ಮತ್ತೆ ಕಲ್ಯಾಣ ಅಭಿಯಾನಕ್ಕೆ ಚಾಲನೆ
ತರೀಕೆರೆಯ ಅಕ್ಕ ನಾಗಲಾಂಬಿಕೆ ಗದ್ದುಗೆ ಬಳಿಯಿಂದ ಕಾರ್ಯಕ್ರಮ ಆರಂಭ
Team Udayavani, Aug 2, 2019, 5:57 AM IST
ತರೀಕೆರೆ: ಬಸವಾದಿ ಶರಣರ ಸಮ ಸಮಾಜದ ಪರಿಕಲ್ಪನೆಯ ಅರಿವು ಮತ್ತು ಆಶಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸದಾಶಯದೊಂದಿಗೆ ಒಂದು ತಿಂಗಳ ಕಾಲ ರಾಜ್ಯದ ಎಲ್ಲೆಡೆ ನಡೆಯಲಿರುವ ‘ಮತ್ತೆ ಕಲ್ಯಾಣ’ ಅಭಿಯಾನ ಗುರುವಾರದಿಂದ ಆರಂಭಗೊಂಡಿದೆ.
ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯಲಿರುವ ಈ ಅಭಿಯಾನಕ್ಕೆ, ತರೀಕೆರೆಯ ಅಕ್ಕ ನಾಗಲಾಂಬಿಕೆ ಗದ್ದುಗೆ ಬಳಿ ಚಾಲನೆ ನೀಡಲಾಯಿತು. ಅಭಿಯಾನದ ಅಂಗವಾಗಿ ಸಾಮರಸ್ಯ ನಡಿಗೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಚಿಂತಕ ಗೊ.ರು.ಚೆನ್ನಬಸಪ್ಪ ಮಾತನಾಡಿ, 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ಮಾಡಿದವರು ದಾರ್ಶನಿಕ ಬಸವಣ್ಣನವರು. 850 ವರ್ಷಗಳ ನಂತರ ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ಆರಂಭವಾಗಿರುವುದು ಶುಭ ಲಕ್ಷಣವಾಗಿದೆ.
‘ಮತ್ತೆ ಕಲ್ಯಾಣ’ ಕಾರ್ಯಕ್ರಮ ಒಂದು ಚಳವಳಿಯಾಗಿ ರೂಪುಗೊಳ್ಳಬೇಕು. ಜೊತೆಗೆ ಆಂದೋಲನವಾಗಿ ನಡೆಯಬೇಕು. ಇತ್ತೀಚಿನ ದಿನಗಳಲ್ಲಿ ಪ್ರಜಾಸತ್ತೆಯ ದೇಹದ ಮೇಲೆ ಗಾಯಗಳನ್ನು ಮಾಡಲಾಗುತ್ತಿದೆ. ಸಮಾಜದಲ್ಲಿ ಸಂಕಟವಿದೆ, ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ನಮ್ಮ ಜನಪ್ರತಿನಿಧಿಗಳು ರೆಸಾರ್ಟ್ ರಾಜಕಾರಣ ಮಾಡುತ್ತ, ವೈಭೋಗದ ಜೀವನ ನಡೆಸುತ್ತಿದ್ದಾರೆ. ಮತದಾರರು ರಾಜಕಾರಣಿಗಳು ತೋರುವ ಕ್ಷುಲ್ಲಕ ಆಸೆ, ಆಮಿಷಗಳಿಗೆ ಬಲಿಯಾಗಿ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡುವುತ್ತಿದ್ದಾರೆ. ಇದು ಬದಲಾಗಬೇಕು ಎಂದು ಅಭಿಪ್ರಾಯಪಟ್ಟರು.
ಸಾನ್ನಿಧ್ಯ ವಹಿಸಿದ್ದ ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಇಂದಿನ ಸಮಾಜದಲ್ಲಿರುವ ಅನೇಕ ರೋಗಗಳಿಗೆ ಮದ್ದು ನೀಡಬೇಕಾಗಿದೆ. ರಾಜಕೀಯ, ಜಾತಿ, ಭ್ರಷ್ಟಾಚಾರ ಇವೆಲ್ಲ ಸಮಾಜವನ್ನು ರೋಗಪೀಡಿತವನ್ನಾಗಿ ಮಾಡಿವೆ ಮತ್ತು ಸಮಸ್ಯೆಗಳಾಗಿ ಮಾರ್ಪಟ್ಟಿವೆ. ಸಮಸ್ಯೆಗಳನ್ನು ತಾಳ್ಮೆಯಿಂದ ಪರಿಹರಿಸಿಕೊಳ್ಳಬೇಕು. ಆಗ ಬದುಕು ನಿರಾತಂಕವಾಗಿ ಬದಲಾವಣೆ ಕಾಣುತ್ತದೆ ಎಂದರು.
ಇಂದು ನಾವು ಅನಾರೋಗ್ಯದ ವಾತಾವರಣಕ್ಕೆ ಸಿಲುಕಿದ್ದೇವೆ. ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕವಾಗಿ ಪರಿವರ್ತನೆ ಮಾಡುವುದು ‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಆಶಯವಾಗಿದೆ ಎಂದರು.
ಸಮಾರಂಭದಲ್ಲಿ ಯಳನಾಡು ಮಠದ ಶ್ರೀ ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ನಂದಿಪುರದ ಶ್ರೀ ನಂದಿಕೇಶ್ವರ ಸ್ವಾಮೀಜಿ, ಶಾಸಕರಾದ ಸಿ.ಟಿ.ರವಿ, ಡಿ.ಎಸ್. ಸುರೇಶ್, ಬೆಳ್ಳಿ ಪ್ರಕಾಶ್ ಸೇರಿದಂತೆ ಹಲವು ಜನಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.