ಕಾಂಗ್ರೆಸ್ ನಲ್ಲಿ ಮೂರು ಗುಂಪುಗಳ ನಡುವೆ ಗುದ್ದಾಟ ಹೊಸದೆನ್ನಲ್ಲ : ಡಿಸಿಎಂ ಗೋವಿಂದ ಕಾರಜೋಳ
Team Udayavani, Feb 26, 2021, 8:40 PM IST
ಚಿಕ್ಕಮಗಳೂರು : ಕಾಂಗ್ರೆಸ್ ಒಡೆದ ಮನೆಯಾಗಿ ಮೂರು ಗುಂಪುಗಳಾಗಿವೆ. ಸಿದ್ದರಾಮಯ್ಯನವರದು ಒಂದು ಗುಂಪು, ಡಿಕೆಶಿಯದು ಮತ್ತೊಂದು ಗುಂಪು, ಮಲ್ಲಿಕಾರ್ಜುನ ಖರ್ಗೆಯವರದ್ದು ಇನ್ನೊಂದು ಗುಂಪು. ಈ ಮೂರು ಗುಂಪುಗಳ ನಡುವೆ 24 ಗಂಟೆಯೂ ಗುದ್ದಾಟ ನಡೆಯುತ್ತಿರುತ್ತದೆ ಎಂದು ಡಿಸಿಎಂ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಕಾಂಗ್ರಸ್ ನಲ್ಲಿ ಮೂರು ಗುಂಪುಗಳ ನಡುವೆ ಗುದ್ದಾಟ ಹೊಸದೆನ್ನಲ್ಲ. ಕಾಂಗ್ರೆಸ್ ಗುದ್ದಾಟ ಮಾಡುತ್ತಲೇ ನೆಲಕಚ್ಚಿದೆ ಎಂದು ಟಾಂಗ್ ಕೊಟ್ಟರು.
ಮಾಜಿ ಸಿಎಂ ಹೆಚ್ .ಡಿ.ಕುಮಾರಸ್ವಾಮಿ 2006 ರಲ್ಲಿ ಬಿಜೆಪಿಯವರು ಜೆಡಿಎಸ್ ಗೆ ಬರಲು ಸಿದ್ದರಿದ್ದರು ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಹಾಸ್ಯಾಸ್ಪದ. ಮೋದಿ ನೇತೃತ್ವದಲ್ಲಿ ದೇಶವೇ ಭಾರತೀಯ ಜನತಾ ಪಕ್ಷ ಆಗಿದೆ. 23 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ .ಇದು ಕುಮಾರಸ್ವಾಮಿ ಆಶೀರ್ವಾದದಿಂದಲೇ ಬಂದಿದೆಯಾ..? ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಬಿಜೆಪಿ ಸದೃಢವಾಗಿದೆ ಎಂದರು.
2009 ರಲ್ಲಿ ಮೋದಿ ಭಾರತ ಕಾಂಗ್ರೆಸ್ ಮುಕ್ತ ಭಾರತವಾಗುತ್ತದೆ ಎಂದಿದ್ದರು. ಇವತ್ತು ಕಾಂಗ್ರೆಸ್ ಮುಕ್ತ ಭಾರತವಾಗಿದೆ, ಕಾಂಗ್ರೆಸ್ ಎಲ್ಲಿದೆ ? ಎಂದು ವಾಗ್ದಾಳಿ ನಡೆಸಿದರು.