ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಕ್ರಮ: ರಾಜೇಗೌಡ
Team Udayavani, Oct 7, 2020, 5:36 PM IST
ಎನ್. ಆರ್. ಪುರ: ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಲ್ಲಾ ಧರ್ಮೀಯರ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.
ಇಲ್ಲಿನ ಸಿಂಹನಗದ್ದೆ ಬಸ್ತಿಮಠದಲ್ಲಿ ಮಂಗಳವಾರ ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆಯಾದ ಅನುದಾನದಲ್ಲಿ ತಡೆಗೋಡೆ ನಿರ್ಮಾಣ ಮತ್ತು ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಹುಲಿ ಮತ್ತು ಹಸು ತಮ್ಮ ವೈರತ್ವವನ್ನು ಮರೆತುಸಹೋದರತೆಯಿಂದ ಬಾಳಿದ ಈ ಕ್ಷೇತ್ರದಲ್ಲಿ ಸಹಬಾಳ್ವೆಯಿದ್ದರೆ ಮಾತ್ರ ಯಶಸ್ಸು ಸಾಧ್ಯ ಎಂಬಸಂದೇಶವಿದೆ. ಸಮ್ಮಿಶ್ರ ಸರ್ಕಾರದ ಅವ ಧಿಯಲ್ಲಿಈ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗಿತ್ತು.ಪ್ರವಾಸೋದ್ಯಮ ಇಲಾಖೆಯಿಂದ ಪಟ್ಟಣದ ಬಸ್ತಿಮಠ, ಹಳೆಪೇಟೆಗುತ್ಯಮ್ಮ, ಮಾರಿಕಾಂಬಾ ದೇವಸ್ಥಾನದಿಂದ ಬನ್ನಿಮರದ ರಸ್ತೆ, ಅಂತರಘಟ್ಟಮ್ಮ ದೇವಸ್ಥಾನದ ವ್ಯಾಪ್ತಿಯಲ್ಲಿ ವಿದ್ಯುತ್ ದೀಪ ಅಳವಡಿಕೆ ಮಂಜೂರಾಗಿರುವ ರೂ.1 ಕೋಟಿ ಅನುದಾನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಸಾ.ರಾ. ಮಹೇಶ್ ಅವರು ಬಿಡುಗಡೆ ಗೊಳಿಸಿದ್ದರು.
ಮಾಜಿ ಶಾಸಕರಿಗೆ ಮಾಹಿತಿ ಕೊರತೆಯಿಂದ ಪ್ರವಾಸೋದ್ಯಮ ಸಚಿವ ಸಿ,ಟಿ. ರವಿ ಅನುದಾನ ಬಿಡುಗಡೆ ಮಾಡಿದ್ದಾರೆಂದು ಸುಳ್ಳು ಹೇಳಿಕೆ ನೀಡಿದ್ದಾರೆ. ಸಿ.ಟಿ. ರವಿ ಅವರು ಒಂದು ರೂ.ಅನುದಾನವನ್ನು ನೀಡಿಲ್ಲ ಎಂದು ದೂರಿದರು. ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷನಾಗಿದ್ದಾಗ ಪ್ರತಿ ಶಾಸಕರಿಗೆ ರೂ.1 ಕೋಟಿ ಅನುದಾನ, ಶೃಂಗೇರಿ ಕ್ಷೇತ್ರದ ವ್ಯಾಪ್ತಿಗೆ ರೂ.16 ಕೋಟಿ ಅನುದಾನ ಮೀಸಲಿಡಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ದಿನದಲ್ಲಿ ಈ ಅನುದಾನ ಹಿಂಪಡೆದಿದೆ.ಇದರಿಂದ ಕ್ಷೇತ್ರದ ವ್ಯಾಪ್ತಿಯ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ. ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಮುಂದುವರಿದಿದ್ದರೆ ಇದುವರೆಗೂ ಕ್ಷೇತ್ರ ಸಾಕಷ್ಟು ಅಭಿವೃದ್ಧಿಪಥದತ್ತ ಸಾಗುತ್ತಿತ್ತು ಎಂದರು.
ಸಿಂಹನಗದ್ದೆ ಬಸ್ತಿಮಠದ ಲಕ್ಷ್ಮೀ ಸೇನಾಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ, ಟಿ.ಡಿ. ರಾಜೇಗೌಡರು ಶಾಸಕರಾಗುವ ಮೊದಲು ಚುನಾವಣೆ ಸಂದರ್ಭದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದಾಗ ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ ಎಂದರು.
ಪಪಂ ಸದಸ್ಯರಾದ ಮುಕುಂದ, ಶೋಜಾ, ಪ್ರಶಾಂತ್ ಶೆಟ್ಟಿ, ಸೈಯದ್ ವಸೀಂ, ಮುನವರ್ ಪಾಷ, ಜುಬೇದ, ಸುರಯ್ಯಬಾನು ,ಕುಮಾರಸ್ವಾಮಿ, ಜಿಪಂ ಸದಸ್ಯ ಪಿ.ಆರ್. ಸದಾಶಿವ, ಮುಖಂಡರಾದ ಅಬೂಬಕರ್, ಈ.ಸಿ. ಜೋಯಿ, ಸಿಗ್ಬತುಲ್ಲಾ ಮತ್ತಿತರರು ಇದ್ದರು.
9ರಂದು ಉಪವಾಸ ಸತ್ಯಾಗ್ರಹ : ಕ್ಷೇತ್ರದ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರದ ಅವ ಧಿಯಲ್ಲಿ ಬಿಡುಗಡೆಯಾಗಿದ್ದ ಅನುದಾನವನ್ನು ಪುನಃ ಬಿಡುಗಡೆ ಮಾಡುವಂತೆ ಆಗ್ರಹಿಸಿ ಹಾಗೂ ಅಭಿವೃದ್ಧಿ ಕಾಮಗಾರಿಗೆ ಅಡ್ಡಿಮಾಡುತ್ತಿರುವುದನ್ನು ಖಂಡಿಸಿ ಅ. 9ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಕೊಪ್ಪದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.