ಇಟ್ಟಿಗೆ ಸೀಗೋಡಿನಲ್ಲಿ ನೇಮೋತ್ಸವ
Team Udayavani, Apr 6, 2021, 7:54 PM IST
ಬಾಳೆಹೊನ್ನೂರು: ವರ್ಷಂಪ್ರತಿ ಸಾಂಪ್ರದಾಯಿಕವಾಗಿ ನಡೆಯುವ ನೇಮೋತ್ಸವ ಹಾಗೂ ದೈವಾರಾಧನೆ ಕಾರ್ಯಕ್ರಮವನ್ನು ಕೋವಿಡ್ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ನಡೆಸಲಾಗಿದೆ ಎಂದು ಇಟ್ಟಿಗೆ ಸೀಗೋಡಿನ ಬ್ರಹ್ಮರಗುಂಡ ಮತ್ತು ಮಹಾಕಾಳಿ ದೇವಿಯ ದೇವಸ್ಥಾನ ಸಮಿತಿ ಅಧ್ಯಕ್ಷ ತಿಮ್ಮಪ್ಪ ಸಾಲಿಯಾನ ತಿಳಿಸಿದ್ದಾರೆ.
ಇಟ್ಟಿಗೆ ಸೀಗೋಡಿನ ಬ್ರಹ್ಮರಗುಂಡ ಮತ್ತು ಮಹಾಕಾಳಿ ದೇವಿಯ ದೇವಸ್ಥಾನದಲ್ಲಿ ಹಮ್ಮಿ ಕೊಂಡಿದ್ದ ನೇಮೋತ್ಸವ ಧಾರ್ಮಿಕ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದ ಕುಟುಂಬಗಳವರು ಈ ಪ್ರದೇಶದಲ್ಲಿ ದೇವಸ್ಥಾನ ನಿರ್ಮಿಸಿಕೊಂಡು ನೇಮೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬಂದು ಧಾರ್ಮಿಕ ಸಂಪ್ರದಾಯ ಹಾಗೂ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಎಲ್ಲರೂ ಒಟ್ಟಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲಸ್ಥಾನಕ್ಕೆ ಹೋಗಲು ಸಾಧ್ಯವಾಗದೇ ಈ ಆಚರಣೆಗಳನ್ನು ನಡೆಸಿ ಈ ಪ್ರದೇಶದ ಜನರಿಗೂ ನೇಮೋತ್ಸವದ ಪರಿಚಯ ಮಾಡಿಕೊಡಲಾಗುತ್ತಿದೆ ಹಾಗೂ ದೇವರ ಭಂಡಾರ ಇಳಿದು ಧರ್ಮರಸು, ಮಹಾಕಾಳಿ, ಎಡ್ಮೂರು ಮಾಯಕಾರ ಮತ್ತು ತನಿಮಾನಿಗ ದೈವ, ಕೊರಗಜ್ಜ ದೈವ, ಅಲೇರ ಪಂಜುರ್ಲಿ ದೈವಗಳ ನೇಮೋತ್ಸವ ನಡೆಸಲಾಗಿದೆ ಎಂದು ತಿಳಿಸಿದರು.
ಸಮಿತಿಯ ಗೌರವಾಧ್ಯಕ್ಷ ಬಿ.ಕೆ. ಮಧುಸೂದನ್, ಸುರೇಂದ್ರ ಶೆಟ್ಟಿ, ಬಿ.ಕೆ. ಕೃಷ್ಣಪ್ಪ ಪ್ರಜಾರಿ, ಕಾರ್ಯದರ್ಶಿ ಕೆ. ಪ್ರಸಾದ್, ಖಜಾಂಚಿ ಕೆ. ಚಂದ್ರ, ಬಿ.ಎನ್. ಭಾಸ್ಕರ್, ಮಹೇಶ್ ಮತ್ತಿತರರು ಇದ್ದರು.