ಅಕ್ರಮ ಕಸಾಯಿಖಾನೆ ಪತ್ತೆ: ಗೋಮಾಂಸ ಸಹಿತ ಒಬ್ಬನ ಸೆರೆ
Team Udayavani, Mar 17, 2021, 8:35 PM IST
ಕೊಪ್ಪ: ತಾಲೂಕಿನ ಮಾನಿವನಕಟ್ಟೆಯಲ್ಲಿ ನೂರುಲ್ಲಾ ಖಾನ್ ಎಂಬಾತ ತನ್ನ ಮನೆಯ ಹಿಂದಿನ ಕೊಟ್ಟಿಗೆಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿಖಾನೆಯನ್ನು ಪತ್ತೆ ಹಚ್ಚಿರುವ ಹರಿಹರಪುರ ಪೊಲೀಸರು ಮಂಗಳವಾರ ಬೆಳಗ್ಗೆ ದಾಳಿ ನಡೆಸಿ ಗೋಮಾಂಸ ಸಹಿತ ಆರೋಪಿ ನೂರುಲ್ಲಾ ಖಾನ್ನನ್ನು ಬಂಧಿ ಸಿ ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಪಿಎಸ್ಐ ಕೃಷ್ಣಾ ನಾಯಕ್ ನೇತೃತ್ವದ ಪೊಲೀಸ್ ತಂಡ ಸ್ಥಳೀಯರ ಸಹಕಾರದೊಂದಿಗೆ ದಾಳಿ ನಡೆಸಿದಾಗ ಪ್ಲಾಸ್ಟಿಕ್ ಪ್ಯಾಕೆಟ್ ಮಾಡಿ ಮಾರಾಟ ಮಾಡಲು ಸಿದ್ಧಪಡಿಸಿದ್ದ ಸುಮಾರು 40 ಕೆ.ಜಿ. ಯಷ್ಟು ದನದ ಮಾಂಸ, ಕತ್ತು ಕೊಯ್ದು ಸಾಯಿಸಿದ್ದ ಒಂದು ಗೋವು, ಮಾಂಸದ ತ್ಯಾಜ್ಯ, ಪ್ಲಾಸ್ಟಿಕ್ ಟ್ರೇಗಳು, ಕತ್ತಿ, ಚೂರಿ, ಚಾಕು, ಹಗ್ಗ, ಮರದ ಕುಂಟೆ, ಡಬ್ಬಗಳು ಕಂಡು ಬಂದಿದ್ದು ಎಲ್ಲವನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ನೂರುಲ್ಲಾ ಖಾನ್ ಮೇಲೆ ಅಕ್ರಮವಾಗಿ ಕಸಾಯಿ ನಡೆಸುತ್ತಿರುವುದು ಗೋಹತ್ಯೆ, ಗೋಮಾಂಸ ಮಾರಾಟದ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸ್ಥಳೀಯರಾದ ಶರತ್ ನಿಲುವಾಗಿಲು, ಶಿವಾನಂದ, ಚನ್ನಕೇಶವ, ಸಂದೀಪ, ಪ್ರತಾಪ್, ವಿನೂತ್, ಶರತ್ ಮತ್ತಿತರರು ಇದ್ದರು. ಆರೋಪಿ ನೂರುಲ್ಲಾ ಖಾನ್ ಈ ಹಿಂದೆಯೂ ಇದೇ ದಂಧೆ ನಡೆಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಕರೆಸಿ ಎಚ್ಚರಿಕೆ ನೀಡಲಾಗಿತ್ತು. ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಇದನ್ನು ನಿಯಂತ್ರಿಸಬೇಕು, ಇಲ್ಲದಿದ್ದರೆ ಹೋರಾಟ ರೂಪಿಸಲಾಗುವುದು ಎಂದು ಬಿಜೆಪಿ ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಶರತ್ ನಿಲುವಾಗಿಲು ತಿಳಿಸಿದ್ದಾರೆ.