ರೈತ ಚಳವಳಿ ಹೆಸರಲ್ಲಿ ನಡೆದ ಬಂದ್ ರಾಜಕೀಯ ಪ್ರೇರಿತ
Team Udayavani, Dec 9, 2020, 4:01 PM IST
ಚಿಕ್ಕಮಗಳೂರು: ದೆಹಲಿಯಲ್ಲಿ ರೈತ ಚಳುವಳಿ ಬೆಂಬಲಿಸಿ ನಡೆಸಿದ ಭಾರತ್ ಬಂದ್ ರಾಜಕೀಯ ಪ್ರೇರಿತ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಉತ್ಪನ್ನ ಮಾರಾಟ, ವಾಣಿಜ್ಯ ಕಾಯ್ದೆ, ರೈತರ ಬೆಳೆಗಳಿಗೆ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಹಾಗೂ ಅಗತ್ಯ ಸರಕು ಕಾಯ್ದೆಯನ್ನು ಕಳೆದ ಅ ಧಿವೇಶನದಲ್ಲಿ ಮಂಡಿಸಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯಲಾಗಿದೆ. ಆದರೆ ಪಂಜಾಬ್ ಮತ್ತು ಹರಿಯಾಣದಲ್ಲಿಕೃಷಿ ಚಟುವಟಿಕೆ, ಕೃಷಿ ಉತ್ಪನ್ನಗಳ ರಫ್ತು, ಆಮದು ಮಾರಾಟ ನಿಯಂತ್ರಿಸುವ ಮಧ್ಯವರ್ತಿಗಳು ದೆಹಲಿ ರೈತ ಹೋರಾಟದ ಹಿಂದೆ ಇದ್ದಾರೆ. ಮಧ್ಯವರ್ತಿಗಳಿಗೆ ಮಣಿದು ಪಂಜಾಬ್ ಸರ್ಕಾರ ರೈತ ಹೋರಾಟಕ್ಕೆ ಬೆಂಬಲ ನೀಡಿದೆ ಎಂದರು.
ಹಿಂದಿನ ಎರಡು ಲೋಕಸಭಾ ಚುನಾವಣೆಯಲ್ಲಿ ಕೃಷಿ ಕಾಯ್ದೆಗೆ ಬೆಂಬಲ ಮತ್ತು ಎಪಿಎಂಸಿಯಿಂದ ರೈತರನ್ನುಮುಕ್ತ ಮಾಡುತ್ತೇವೆಂದು ಕಾಂಗ್ರೆಸ್ ಪ್ರಣಾಳಿಕೆ ಯಲ್ಲಿತ್ತು. ಯುಪಿಎ ಸರ್ಕಾರಾವಧಿಯಲ್ಲಿ ಶರದ್ ಪವಾರ್ ಕೂಡ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕೃಷಿ ವಲಯದಲ್ಲಿ ಖಾಸಗೀಕರಣಕ್ಕೆ ಉತ್ತೇಜನ ನೀಡಬೇಕು ಎಂದು ಹೇಳಿದ್ದರು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರಗಳಿಗೆ ಪತ್ರ ಬರೆದು ಎಪಿಎಂಸಿ ಯಿಂದ ಹಣ್ಣು- ತರಕಾರಿಗಳನ್ನು ಹೊರಗಿಡಬೇಕು ಎಂದು ಸೂಚನೆ ನೀಡಿದ್ದರು. ಕೃಷಿ ಕಾಯ್ದೆ ಜಾರಿ ಬಗ್ಗೆ ರಚಿಸಿದ್ದ ಸ್ಥಾಯಿ ಸಮಿತಿ ಸದಸ್ಯರಾಗಿ ಕಾಂಗ್ರೆಸ್ ಮುಖಂಡರಾದ ಕಮಲ್ನಾಥ್ ಮತ್ತು ಅಮರಿಂದರ್ ಸಿಂಗ್ ಕೂಡ ಇದ್ದರು. ಅಂದರೆ 2013ರಲ್ಲಿ ಕಾಂಗ್ರೆಸ್ ಕೃಷಿ ಕಾಯ್ದೆ ಪರವಾಗಿತ್ತು. ಈಗ ವಿರೋಧ ಮಾಡಲು ರೈತ ಪ್ರತಿಭಟನೆಗೆ ಬೆಂಬಲ ನೀಡುತ್ತಿದೆ. ಇದು ರಾಜಕೀಯ ದುರುದ್ದೇಶದಿಂದ ಬೆಂಬಲ ನೀಡುತ್ತಿರುವುದು ಎಂದು ದೂರಿದರು.
ಕೇರಳ ರಾಜ್ಯದಲ್ಲಿ ಎಪಿಎಂಸಿ ಕಾಯ್ದೆಯೇ ಇಲ್ಲ, ಆದರೆ, ಕಮ್ಯುನಿಸ್ಟ್ ಪಕ್ಷದವರು ದೆಹಲಿ ರೈತರ ಚಳುವಳಿಗೆ ಬೆಂಬಲ ನೀಡುತ್ತಿರುವುದು ಹಾಸ್ಯಾಸ್ಪದ. ದೆಹಲಿಮುಖ್ಯಮಂತ್ರಿ ಅರವಿಂದ್ ಕೆಜ್ರಿàವಾಲ್ ಕೇಂದ್ರ ಕೃಷಿ ಕಾಯ್ದೆಯನ್ನು ನವೆಂಬರ್ತಿಂಗಳಲ್ಲೇ ಅನುಷ್ಠಾನ ಮಾಡಿರುವುದಾಗಿ ಹೇಳಿ ಈಗ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಇವೆಲ್ಲವೂ ರಾಜಕೀಯ ದುರುದ್ದೇಶದಿಂದ ಮತ್ತು ಪ್ರಧಾನಿ ಮೋದಿ ಸರ್ಕಾರದ ಮೇಲೆ ಜನರಲ್ಲಿ ಕೆಟ್ಟ ಅಭಿಪ್ರಾಯ ಬಿಂಬಿಸಲು ರೈತರ ಹೆಸರಿನಲ್ಲಿ ರೈತ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಇದನ್ನು ಜನಸಾಮಾನ್ಯರು ಮತ್ತು ರೈತರು ಅರ್ಥ ಮಾಡಿಕೊಳ್ಳಬೇಕು ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಜನತೆ ಬೆಂಬಲ ನೀಡಿದ್ದು, ಮೂಲೆ ಗುಂಪಾಗುವರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ ರೈತರ ಹೆಸರಿನಲ್ಲಿ ಮಧ್ಯವರ್ತಿಗಳನ್ನು ಮತ್ತು ಕಮಿಷನ್ ಏಜೆಂಟರನ್ನು ಎತ್ತಿಕಟ್ಟಿ ಹೋರಾಟ ನಡೆಸುತ್ತಿರುವುದು ಅವರ ಹತಾಶ ಮನೋಸ್ಥಿತಿ ಗೊತ್ತಾಗುತ್ತದೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ, ಎಪಿಎಂಸಿ, ಕಾರ್ಮಿಕ ಕಾಯ್ದೆಯಲ್ಲಿ ದೋಷಗಳಿದ್ದರೆ ತಿದ್ದುಪಡಿಗೆ ಅವಕಾಶ ಇದೆ. ಪ್ರಧಾನಿ ಮೋದಿ ಕಿಸಾನ್ ಸಮ್ಮಾನ್, ಫಸಲ್ಬಿಮಾ, ಕಿಸಾನ್ ಕಾರ್ಡ್, ಆತ್ಮ ನಿರ್ಭರ ಮತ್ತಿತರ ಅನೇಕ ಯೋಜನೆ ಜಾರಿಗೆ ತಂದು ರೈತರ ಆದಾಯದ್ವಿಗುಣಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನುಸಹಿಸದೆ ರಾಜಕೀಯ ದುರುದ್ದೇಶದಿಂದ ದಲ್ಲಾಳಿಗಳನ್ನು ಮುಂದೆ ಬಿಟ್ಟು ಭಾರತ ಬಂದ್ ನಡೆಸಿ ರೈತರನ್ನು ಮತ್ತು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವರಸಿದ್ಧಿವೇಣುಗೋಪಾಲ್, ಸುಧೀರ್ ಇದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444