ಧಾನ್ಯ ಖರೀದಿ ಕೇಂದ್ರ ಆರಂಭಿಸಿ
ರೈತರಿಗೆ ಬೆಂಬಲ ಬೆಲೆ ನೀಡಿ ಧಾನ್ಯ ಖರೀದಿಸಿ: ಅಧಿಕಾರಿಗಳಿಗೆ ಡಿಸಿ ಸೂಚನೆ
Team Udayavani, Jan 2, 2020, 1:11 PM IST
ಚಿಕ್ಕಮಗಳೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ರಾಗಿ, ಭತ್ತ ಮತ್ತು ಜೋಳದ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ಬೆಂಬಲ ಬೆಲೆ ನೀಡಿ ಧಾನ್ಯಗಳನ್ನು ಖರೀದಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೃಷಿ ಇಲಾಖೆ ಫ್ರೂಟ್ಸ್ ತಂತ್ರಾಂಶದ ಮೂಲಕ ರೈತರ ಮಾಹಿತಿಯನ್ನು ಸಂಗ್ರಹಿಸಿ ಮತ್ತು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನೋಂದಣಿಯಾಗಿರುವ ರೈತರಿಂದ ರಾಗಿ, ಭತ್ತ ಮತ್ತು ಜೋಳವನ್ನು ಖರೀದಿಸುವಂತೆ ಸೂಚಿಸಲಾಯಿತು.
ಎಕರೆಗೆ 16 ಕ್ವಿಂಟಲ್ನಂತೆ ನಿಗದಿಪಡಿಸಿ ಪ್ರತಿ ರೈತರಿಂದ 40 ಕ್ವಿಂಟಲ್ ಭತ್ತ ಮತ್ತು ಎಕರೆಗೆ 15 ಕ್ವಿಂಟಲ್ನಂತೆ ನಿಗದಿಪಡಿಸಿ 75 ಕ್ವಿಂಟಲ್ ರಾಗಿಯನ್ನು ಸರ್ಕಾರದ ಮಾನದಂಡಗಳಡಿ ಖರೀದಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯ ತರೀಕೆರೆ, ಕಡೂರು ಮತ್ತು ಬೀರೂರಿನಲ್ಲಿ ರಾಗಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಈ ಭಾಗಗಳಲ್ಲಿ ಮತ್ತು ಅಗತ್ಯವಿದ್ದರೆ ಅಜ್ಜಂಪುರದಲ್ಲೂ ರಾಗಿ ಖರೀದಿ ಕೇಂದ್ರ ಮತ್ತು ಎನ್.ಆರ್.ಪುರ, ಮೂಡಿಗೆರೆ ಹಾಗೂ ಶೃಂಗೇರಿ ಭಾಗಗಳಲ್ಲಿ ಭತ್ತ ಖರೀದಿ ಕೇಂದ್ರವನ್ನು ತೆರೆಯುವುದಾಗಿ ಕೃಷಿ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಭತ್ತವನ್ನು 2 ರೀತಿಯಲ್ಲಿ ವಿಭಾಗಿಸಿದ್ದು, ಸಾಮಾನ್ಯ ಭತ್ತ ಕ್ವಿಂಟಲ್ಗೆ ರೂ. 1815, ಎ ಗ್ರೇಡ್ ಭತ್ತಕ್ಕೆ 1835ರೂ., ಜೋಳದಲ್ಲಿ
ಹೈಬ್ರಿàಡ್ ಬಿಳಿ ಜೋಳ ಕ್ವಿಂಟಲ್ಗೆ 2550ರೂ., ಮಾಲ್ದಂಡಿ ಬಿಳಿಜೋಳ ಕ್ವಿಂಟಲ್ಗೆ 2570 ಮತ್ತು ರಾಗಿ ಕ್ವಿಂಟಲ್ಗೆ 3150 ರೂ. ನಿಗದಿಪಡಿಸಿದ್ದು, ನಿಗದಿಪಡಿಸಿದ ಬೆಲೆಯನ್ನು ರೈತರಿಗೆ ಪಾವತಿಸಿ ಧಾನ್ಯಗಳನ್ನು ಖರೀದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಎಚ್. ಎಲ್.ನಾಗರಾಜ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮತ್ತು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಪ್ರಭಾರ ಉಪನಿರ್ದೇಶಕ ಚಂದ್ರಶೇಖರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.