಗಜರು ಹುಟ್ಟಿ ಬೆಳೆದ ಹೆಗ್ಗಳಿಕೆ ಚಿಕ್ಕಬಳ್ಳಾಪುರಕ್ಕಿದ್ದರೂ ಅಭಿವೃದ್ಧಿ ಮಾನದಂಡವಾಗಿರುವ ಪ್ರವಾಸೋದ್ಯಮ ಹಾಗೂ ಕೈಗಾರಿಕಾ ವಲಯದ ಪ್ರಗತಿಯಲ್ಲಿ ಇಂದಿಗೂ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ತೀರಾ ಹಿಂದುಳಿದಿದೆ.
ಅಭಿವೃದ್ಧಿಗೆ ಹಿನ್ನಡೆ: ಜಿಲ್ಲೆಯಾಗಿ 12 ವರ್ಷ ಕಳೆದಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ಅಧಿಕಾರ ಶಾಹಿ ಬಿಡಿ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳಲ್ಲಿನ ಇಚ್ಛಾಶಕ್ತಿ ಹಾಗೂ ದೂರದೃಷ್ಟಿ ಕೊರತೆಯಿಂದ ಚಿಕ್ಕಬಳ್ಳಾಪುರ ಪ್ರವಾಸೋದ್ಯಮ ಸೇರಿದಂತೆ ಕೈಗಾರಿಕಾ ಅಭಿವೃದ್ಧಿಯಲ್ಲಿ ಎಳ್ಳಷ್ಟು ಪ್ರಗತಿ ಕಾಣದೇ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಹಿನ್ನಡೆ ಆಗಿದೆ. ಈ ಬಾರಿ ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಡಾ.ಕೆ.ಸುಧಾಕರ್, ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಪ್ರವಾಸೋದ್ಯಮ ಹಾಗೂ ಕೈಗಾರಿಕಾ ವಲಯಕ್ಕೆ ಉತ್ತೇಜನ ದೊರೆಕಿಸಿ ಕೊಡುತ್ತಾರೆಯೇ ಎಂಬ ಭರವಸೆ ಜಿಲ್ಲೆಯ ಜನರದಾಗಿದೆ.
ನಂದಿ ಅಭಿವೃದ್ಧಿ ಪ್ರಾಧಿಕಾರ ಅಗತ್ಯ: ಐತಿಹಾಸಿಕ ನಂದಿಗಿರಿಧಾಮ ಹೊಂದಿರುವ ಚಿಕ್ಕಬಳ್ಳಾಪುರ ಬರಡು ಜಿಲ್ಲೆಯಾದರೂ ಪ್ರವಾಸೋದ್ಯಮಕ್ಕೆ ವಿಫುಲವಾದ ಅವಕಾಶಗಳು ಇವೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮೂಲ ಸೌಕರ್ಯಗಳು ಇಲ್ಲದೇ ಪ್ರವಾಸಿ ತಾಣಗಳು ಭಣಗುಡುತ್ತಿವೆ. ತೋಟಗಾರಿಕೆ, ಅರಣ್ಯ ಹಾಗೂ ಪ್ರವಾಸೋದ್ಯಮ ಹೀಗೆ ವಿವಿಧ ಇಲಾಖೆಗಳಿಗೆ ಹಂಚಿ ಹೋಗಿರುವ ನಂದಿಗಿರಿಧಾಮವನ್ನು ಒಂದೇ ಸೂರಿನಡಿ ಅಭಿವೃದ್ಧಿಪಡಿಸುವ ಸಲುವಾಗಿ ನಂದಿ ಪ್ರಾಧಿಕಾರ ರಚನೆ ಅಗತ್ಯವಾಗಿತ್ತು. ಈ ಹಿಂದೆ ಕ್ಷೇತ್ರದ ಸಂಸದರಾಗಿದ್ದ ವೀರಪ್ಪ ಮೊಯ್ಲಿ ನಂದಿ ಪ್ರಾಧಿಕಾರ ರಚನೆಗೆ ಒಲವು ತೋರಿದ್ದರು.
ಆದರೆ ಅನುಷ್ಠಾನವಾಗಲಿಲ್ಲ. ಪ್ರವಾಸೋದ್ಯಮ ಇಲಾಖೆ ಗುರುತಿಸಿರುವ ಸುಮಾರು 20 ಕ್ಕೂ ಹೆಚ್ಚು ಪ್ರವಾಸಿ ತಾಣಗಳು ಇದ್ದು ಅವುಗಳನ್ನು ಮೂಲ ಸೌಕರ್ಯ ಒದಗಿಸಿ ಪ್ರವಾಸಿಗರನ್ನು ಆಕರ್ಷಿಸಿದರೆ ಜಿಲ್ಲೆಯ ಅಭಿವೃದ್ಧಿಗೆ ಒತ್ತು ಸಿಗಲಿದೆ. ವಿಶೇಷವಾಗಿ ನಂದಿ ಗಿರಿಧಾಮ, ಸೆಲ್ಫಿಸ್ಪಾಟ್ ಅವುಲುಬೆಟ್ಟ, ಬಾಗೇಪಲ್ಲಿ ಗುಮ್ಮನಾಯಕನಪಾಳ್ಯ, ಗಡಿದಂ, ಕೈವಾರ, ಮುರಗಮಲ್ಲ, ತಲಕಾಯಲಬೆಟ್ಟ, ವಿಧುರಾಶ್ವತ್ಥ, ಸ್ಕಂದಗಿರಿ ಮತ್ತಿತರ ಸ್ಥಳಗಳನ್ನು ಪುನಶ್ಚೇತನಗೊಳಿಸಬೇಕಿದೆ.
ಕೈಗಾರಿಕೆಗಳು ಸ್ಥಾಪನೆಯಾಗಲಿ: ಕೃಷಿ ಪ್ರಧಾನವಾದ ಚಿಕ್ಕಬಳ್ಳಾಪುರ ಜಿಲ್ಲೆ ಬರೋಬ್ಬರಿ 1.54 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ಕೃಷಿ ಮಾಡುತ್ತಾರೆ. ಆದರೆ ಜಿಲ್ಲೆಯಲ್ಲಿ ಇದುವರೆಗೂ ಕೃಷಿ ಅಭಿವೃದ್ಧಿಗೆ ಪೂರಕವಾದ ಯಾವುದೇ ಕೈಗಾರಿಕೆ ತಲೆ ಎತ್ತಿಲ್ಲ. ಟೊಮೆಟೋ, ಆಲೂಗಡ್ಡೆ, ದ್ರಾಕ್ಷಿ, ಹೂವು, ಹಣ್ಣು ತರಕಾರಿ ಬೆಳೆಯುವುದರಲ್ಲಿ ಜಿಲ್ಲೆಯ ರೈತರು ಬರದ ನಡವೆಯು ಮುಂಚೂಣಿಯಲ್ಲಿದ್ದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ.
ಪಕ್ಕದ ಕೋಲಾರ ಜಿಲ್ಲೆಯ ವೇಮಗಲ್, ನರಸಾಪುರ ಹೋಬಳಿಗಳಲ್ಲಿ ಕೈಗಾರಿಕ ಕ್ರಾಂತಿ ಕ್ಷಿಪ್ರಗತಿಯಲ್ಲಿ ಆಗಿದೆ. ಆದರೆ ಚಿಕ್ಕಬಳ್ಳಾಪುರ ರಾಜಧಾನಿ ಬೆಂಗಳೂರಿಗೆ ಅದರಲ್ಲೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೂಗಳತೆಯ ದೂರದಲ್ಲಿದ್ದರೂ ಕೈಗಾರಿಕಾ ವಲಯ ಅಭಿವೃದ್ಧಿ ಇಲ್ಲದೇ ಯಾವುದೇ ಕೈಗಾರಿಕೋದ್ಯಮಿಗಳು ಜಿಲ್ಲೆಗೆ ಪ್ರವೇಶಿಸದಿರುವುದು ಎದ್ದು ಕಾಣುತ್ತಿದೆ.
ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯ ಮಸ್ತೇನಹಳ್ಳಿ ಹಾಗೂ ಕನಿಶೆಟ್ಟಿಹಳ್ಳಿ ಸಮೀಪ ಕೈಗಾರಿಕೆಗಳ ಸ್ಥಾಪನೆಗೆ ಹಲವು ವರ್ಷಗಳ ಹಿಂದೆಯೇ ಭೂಮಿ ಮಂಜೂರಾದರೂ ಕೈಗಾರಿಕೆಗಳ ಸ್ಥಾಪನೆ ನೆನಗುದಿಗೆ ಬಿದ್ದು ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿಗಳಲ್ಲಿ ನಿರಾಶೆ ಮೂಡಿಸಿ ದುಡಿಯುವ ಕೈಗಳಿಗೆ ಕೆಲಸ ಇಲ್ಲದೇ ನಗರ ಪ್ರದೇಶಗಳಿಗೆ ವಲಸೆ ಬರುವಂತಾಗಿದೆ. ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕುಡುಮಲಕುಂಟೆಯಲ್ಲಿ ಕೈಗಾರಿಕಾ ವಲಯಕ್ಕೆ ಇನ್ನಷ್ಟು ಉತ್ತೇಜನ ಸಿಗಬೇಕಿದೆ.
ಚಿಕ್ಕಬಳ್ಳಾಪುರ ನಗರಕ್ಕೆ ಬೇಕಿದ ಉಪ ನಗರ ಭಾಗ್ಯ: ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಸಂಚಾರ ಹಾಗೂ ಜನ ದಟ್ಟಣೆ, ವಾಯು ಮಾಲಿನ್ಯ ನಿಯಂತ್ರಿಸುವುದು ಹಿಂದೆಗಿಂತಲೂ ಈಗ ಹೆಚ್ಚು ಅನಿವಾರ್ಯವಾಗಿದ್ದು, ಬೆಂಗಳೂರಿಗೆ ಕೇವಲ 54 ಕಿ.ಮೀ ದೂರದಲ್ಲಿರುವ ಚಿಕ್ಕಬಳ್ಳಾಪುರ ಉಪ ನಗರಕ್ಕೆ ಹೇಳಿ ಮಾಡಿಸಿದಂತಹ ಯೋಗ್ಯ ಸ್ಥಳವಾಗಿದೆ. ಅದರಲ್ಲೂ ಐಟಿ, ಬಿಟಿ ಕಂಪನಿಗಳ ಸ್ಥಾಪನೆಗೆ ಜಿಲ್ಲೆಯಲ್ಲಿ ವಿಫುಲವಾದ ಅವಕಾಶಗಳಿವೆ. ಈಗಾಗಲೇ ವಿಶ್ವ ವಿಖ್ಯಾತ ನಂದಿಗಿರಿಧಾಮ ಸುತ್ತಲೂ ಅನೇಕ ಲೇಔಟ್ಗಳು, ವಿಲ್ಲಾ, ಅರ್ಪಾಟ್ಮೆಂಟ್ಗಳು ಬೆಂಗಳೂರು ನಿವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ಸೌಲಭ್ಯಗಳಿಂದ ತಲೆಎತ್ತಿ ನಿಂತಿವೆ.
ಚಿಕ್ಕಬಳ್ಳಾಪುರ ಮುಖಾಂತರ ಬೆಂಗಳೂರು ಹೈದ್ರಾಬಾದ್ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಇದೆ. ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇವಲ 26 ಕಿ.ಮೀ ದೂರದಲ್ಲಿರುವ ಚಿಕ್ಕಬಳ್ಳಾಪುರ ಬೆಂಗಳೂರಿಗೆ ಪರ್ಯಾಯ ನಗರವಾಗಿ ಬೆಳೆಯುವ ಎಲ್ಲಾ ಲಕ್ಷ್ಮಣಗಳಿದ್ದು, ಪ್ರಸಕ್ತ ಬಜೆಟ್ನಲ್ಲಿ ಚಿಕ್ಕಬಳ್ಳಾಪುರವನ್ನು ಉಪ ನಗರವಾಗಿ ಘೋಷಿಸಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸುವುದೇ ಎಂಬುದನ್ನು ಕಾದು ನೋಡಬೇಕಿದೆ. ರಾಜಧಾನಿಗೆ ಹತ್ತಿರ ಇರುವ ರಾಮನಗರ, ತುಮಕೂರು, ಮಂಡ್ಯ ಜಿಲ್ಲೆಗಳಿಗೆ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೂ ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಪಥಕ್ಕೆ ಹಿನ್ನಡೆ ಆಗಿದೆ.
ಮೈತ್ರಿ ಸರ್ಕಾರದಲ್ಲಿ ಜಿಲ್ಲೆಗೆ ಸಿಕ್ಕಿದ್ದು ,ಈಡೇರಿದ್ದೇನು?: ಕಳೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್ನಲ್ಲಿ ಜಿಲ್ಲೆಯ ಸಣ್ಣ ನೀರಾವರಿ ಕೆರೆಗಳ ಅಭಿವೃದ್ಧಿಗೆ 100 ಕೋಟಿಗೆ ಅನುದಾನ ಒದಗಿಸಿದ್ದರು. ಮಹಿಳೆಯರಲ್ಲಿ ಕ್ಯಾನ್ಸರ್ ಪತ್ತೆಗೆ ಡಿಜಿಟಲ್ ಸ್ತನರೇಖೆ ಘಟಕ ಸ್ಥಾಪಿಸುವುದಾಗಿ ಹೇಳಿದ್ದರೂ ಇನ್ನೂ ಕಾರ್ಯಗತವಾಗಿಲ್ಲ. 25 ವರ್ಷಗಳ ಹೋರಾಟಕ್ಕೆ ಸ್ಪಂದಿಸಿ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರು ಹೋಬಳಿ ಕೇಂದ್ರಕ್ಕೆ ತಾಲೂಕು ಸ್ಥಾನಮಾನ ನೀಡಿದ್ದು, ಒಂದು ಈಡೇರುವ ಹಂತದಲ್ಲಿದೆ.
ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯದ ಘಂಟಮಲಮ್ಮ ಹಳ್ಳಕ್ಕೆ ಡ್ಯಾಂ ನಿರ್ಮಿಸಲು 20 ಕೊಟಿ ಅನುದಾನ ಘೋಷಿಸಿದ್ದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಚಿಕ್ಕಬಳ್ಳಾಪುರದಲ್ಲಿ ಹೊಸ ಕ್ರೀಡಾ ವಸತಿ ಶಾಲೆ ಸ್ಥಾಪನೆ ಬಗ್ಗೆ ಹೇಳಿದ್ದರೂ ಆಗಿಲ್ಲ. ಎತ್ತಿನಹೊಳೆ ಯೋಜನೆ ತ್ವರಿತಗತಿಗೆ ಕ್ರಮ ವಹಿಸುವುದಾಗಿ ಹೇಳಿದರೂ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿಲ್ಲ. ಚಿಕ್ಕಬಳ್ಳಾಪುರ ತಾಲೂಕು ಆಸ್ಪತ್ರೆ ಮೇಲ್ದರ್ಜೆಗೆ ಏರಿದರೂ ವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ನೆನಗುದಿಗೆ ಬಿದ್ದಿದೆ. ಇದೇ ಮೈತ್ರಿ ಸರ್ಕಾರ ಜಿಲ್ಲೆಗೆ ಘೋಷಿಸಿ ಮೊಬೈಲ್ ಬಿಡಿ ಭಾಗಗಳ ಉತ್ಪಾದನಾ ಘಟಕ ಕೂಡ ಬರೀ ಘೋಷಣೆಗೆ ಸೀಮಿತವಾಯಿತು.
ಹಿಂದಿನ ಬಜೆಟ್ನಲ್ಲಿ ಜಿಲ್ಲೆಗೆ ಮೊಬೈಲ್ ಬಿಡಿ ಭಾಗಗಳ ಘಟಕ ಘೋಷಣೆಯಾದರೂ ಕೆಲಸ ಆರಂಭಗೊಂಡಿಲ್ಲ. ಅದು ನಮ್ಮ ಸರ್ಕಾರದಲ್ಲಿ ಘೋಷಣೆ ಆಗಿಲ್ಲ. ನಾವು ಏನು ಹೇಳುತ್ತೇವೆಯೋ ಅದನ್ನು ಮಾಡುತ್ತೇವೆ. ಈ ಬಾರಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ನಂದಿ ಗಿರಿಧಾಮದ ಸಮಗ್ರ ಅಭಿವೃದ್ಧಿಗೆ ನಂದಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಬೇಕೆಂಬ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ.
-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ
ಜಿಲ್ಲೆಯಲ್ಲಿ ಕೃಷಿ ಆಧಾರಿತ ಕುಟುಂಬಗಳು ಜಾಸ್ತಿ ಇವೆ. ಜಿಲ್ಲೆಯ ದುಡಿಯುವ ವರ್ಗಕ್ಕೆ ಉದ್ಯೋಗಾವಕಾಶಗಳು ಹೆಚ್ಚಿನ ಪ್ರಮಾಣದಲ್ಲಿ ಕಲ್ಪಿಸಬೇಕಾದರೆ ಕೃಷಿ ಆಧಾರಿತ ಕೈಗಾರಿಕೆಗಳು ಹೆಚ್ಚು ಸ್ಥಾಪನೆ ಅವಶ್ಯಕತೆ ಇದೆ. ಪಕ್ಕದ ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಕೈಗಾರಿಕಾ ವಲಯಗಳ ಅಭಿವೃದ್ಧಿ ನಿರೀಕ್ಷೆಗೂ ಮೀರಿದೆ. ಆದರೆ ಬೆಂಗಳೂರಿಗೆ ಹತ್ತಿರ ಇದ್ದರೂ ಚಿಕ್ಕಬಳ್ಳಾಪುರ ಜಿಲ್ಲೆ ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಈ ಬಜೆಟ್ನಲ್ಲಿ ಜಿಲ್ಲೆಗೆ ಹೆಚ್ಚಿನ ಅವಕಾಶ ಒದಗಿಸಬೇಕು.
-ಬಿ.ಎನ್.ಮುನಿಕೃಷ್ಣಪ್ಪ, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ
* ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
Lok Sabha Election: ಚುನಾವಣಾ ಪ್ರಚಾರದ ಅಬ್ಬರ; ಕೂಲಿ ಕಾರ್ಮಿಕರಿಗೆ ಬರ!
LS polls 2024: ಅಸೆಂಬ್ಲಿಯಲ್ಲಿ ಜಂಗೀಕುಸ್ತಿ, ಲೋಕ ಸಮರದಲ್ಲಿ ದೋಸ್ತಿ!
High temperature: ಉರಿ ಬಿಸಿಲಿಗೆ ಹೈರಾಣ: ಮಳೆಗಾಗಿ ಕಾದ ಜನ!
Lok Sabha election: ಎಸ್ಸೆಸ್ಸೆಲ್ಸಿ, ಪಿಯುಸಿ ಓದಿರುವ ಅಭ್ಯರ್ಥಿಗಳೇ ಹೆಚ್ಚು!
MUST WATCH
ಹೊಸ ಸೇರ್ಪಡೆ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್