ಸಾಗರದಲ್ಲಿ ಶತಕ ಮುಟ್ಟಿದ ಕೊರೊನಾ
Team Udayavani, Jan 21, 2022, 9:45 PM IST
ಸಾಗರ: ಕೋವಿಡ್ ಮೂರನೇ ಅಲೆಯ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ತಾಲೂಕಿನ ಕೊರೊನಾ ಪಾಸಿಟಿವ್ಗಳ ಸಂಖ್ಯೆ ನೂರು ದಾಟಿದ್ದು, 110 ಪ್ರಕರಣ ಗುರುವಾರ ಪತ್ತೆಯಾಗಿದೆ. ತಾಲೂಕಿನ ಆನಂದಪುರ ಸಮೀಪದ ಇರುವಕ್ಕಿಯ ಇಂದಿರಾ ಗಾಂ ಧಿ ವಸತಿ ಶಾಲೆಯ ನಲವತ್ತು ಮಕ್ಕಳಿಗೆ ಹಾಗೂ ಓರ್ವ ಸ್ಟಾಫ್ಗೆ ಕೊರೊನಾ ದೃಢಪಟ್ಟಿದೆ.
ಅಲ್ಲದೆ ನಗರದ ಸರ್ಕಾರಿ ಪಪೂ ಕಾಲೇಜಿನಲ್ಲೂ ಏಳು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಎರಡೂ ಶಿಕ್ಷಣ ಸಂಸ್ಥೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೂ ಕೋವಿಡ್ ಪಾಸಿಟಿವ್ ಕಂಡುಬಂದಿದೆ. ಪ್ರಸ್ತುತ 372 ಜನ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವರಾದರೂ ಕೇವಲ 8 ಜನ ಮಾತ್ರ ನಗರದ ಉಪ ವಿಭಾಗೀಯ ಆಸ್ಪತ್ರೆಯ ಕೋವಿಡ್ ಕೇಂದ್ರದಲ್ಲಿ ದಾಖಲಾಗಿದ್ದಾರೆ.
ಈ ನಡುವೆ ಜ್ವರ, ಥಂಡಿ ಅಪಾಯದ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ ಶಾÇ-ೆ ಕಾಲೇಜುಗಳನ್ನು ಸ್ಯಾನಿಟೈಸ್ ಮಾಡಲು ತಾಲೂಕು ಆಡಳಿತ ಸೂಚಿಸಿದೆ. ಹಲವು ಶಾಲೆಗಳು ಶುಕ್ರವಾರದಿಂದ ಸೋಮವಾರದವರೆಗೆ ರಜೆ ಘೋಷಿಸಿವೆ. ನಾಲ್ಕು ಉಪನ್ಯಾಸಕರಿಗೆ ಹಾಗೂ 3 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಕಾರಣ ಆರೋಗ್ಯ ಇಲಾಖೆಯುವರ ಸೂಚನೆಯನ್ವಯ ತಾಲೂಕು ಆಡಳಿತದ ನಿರ್ದೇಶನದ ಪ್ರಕಾರ ಗುರುವಾರದಿಂದ ಜ. 26ರವರೆಗೆ ಸರ್ಕಾರಿ ಪಪೂ ಕಾಲೇಜನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿ ಏಳು ದಿನಗಳ ಕಾಲ ಕಾಲೇಜನ್ನು ಬಂದ್ ಮಾಡಲಾಗಿದೆ.