ರೇಣುಕಾಚಾರ್ಯರ ದಶಧರ್ಮ ಸೂತ್ರ ಸರ್ವರಿಗೂ ದಾರಿದೀಪ
ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ| ವೀರಸೋಮೇಶ್ವರ ಜಗದ್ಗುರುಗಳ ಅಭಿಮತ
Team Udayavani, Feb 25, 2021, 6:12 PM IST
ಶಿವಮೊಗ್ಗ: ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ದಶಧರ್ಮ ಸೂತ್ರಗಳು ಹಾಗೂ ಅವರ ಚಿಂತನೆಗಳು ಸರ್ವ ಸಮಾಜಕ್ಕೂ
ದಾರಿದೀಪ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ| ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ
ಭಗವತ್ಪಾದರು ಅಭಿಪ್ರಾಯಪಟ್ಟರು.
ತಾಲೂಕಿನ ಹರಕೆರೆ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿ ನಂತರ ನಡೆದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಹರಕೆರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರಂಭಾಪುರೀಶ
ಗುರುನಿವಾಸದ ಕಟ್ಟಡ ಕಾರ್ಯ ಎಸ್. ಎಸ್. ಜ್ಯೋತಿಪ್ರಕಾಶ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಸರಕಾರ ಹಾಗೂ ಭಕ್ತರು ನೆರವು ಒದಗಿಸಿದ್ದಾರೆ. ಇದರ ಪಕ್ಕದಲ್ಲೇ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದ ಆಶಯವನ್ನು ಸಚಿವ ಕೆ.ಎಸ್. ಈಶ್ವರಪ್ಪನವರಿಗೆ ತಿಳಿಸಿದಾಗ ಅದರ ಜವಾಬ್ದಾರಿಯನ್ನು ಈಶ್ವರಪ್ಪನವರು ವಹಿಸಿಕೊಂಡಿದ್ದು, ಈ ದಿನ ಭೂಮಿಪೂಜೆ ನಡೆದಿರುವುದು ತಮಗೆ ಸಂತಸ ತಂದಿದೆ ಎಂದರು.
ಟಿ.ವಿ.ಈಶ್ವರಯ್ಯ-ಸಹೋದರರು ದಾನವಾಗಿ ನೀಡಿದ ಈ ಭೂಮಿಯಲ್ಲಿ ಅವರ ಆಶಯದಂತೆ ಜನಹಿತ ಕಾರ್ಯಗಳು ನಡೆಯುತ್ತವೆ. ಹಂತ ಹಂತವಾಗಿ ವಿವಿಧ ಕಟ್ಟಡ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಭೂದಾನಿಗಳು ನೀಡಿದ ಈ ಜಾಗೆಯಲ್ಲಿ ಧಾರ್ಮಿಕ ಕಾರ್ಯಗಳ ಜತೆಯಲ್ಲಿ ಶೈಕ್ಷಣಿಕ, ಸಾಮಾಜಿಕ ಕಾರ್ಯಗಳು ನಡೆದಲ್ಲಿ ಸಮಾಜ ಮತ್ತು ಸರ್ಕಾರದಿಂದ ನೆರವು ನೀಡಲಾಗುವುದು. ಶ್ರೀ ರಂಭಾಪುರಿ ಜಗದ್ಗುರುಗಳ ಆಶಯಕ್ಕೆಚ್ಯುತಿ ಬಾರದಂತೆ ಎಲ್ಲ ಕೆಲಸಗಳನ್ನು ಮಾಡಿಕೊಡಲಾಗುವುದು. ಪಂಚ ಪೀಠಾಧಿಶರನ್ನು ಒಂದೇ ವೇದಿಕೆ ಮೇಲೆ ನೋಡುವ ಆಸೆ ಭಕ್ತರದ್ದಾಗಿದೆ. ಆದಷ್ಟು ಬೇಗ ಈ ಕಾರ್ಯ ನಡೆಯುವಂತಾಗಲಿ ಎಂದರು.
ಮಳಲಿ ಸಂಸ್ಥಾನ ಮಠದ ಡಾ| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು. ಶಿವಮೊಗ್ಗ ನಗರಾಭಿವೃದ್ಧಿ ಪ್ರಾ ಧಿಕಾರ ಅಧ್ಯಕ್ಷ ಎಸ್. ಎಸ್.ಜ್ಯೋತಿಪ್ರಕಾಶ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ, ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್. ಜೆ.ರಾಜಶೇಖರ, ದಾನಿಗಳಾದ ಟಿ.ವಿ. ಈಶ್ವರಯ್ಯನವರು, ಯೋಗಾಚಾರ್ಯ ರುದ್ರಾರಾಧ್ಯರು, ಕಾರ್ಪೋರೇಟರ್ ಅನಿತಾ ರವಿಶಂಕರ, ಉಮೇಶಾರಾಧ್ಯ, ವೀರೇಶ ಪಾಟೀಲ, ಕೆ.ಸಿ.ನಾಗರಾಜ, ಚಂದ್ರಶೇಖರಯ್ಯ, ಮರುಳೇಶ ಮುಂತಾದವರಿದ್ದರು.
ಶಿವಮೊಗ್ಗ ಜಿಲ್ಲಾ ಜಂಗಮ ಮಹಿಳಾ ಸಂಘದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಎನ್.ಜೆ. ರಾಜಶೇಖರ ಸ್ವಾಗತಿಸಿ, ಎಸ್.ಎನ್. ಮಹಾಲಿಂಗಯ್ಯ ಶಾಸ್ತ್ರಿ ನಿರೂಪಿಸಿದರು. ಶಿವಮೊಗ್ಗ ಜಿಲ್ಲಾ ಜಂಗಮ ಅರ್ಚಕ ಸಂಘದವರು ದೇವಸ್ಥಾನದ ಭೂಮಿಪೂಜೆಯ ವಿಧಿ ವಿಧಾನ ನೆರವೇರಿಸಿದರು.