ಇಂದು ಶೃಂಗೇರಿಗೆ ಎಚ್ಡಿಕೆ ಭೇಟಿ
Team Udayavani, May 22, 2018, 7:35 AM IST
ಚಿಕ್ಕಮಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಲಿರುವ ಎಚ್.ಡಿ. ಕುಮಾರಸ್ವಾಮಿ ಮಂಗಳವಾರ ಶೃಂಗೇರಿಗೆ ಭೇಟಿ ನೀಡಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಹೆಲಿಪ್ಯಾಡ್ಗೆ ಆಗಮಿಸುವ ಅವರು, ಅಲ್ಲಿಂದ ಶೃಂಗೇರಿ ಶ್ರೀ ಶಾರದಾಂಬೆ ದೇಗುಲಕ್ಕೆ ತೆರಳಿ ದೇವರ ದರ್ಶನ ಪಡೆಯುವರು. ನಂತರ ನರಸಿಂಹವನಕ್ಕೆ ತೆರಳಿ ಜಗದ್ಗುರುಗಳ ಆಶೀರ್ವಾದ ಪಡೆಯಲಿದ್ದಾರೆ.
ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವಂತೆ ಪ್ರಾರ್ಥಿಸಿ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರು ಶೃಂಗೇರಿ ಶಾರದಾಂಬೆ ಪೀಠದಲ್ಲಿ ಅತಿರುದ್ರ ಮಹಾಯಾಗ ನಡೆಸಿ, ವಿಶೇಷ ಪೂಜೆ ಸಲ್ಲಿಸಿದ್ದರು. ಜನವರಿ 3 ರಿಂದ 14ರವರೆಗೆ 12 ದಿನಗಳ ಕಾಲ ಶಾರದೆ ಸನ್ನಿಧಿಯಲ್ಲಿ ಅತಿರುದ್ರ ಮಹಾಯಾಗ ನಡೆದಿತ್ತು. ಇದಲ್ಲದೆ ಚುನಾವಣೆ ಮುಗಿಯುವ ತನಕ ವಿಪ್ರರ ಮೂಲಕ ಪ್ರತಿದಿನ ದೇವಾಲಯದಲ್ಲಿ ಪಾರಾಯಣ ಪಠಣ ಸಹಿತ ಪೂಜೆ ನಡೆಸಿದ್ದರು.