ಲಾರಿ ಚಾಲಕ- ಕ್ಲೀನರ್ಗೆ ಕೋವಿಡ್ ಸೋಂಕು ಇಲ್ಲ
Team Udayavani, May 19, 2020, 1:14 PM IST
ಸಾಂದರ್ಭಿಕ ಚಿತ್ರ
ತರೀಕೆರೆ: ಮೇ 15ರಂದು ಪಟ್ಟಣಕ್ಕೆ ಮುಂಬೈನಿಂದ ಬಂದಿದ್ದ ಹಿನ್ನೆಲೆಯಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್ನನ್ನು ಕ್ವಾರಂಟೈನ್ಗೆ ಒಳಪಡಿಸಿ ಅವರ ಗಂಟಲು ದ್ರವವನ್ನು ಪರೀಕ್ಷೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಲ್ಯಾಬ್ ವರದಿಯಲ್ಲಿ ಇಬ್ಬರಿಗೂ ಕೋವಿಡ್ ಸೋಂಕು ತಗುಲಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಚಂದ್ರಶೇಖರ್ ತಿಳಿಸಿದ್ದಾರೆ.
ಪಟ್ಟಣದ ಖಾಜಿ ಬೀದಿ ಮತ್ತು ಮಗ್ಗದ ಮನೆ ಬೀದಿಯಲ್ಲಿ ಇಬ್ಬರು ವಾಸಿಸುತ್ತಿದ್ದು ಕೆಲ ದಿನಗಳ ಹಿಂದೆ ಮುಂಬೈಗೆ ಕೆಲಸದ ನಿಮಿತ್ತ ತೆರಳಿ ಹಿಂತಿರುಗಿ ಬರುತ್ತಿದ್ದ ವೇಳೆ ಹರಿಹರದಿಂದ ಶಿವಮೊಗ್ಗಕ್ಕೆ ತಮ್ಮ ಲಾರಿಯಲ್ಲಿ ವ್ಯಕ್ತಿಯನ್ನು ಕರೆದುಕೊಂಡು ಬಂದಿದ್ದರು. ಶಿವಮೊಗ್ಗದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತನ ಪ್ರವಾಸದ ವಿವರಗಳನ್ನು ಪಡೆದ ಅಧಿಕಾರಿಗಳು ಆತ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಇಬ್ಬರನ್ನು ತಮ್ಮ ವಶಕ್ಕೆ ಪಡೆದು ಅವರ ಆರೋಗ್ಯ ತಪಾಸಣೆ
ಮಾಡಿ ಹೆಚ್ಚಿನ ಮಾಹಿತಿಗಾಗಿ ಅವರ ಗಂಟಲು ದ್ರವ ಸಂಗ್ರಹಿಸಿ ಲ್ಯಾಬ್ಗ ಕಳುಹಿಸಲಾಗಿತ್ತು. ಚಾಲಕ ಮತ್ತು ಕ್ಲೀನರ್ನನ್ನು ಕರೆತರಲು ಹೋದಾಗ ಸ್ಥಳೀಯರು ಪ್ರತಿರೋಧ ವ್ಯಕ್ತಪಡಿಸಿದ್ದರು. ಈಗ ಇಬ್ಬರ ಲ್ಯಾಬ್ ವರದಿ ಬಂದಿದ್ದು ಅವರಿಬ್ಬರಿಗೂ ಯಾವುದೇ ಸೋಂಕು ಇಲ್ಲವೆಂದು ವರದಿ ತಿಳಿಸಿದೆ.
ಇಬ್ಬರನ್ನು ಕ್ವಾರಂಟೈನ್ ಮಾಡಲಾಗಿದ್ದು ಆಗಾಗ್ಗೆ ಅವರ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.