ಸರಕು ವಾಹನಗಳಿಗೆ ರಾಸಾಯನಿಕ ಸ್ಪ್ರೇ
Team Udayavani, Apr 17, 2020, 3:11 PM IST
ದಾವಣಗೆರೆ: ನಗರ ಪ್ರವೇಶಿಸುವ ಲಾರಿಗಳಿಗೆ ಶಾಮನೂರು ಚೆಕ್ಪೋಸ್ಟ್ನಲ್ಲಿ ರಾಸಾಯನಿಕ ಸಿಂಪಡಿಸುತ್ತಿರುವುದು.
ದಾವಣಗೆರೆ: ಕೋವಿಡ್ ವೈರಸ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಒಂದು ಹೆಜ್ಜೆ ಮುಂದಿಟ್ಟಿವೆ.
ಜಿಲ್ಲೆಗೆ ಸಂಪರ್ಕ ಕಲ್ಪಿಸುವ 7 ಮಾರ್ಗಗಳಲ್ಲಿ ರಾಸಾಯನಿಕ ಸಿಂಪಡಣೆ ಪಾಯಿಂಟ್ಗಳನ್ನು ತೆರೆಯಲಾಗಿದ್ದು, ಜಿಲ್ಲೆಗೆ ಆಗಮಿಸುವ ಪ್ರತಿಯೊಂದು ವಾಹನಗಳಿಗೆ ರಾಸಾಯನಿಕ ಸಿಂಪಡಿಸಿ, ಕೋರೋನಾ ವೈರಸ್ ಸೋಂಕು ಹರಡುವಿಕೆ ತಡೆಗಟ್ಟುವಲ್ಲಿ ತಂಡ ನಿರತವಾಗಿದೆ. ಅಲ್ಲದೆ, ಕೋವಿಡ್ ಪ್ರಕರಣ ಹೆಚ್ಚು ಪತ್ತೆಯಾಗಿದ್ದ ಜಿಲ್ಲೆಗಳಿಂದ ಬಂದಂತಹ ವ್ಯಕ್ತಿಗಳನ್ನು ತಪಾಸಣೆ ಮಾಡಿ 14 ದಿನಗಳ ಕಾಲ ಕ್ವಾರೆಂಟೈನ್ನಲ್ಲಿಟ್ಟು ನಂತರ ಅವರನ್ನು ಮನೆಗಳಿಗೆ ಕಳುಹಿಸಲು ಜಿಲ್ಲಾಡಳಿತ ಕ್ರಮ ವಹಿಸಿದೆ. ಹೊರ ರಾಜ್ಯಗಳಿಂದ ಜಿಲ್ಲೆಯ ಗಡಿಭಾಗಕ್ಕೆ ಆಗಮಿಸುವ ಪ್ರತಿಯೊಂದು ವಾಹನಕ್ಕೂ ಮುಖ್ಯವಾಗಿ ಸರಕು ಸಾಗಣೆ ವಾಹನಗಳಿಗೆ ರಾಸಾಯನಿಕ ಸ್ಪ್ರೇ ಮಾಡಲಾಗುತ್ತದೆ.
ನಗರ ಪ್ರವೇಶಿಸುವ 7 ಮಾರ್ಗಗಳಲ್ಲಿ ಆರೋಗ್ಯ ತಪಾಸಣೆಗಾಗಿ ವೈದ್ಯರು,ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಪೋಲಿಸರು ಹೀಗೆ ಮೂರು ತಂಡಗಳು ನಿತ್ಯ ಈ ಕಾರ್ಯದಲ್ಲಿ ತೊಡಗಿದ್ದಾರೆ. ಮೊದಲ ಹಂತವಾಗಿ ಶಾಮನೂರು ಚೆಕ್ಪೋಸ್ಟ್ ಬಳಿ ರಾಸಾಯನಿಕ ಸಿಂಪಡಣೆ ಕಾರ್ಯ ಪ್ರಾರಂಭಗೊಂಡಿದೆ. ವಾಹನಗಳು ನಗರ ಪ್ರವೇಶಿಸುತ್ತಿದ್ದಂತೆ ರಾಸಾಯನಿಕ ಸ್ಪ್ರೇ ಮಾಡಲಾಗುತ್ತದೆ. ಬಳಿಕ ವೈದ್ಯರು ಚಾಲಕ ಹಾಗೂ ಕ್ಲಿನರ್ ಗಳಿಗೆ ಆರೋಗ್ಯ ತಪಾಸಣೆ ಮಾಡುತ್ತಾರೆ. ಒಂದು ವೇಳೆ ಅವರಲ್ಲಿ ಶೀತ, ಕೆಮ್ಮಿನ ಲಕ್ಷಣಗಳು ಕಂಡುಬಂದರೆ ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತದೆ.