ರಾಜಕಾರಣದಲ್ಲಿ ಬೆಂಕಿ ಇಲ್ಲದೇನೂ ಹೊಗೆಯಾಡುತ್ತೆ: ನಾಯಕತ್ವ ಬದಲಾವಣೆಗೆ C.T ರವಿ ಪ್ರತಿಕ್ರಿಯೆ
Team Udayavani, May 27, 2021, 1:36 PM IST
ಚಿಕ್ಕಮಗಳೂರು: ಗೊಂದಲಗಳಿಗೆ ತಲೆಕೆಡಿಸಿಕೊಳ್ಳುವ ಸಮಯ ಇದಲ್ಲ. ಜನರೊಟ್ಟಿಗೆ ಇದ್ದು ವಿಶ್ವಾಸ ತುಂಬಿ ನಮ್ಮ ಕರ್ತವ್ಯ ಮಾಡಬೇಕು. ಆ ಕೆಲಸವನ್ನ ಮಾಡುವಂತೆ ಅಗ್ರಹಪೂರಕವಾಗಿ ವಿನಂತಿ ಮಾಡುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ಸಿಎಂ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಯಾರು ಹೇಗೆ ವಿಷಯ ಬಿಡ್ತಾ ಇದ್ದಾರೋ ಗೊತ್ತಿಲ್ಲ. ಮುಖ್ಯಮಂತ್ರಿ, ಸಚಿವರು ಶಾಸಕರು ತಲೆಕೆಡಿಸಿಕೊಳ್ಳಬೇಕಾಗಿರೋದು ಮುಖ್ಯಮಂತ್ರಿ ಯಾರಾಗ್ತಾರೆ ಅಂತಲ್ಲ. ನಾವು ಈಗ ಜನರಿಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಿದೆ ನಮ್ಮನ್ನ ಆರಿಸಿದ ಜನ ಸಂಕಷ್ಟದಲ್ಲಿದ್ದು ಅವರ ನೆರವಿಗೆ ನಿಲ್ಲಬೇಕಿದೆ ಎಂದರು.
ಇದನ್ನೂ ಓದಿ: ಗೊರಿಲ್ಲಾ ತನ್ನ ಮಗುವನ್ನು ಮುದ್ದಿಸುವ ವಿಡಿಯೋ ಎಂಥವರನ್ನೂ ತನ್ನತ್ತ ಸೆಳೆಯುತ್ತದೆ
ಕೆಲವೊಮ್ಮೆ ಆಧಾರವಿಲ್ಲದೆ ಸುದ್ದಿ ಬರುತ್ತದೆ. ರಾಜಕಾರಣದಲ್ಲಿ ಬೆಂಕಿ ಇಲ್ಲದೇನೂ ಹೊಗೆಯಾಡುತ್ತೆ. ಊಹಾಪೋಹಾದ ಆಧಾರವಿಲ್ಲದ ಪ್ರಶ್ನೆಗೆ ಉತ್ತರಿಸೋಕೆ ಬರೊಲ್ಲ. ಅಂತೆಕಂತೆಗಳಿಗೆಲ್ಲ ನಮ್ಮಂತ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಉತ್ತರಿಸಬಾರದು ಎಂದು ಸಿ.ಟಿ ರವಿ ತಿಳಿಸಿದ್ದಾರೆ.