ರೈತರ ಒಕ್ಕಲೆಬ್ಬಿಸುವ ಕಾಯ್ದೆ ತಂದಿದ್ದು ಬಿಜೆಪಿ: ಹೆಗ್ಡೆ
Team Udayavani, Feb 9, 2021, 3:21 PM IST
ಶೃಂಗೇರಿ: ರೈತರನ್ನು ಒಕ್ಕಲೆಬ್ಬಿಸುವ ಕಾನೂನು ತಂದಿದ್ದರೆ ಅದು ಬಿಜೆಪಿಯಾಗಿದೆ. ಒಕ್ಕಲುತನ, ಒಡೆತನ ನೀಡುವ ಹಕ್ಕು ನೀಡುವ ಪಕ್ಷ ಕಾಂಗ್ರೆಸ್ ಪಕ್ಷವಾಗಿದ್ದು, ಅದಕ್ಕಾಗಿ ಸಾಕಷ್ಟು ಕಾನೂನು ರೂಪಿಸಿದೆ ಎಂದು ವಕೀಲ ಬಿ.ಎಂ. ರಮೇಶ್ ಹೆಗ್ಡೆ ಹೇಳಿದರು.
ಪಟ್ಟಣದ ಸಂತೆ ಮಾರುಕಟ್ಟೆ ಬಳಿ ಸೋಮವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದಏರ್ಪಡಿಸಿದ್ದ ಸೊಪ್ಪಿನಬೆಟ್ಟ ಹಾಗೂ ಕಾನು ಅನ ಧಿಕೃತ ಸಾಗುವಳಿ ,ವಸತಿ ಹಕ್ಕನ್ನು ಮಂಜೂರು ಮಾಡಲು ಆಗ್ರಹಿಸಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ರೈತರು ತಮ್ಮ ಪಕ್ಕದ ಜಮೀನನ್ನು ಒತ್ತುವರಿ ಮಾಡಿ, ಬೆಳೆ ತೆಗೆದರೆ ಅದನ್ನು ಮಂಜೂರು ಮಾಡಬೇಕಿದೆ. ಸರಕಾರಿ ಭೂಮಿಯಲ್ಲಿ ಅನ ಧಿಕೃತವಾಗಿ ಮನೆ ನಿರ್ಮಿಸಿದರೆ, ಒತ್ತುವರಿ ಮಾಡಿದರೆ ಅವರಿಗೆ ಭೂ ಕಬಳಿಕೆ ಪ್ರಕರಣ ದಾಖಲು ಮಾಡುವ ಕಾಯ್ದೆ ತಂದಿದ್ದು ಬಿಜೆಪಿಯ ಕೊಡುಗೆಯಾಗಿದೆ. ಉಳುವವನೇ ಭೂಮಿ ಒಡೆಯ ಎಂಬ ಹಕ್ಕನ್ನು ಭೂ ಸುಧಾರಣೆ ಮೂಲಕ ರೈತರಿಗೆ ಭೂಮಿ ನೀಡಿದ್ದು, ಅಂದಿನ ಕಾಂಗ್ರೆಸ್ ಸರಕಾರವಾಗಿದೆ ಎಂದರು.
ಇದನ್ನೂ ಓದಿ:ಬೋನಿನಲ್ಲಿ ಸೆರೆ: 25 ಕೋತಿಗಳ ಸಾವು
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ| ಅಂಶುಮಂತ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರ ಬಿಜೆಪಿಯಾಗಿದ್ದರೂ, ರೈತಪರ ಕಾನೂನು ಜಾರಿಗೊಳಿಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ರೈತರಿಗೆ ಬೇಡವಾದ ಕಾನೂನು ಜಾರಿಗೆ ತರಲು ಕೇಂದ್ರ ಹೊರಟಿರುವುದು ವಿಪರ್ಯಾಸವಾಗಿದೆಎಂದರು. ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಸೊಪ್ಪಿನ ಬೆಟ್ಟದಲ್ಲಿ ಒತ್ತುವರಿ ಮಾಡಿರುವ ರೈತರಿಗೆ ಹಕ್ಕುಪತ್ರ ನೀಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಬದುಕಿಗಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್, ಮುಖಂಡರಾದ ದಿನೇಶ್ ಹೆಗ್ಡೆ, ಕರುವಾನೆ ನವೀನ್, ಕೆ.ಎಂ. ರಮೇಶ್ ಭಟ್, ಶಿವಮೂರ್ತಿ, ದಿನೇಶ್ ಶೆಟ್ಟಿ ಮತ್ತಿತರರು ಇದ್ದರು.
ಸಭೆಗೂ ಮುನ್ನ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಜಾಥಾ ನಡೆಸಿದರು.