ಶೃಂಗೇರಿ ಪಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ
Team Udayavani, Mar 13, 2020, 5:11 PM IST
ಶೃಂಗೇರಿ: ಪಟ್ಟಣ ಪಂಚಾಯಿತಿ ಚುನಾವಣೆ ನಡೆದು 10 ತಿಂಗಳ ನಂತರ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.
11 ಸದಸ್ಯರನ್ನು ಹೊಂದಿದ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 7, ಕಾಂಗ್ರೆಸ್ 3 ಹಾಗೂ ಪಕ್ಷೇತರ 1 ಸ್ಥಾನ ಜಯ ಗಳಿಸಿವೆ. ಬಿಜೆಪಿ ಬಹುಮತ ಪಡೆದಿದ್ದು, ಅಧಿಕಾರಕ್ಕೆ ಏರಲಿದೆ. ಪಟ್ಟಣ ಪಂಚಾಯಿತಿಯ ಕಳೆದ ಮೂರು ಅವಧಿಗೆ ಬಿಜೆಪಿ ಹಿಡಿತ ಸಾಧಿಸಿ ಅಧಿಕಾರ ನಡೆಸಿದ್ದು, ಈಗ ಮತ್ತೂಮ್ಮೆ ಅಧಿಕಾರಕ್ಕೆ ಬರಲಿದೆ.
ಅಧ್ಯಕ್ಷ ಸ್ಥಾನ ಮೀಸಲಾತಿ ಗೊಂದಲ ಹಿಂದಿನ ಆಡಳಿತ ಮಂಡಳಿ ಚುನಾವಣೆಯಲ್ಲೂ 9 ತಿಂಗಳು ತಡವಾಗಿದ್ದು, ಈ ಬಾರಿ ಮತ್ತೆ ಪುನಾರಾವರ್ತನೆಯಾಗಿದೆ. ಮೀಸಲಾತಿ ಘೋಷಿಸಿರುವ ಎರಡೂ ಸ್ಥಾನಗಳು ಬಿಜೆಪಿಯಲ್ಲಿದ್ದು, ವಿಶ್ವ ಹಿಂದೂ ಪರಿಷತ್ ಮುಖಂಡ ಹರೀಶ್ ಶೆಟ್ಟಿ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಶ್ರೀವಿದ್ಯಾ ಶ್ರೀಧರ್ ಮತ್ತು ರಾಧಿಕಾ ಜಯಕುಮಾರ್ ಸ್ಪರ್ಧೆಯಲ್ಲಿದ್ದಾರೆ. ಆದರೂ, ಬಲ್ಲ ಮೂಲಗಳ ಪ್ರಕಾರ ಶ್ರೀವಿದ್ಯಾ ಶ್ರೀಧರ್ ಉಪಾಧ್ಯಕ್ಷರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.