ಶೋಲಾಕಾಡು ಬೆಂಕಿಗಾಹುತಿ
Team Udayavani, Mar 4, 2018, 6:35 AM IST
ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ, ಮುಳ್ಳಯ್ಯನಗಿರಿ ಹಾಗೂ ಸೀತಾಳಯ್ಯನಗಿರಿಯ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ನೂರಾರು ಎಕರೆ ಶೋಲಾ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.
ಈ ಪ್ರದೇಶದಲ್ಲಿ ಕಳೆದ 3-4 ದಿನಗಳಿಂದಲೂ ಬೆಂಕಿ ಉರಿಯುತ್ತಲೇ ಇದ್ದು, ಅರಣ್ಯ ಇಲಾಖೆಯ 8-10 ಸಿಬ್ಬಂದಿ ಹಸಿ ಸೊಪ್ಪಿನಿಂದ ಬೆಂಕಿ ಆರಿಸಲು ನಡೆಸುತ್ತಿರುವ ಪ್ರಯತ್ನ ಫಲ ನೀಡಿಲ್ಲ.
ಹುಲ್ಲುಗಾವಲು ಪ್ರದೇಶದಲ್ಲಿ ಉರಿಯುತ್ತಿರುವ ಬೆಂಕಿ ನಂದಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದರೂ ಬೆಂಕಿ ಶೋಲಾ ಕಾಡನ್ನು ಪ್ರವೇಶಿಸಿದಾಗ ಅದರ ನಿಯಂತ್ರಿಸಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಶೋಲಾ ಅರಣ್ಯ ಪ್ರದೇಶ ಸಾಕಷ್ಟು ಭಸ್ಮವಾಗಿದೆ.
ಕಿಡಿಗೇಡಿಗಳು ಹಾಕಿದ ಬೆಂಕಿಯಿಂದ ಕಾಡು ಉರಿದಿದೆ. ಬಾಬಾಬುಡನ್ ಗಿರಿಯಲ್ಲಿ ಉರುಸ್ ಆರಂಭವಾಗಿ ವಾರಾಂತ್ಯದಲ್ಲಿ ಪ್ರವಾಸಿಗರ ಓಡಾಟ ಹೆಚ್ಚಿದ್ದು ಈ ವೇಳೆ ಬೆಂಕಿ ತಗುಲಿರಬಹುದೆಂದು ಇಲಾಖೆ ಶಂಕಿಸಿದೆ.