ಬಾಬಾಬುಡನ್ಗಿರಿ: ಉರೂಸ್ ನಡೆಸದೆ ಹಿಂತಿರುಗಿದ ಶಾಖಾದ್ರಿಗಳು
Team Udayavani, Mar 3, 2018, 6:35 AM IST
ಚಿಕ್ಕಮಗಳೂರು: ಪೂಜೆ ಸಲ್ಲಿಸಲು ಅವಕಾಶ ನೀಡದ ಜಿಲ್ಲಾಡಳಿತದ ಕ್ರಮ ವಿರೋಧಿಸಿ ಶಾಖಾದ್ರಿ ನೇತೃತ್ವದಲ್ಲಿ ಫಕೀರರು ಉರೂಸ್ ನಡೆಸದೆ ಹಿಂತಿ ರುಗಿದ ಘಟನೆ ಶುಕ್ರವಾರ ಬಾಬಾಬುಡನ್ ಗಿರಿ ದರ್ಗಾದಲ್ಲಿ ನಡೆಯಿತು.
ಶುಕ್ರವಾರ ಸಂದಿಲ್ ಉರುಸ್ ನಡೆಸಲು ಸೈಯದ್ ಗೌಸ್ ಮೊಹಿಯು ದ್ದೀನ್ ಶಾಖಾದ್ರಿ ನೇತೃತ್ವದಲ್ಲಿ ಅತ್ತಿಗುಂಡಿಯಿಂದ ಗಂಧವನ್ನು ಹೊತ್ತು ಮೆರವಣಿಗೆಯಲ್ಲಿ ಆಗಮಿಸಿದ ಫಕೀರರು ಗುಹೆಯ ಮುಖ್ಯದ್ವಾರಕ್ಕೆ ಬಂದರು. ಇದಕ್ಕೂ ಮೊದಲೇ ಶಾಖಾದ್ರಿ ಕಡೆಯವರು ಐ.ಡಿ.ಪೀಠದ ಮುಜರಾಯಿ ಕಚೇರಿಗೆ ಬಂದು ಶಾಖಾದ್ರಿಗೆ ಗುಹೆಯಲ್ಲಿ ಸಂದಿಲ್ ಉರೂಸ್ ನಡೆಸಲು ಅವಕಾಶ ನೀಡು ವಂತೆ ಮನವಿ ಮಾಡಿಕೊಂಡರು. ಇದಕ್ಕೆ ಒಪ್ಪದ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ “ಸರ್ವೋಚ್ಚ ನ್ಯಾಯಾ ಲಯದ ಆದೇಶದಂತೆ ಮಾತ್ರ ಉರೂಸ್ ನಡೆಸಲು ಅವಕಾಶ ನೀಡಲಾ ಗುವುದು. ನ್ಯಾಯಾಲಯವು ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದೆ. ಅದರಂತೆ ಮುಜಾವರ್ ಅವರಿಗೆ ಮಾತ್ರ ಗುಹೆಯೊಳಗೆ ಉರೂಸ್ ನಡೆಸಲು ಅವಕಾಶವಿದೆ. ಇದನ್ನು ಹೊರತುಪಡಿಸಿ ಬೇರೆ ರೀತಿಯ ಪೂಜೆಗಳಿಗೆ ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದರು.
ಅನಂತರ ಮೆರವಣಿಗೆಯಲ್ಲಿ ಗುಹೆಯ ಮುಖ್ಯದ್ವಾರಕ್ಕೆ ಬಂದ ಶಾಖಾದ್ರಿ ಹಾಗೂ ಫಕೀರರು ಗುಹೆಯ ಮುಂಭಾಗದಲ್ಲಿಯೇ ಕೆಲಕಾಲ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ದೇಶದ ವಿವಿಧೆಡೆ ಗಳಿಂದ ಬಂದಿದ್ದ ಫಕೀರರು ವಿವಿಧ ಸಾಹಸ ಕಲೆಗಳನ್ನು ಪ್ರದರ್ಶಿಸಿದರು. ಇಸ್ಲಾಂ ಪರ ಘೋಷಣೆಗಳನ್ನು ಕೂಗಿದ ನಂತರ ಶಾಖಾದ್ರಿ ಹಾಗೂ ಫಕೀರರು ಗುಹೆಯ ಒಳಗೆ ಪ್ರವೇಶಿಸದೆ ಫಕೀರ್ ಚೌಕಿಗೆ ಹಿಂತಿರುಗಿದರು.