ಗಾಳಿ-ಮಳೆ ಪ್ರತಾಪ; ಜನರ ಪರಿತಾಪ
ಬಿಟ್ಟೂ ಬಿಡದೆ ಸುರಿದ ಮುಂಗಾರು-ಹಿಂಗಾರು ಮಳೆಅತಿವೃಷ್ಟಿ- ಕ್ಯಾರಾ ಚಂಡಮಾರುತದಿಂದ ಬೆಚ್ಚಿಬಿದ್ದ ಕಾಫಿನಾಡು
Team Udayavani, Oct 31, 2019, 12:44 PM IST
ಎಸ್. ಕೆ.ಲಕ್ಷ್ಮೀ ಪ್ರಸಾದ್
ಚಿಕ್ಕಮಗಳೂರು: ಈ ವರ್ಷದ ಮುಂಗಾರು, ಹಿಂಗಾರು ಹಾಗೂ ಚಂಡಮಾರುತದ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ. ಆಗಸ್ಟ್ ತಿಂಗಳಿನಿಂದ ಆರಂಭವಾದ ನೈರುತ್ಯ ಮುಂಗಾರು ಬಿಟ್ಟೂ ಬಿಡದೆ ಸುರಿಯಿತು.
ಆನಂತರ ಅದನ್ನು ಹಿಂಬಾಲಿಸಿದ ಈಶಾನ್ಯ ಮಾರುತದ ಹಿಂಗಾರು ಮಳೆ ಮತ್ತು ಅದರ ಜೊತೆ ಸೇರಿದ ಕ್ಯಾರಾ ಚಂಡಮಾರುತ ಇನ್ನೂ ಜಿಲ್ಲೆಯನ್ನು ಒದ್ದೆಯಾಗಿಸುತ್ತಲೇ ಇವೆ.
ಜಿಲ್ಲೆಯಲ್ಲಿ ಕಳೆದ ವರ್ಷ (2018ರಲ್ಲಿ) ಜನವರಿ ತಿಂಗಳಿಂದ ಅ.20 ರವರೆಗೆ ಮಳೆಯಾಗಿತ್ತು. ಆನಂತರ ಮಳೆಯ ಸುಳಿವಿರಲಿಲ್ಲ. ಅಕ್ಟೋಬರ್ ತಿಂಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿತ್ತು. ಆ ಅವಧಿಯಲ್ಲಿ ವಾಡಿಕೆ ಮಳೆ 12484 ಮಿ.ಮೀ.ಗಿಂತ ಮಳೆ ಸುರಿದ ಪ್ರಮಾಣ 20860 ಮಿ.ಮೀ ಆಗಿತ್ತು. ಅಂದರೆ, ಶೇ.164 ರಷ್ಟು ಆ ವರ್ಷ ಮಳೆಯಾಗಿತ್ತು. ಆದರೆ ಈ ವರ್ಷ ಮಾತ್ರ ಮಳೆ ಇನ್ನೂ ಬರುತ್ತಿದೆ. ಜನವರಿಯಿಂದ ಜುಲೈ ತಿಂಗಳವರೆಗೆ ವಾಡಿಕೆಗಿಂತ ಕಡಿಮೆ ಮಳೆ ಆಗಿ ಈ ವರ್ಷ ಜಿಲ್ಲೆ ತೀವ್ರ ಮಳೆ ಕೊರತೆ ಎದುರಿಸಬಹುದೆಂದು ಭಾವಿಸಲಾಗಿತ್ತು.
ಆದರೆ, ಆಗಸ್ಟ್ ತಿಂಗಳಲ್ಲಿ ಇದು ಹುಸಿಯಾಗಿದ್ದು, ಒಂದೇ ದಿನ ಮಲೆನಾಡು ಭಾಗದಲ್ಲಿ 500 ಮಿ.ಮೀ.ಗಿಂತ ಹೆಚ್ಚು ಮಳೆ ಸುರಿದು ಸಾಕಷ್ಟು ಪ್ರಾಕೃತಿಕ ಹಾನಿ ಸಂಭವಿಸಿತು. ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಬರುವ ವಾಡಿಕೆ ಮಳೆ ಪ್ರಮಾಣ 355 ಮಿ.ಮೀ. ಆದರೆ, ಆ ತಿಂಗಳಲ್ಲಿ ಬಿದ್ದ ಮಳೆ 768 ಮಿ.ಮೀ. ಅಂದರೆ 413 ಮಿ.ಮೀ. ಹೆಚ್ಚು ಮಳೆ ಸುರಿಯಿತು. ಆನಂತರವೂ ಮಳೆ ಬಿರುಸು ಕಡಿಮೆಯಾಗಿಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆ ಬಂತು. ಆ ತಿಂಗಳಲ್ಲಿ ಆಗಬೇಕಿದ್ದ ವಾಡಿಕೆ ಮಳೆ 155 ಮಿ.ಮೀ ಮಾತ್ರ. ಆದರೆ, 321 ಮಿ.ಮೀ. ಮಳೆಯಾಗಿ 107 ಮಿ.ಮೀ. ಅಧಿಕ ಮಳೆ ಸುರಿಯಿತು.
ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿ ಹಿಂಗಾರು ಮಳೆ ಆರಂಭವಾಗುತ್ತದೆ. ಈ ಮಳೆ ಬಹುತೇಕ ಬಯಲು ತಾಲೂಕುಗಳಲ್ಲಿ ಹೆಚ್ಚಾಗಿ ಬಂದು ಮಲೆನಾಡು ಭಾಗದಲ್ಲಿ ಕ್ಷೀಣವಾಗಿರುತ್ತದೆ ಅಥವಾ ಮೋಡಗಟ್ಟಿದ ವಾತಾವರಣ ಇರುವುದು ವಾಡಿಕೆ.
ಆದರೆ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ಮಳೆ ಬಿಡದೆ ಬರುತ್ತಿದೆ. ವಾಯು ಭಾರದ ಕುಸಿತದಿಂದ ಎದ್ದ ಚಂಡಮಾರುತದ ಪರಿಣಾಮ ಅಕ್ಟೋಬರ್ ತಿಂಗಳಲ್ಲೂ ಸತತ ಮಳೆಯಾಗುತ್ತಿದೆ. ಮತ್ತು ಮಳೆಗಾಲದ ಅನುಭವವೇ ಮರುಕಳಿಸಿದಂತಿದೆ.
ಅಕ್ಟೋಬರ್ 30 ರಂದು ಸಹ ಮಳೆ ಬಿಟ್ಟಿಲ್ಲ ಮತ್ತು ಕಡಿಮೆಯಾಗುವ ಸೂಚನೆಯೂ ಕಂಡುಬರುತ್ತಿಲ್ಲ. ಜಿಲ್ಲೆಯಲ್ಲಿ ಜನವರಿಯಿಂದ ಈ ವರೆಗೆ 18,701 ಮಿ.ಮೀ. ಮಳೆಯಾಗಿದೆ. ಇದರಲ್ಲಿ ಆಗಸ್ಟ್ ತಿಂಗಳಲ್ಲಿ ಸುರಿದಿದ್ದು ಮಾತ್ರ ಭಯಂಕರ ಮಳೆ. ಮೂಡಿಗೆರೆ ತಾಲೂಕು ಸೇರಿದಂತೆ ಮಲೆನಾಡಿನ ಹಲವು ಕಡೆ ಗುಡ್ಡ ಕುಸಿತ ಸೇರಿ ತೋಟ, ಗದ್ದೆ, ಆಸ್ತಿಪಾಸ್ತಿ ಎಲ್ಲವುದಕ್ಕೂ ಹಾನಿಯಾಯಿತಲ್ಲದೆ ಕೆಲವರ ಜೀವವನ್ನೂ ಮಳೆ ಆಪೋಶನ ಪಡೆಯಿತು.
ಈ ಬಾರಿಯ ಮಳೆಯಿಂದ ಬಯಲುಸೀಮೆ ಭಾಗದಲ್ಲಿರುವ ಜಿಲ್ಲೆಯ ಬೃಹತ್ ಕೆರೆಗಳಾದ ಅಯ್ಯನಕೆರೆ ಮತ್ತು ಮದಗದ ಕೆರೆ ಕೋಡಿ ಒಡೆದರೆ, ವೇದಾವತಿ ನದಿ ತುಂಬಿ ಹರಿಯಿತು. ಜಿಲ್ಲೆಯ ಬೃಹತ್ ಕೆರೆಗಳಾದ ಬೆಳವಾಡಿ ಮತ್ತು ವಿಷ್ಣು ಸಮುದ್ರದ ಕೆರೆ ಮಾತ್ರ ತುಂಬಲಿಲ್ಲ. ಅಂಕಿ ಅಂಶದ ಪ್ರಕಾರ ಜಿಲ್ಲೆಯ 1366 ಕ್ಕೂ ಹೆಚ್ಚು ಕೆರೆಗಳು ಭರ್ತಿಯಾದರೆ, 352 ಕೆರೆಗಳಿಗೆ ಅರ್ಧದಷ್ಟು ನೀರು ಬಂದಿದೆ. ಬೆಳೆಗಳ ಮೇಲೂ ಪರಿಣಾಮ ಬೀರಿದ್ದು, ಬಯಲು ಭಾಗದ ವಾಣಿಜ್ಯ ಬೆಳೆ ಈರುಳ್ಳಿ ಬಹುತೇಕ ನಾಶವಾಗಿದ್ದರೆ, ತರಕಾರಿ ಬೆಳೆಯುವ ಪ್ರದೇಶದಲ್ಲೂ ಮಳೆ ಹಾನಿಯುಂಟು ಮಾಡಿದೆ.
ಮಲೆನಾಡಿಗರಿಗೆ ಮಳೆ ಹೊಸತೇನಲ್ಲ. ಅದರ ಎಲ್ಲಾ ರೀತಿಯ ಬಿರುಸು ಮತ್ತು ಆವೇಶವನ್ನು ನೋಡಿದ್ದಾರೆ. ಈ ಮಳೆಯ ಅವತಾರ ಸೆಪ್ಟೆಂಬರ್ ತಿಂಗಳಿನಿಂದ ಕಡಿಮೆಯಾಗಿ ಅಕ್ಟೋಬರ್ ತಿಂಗಳಲ್ಲಿ ಮಾಯವಾಗುವುದು ವಾಡಿಕೆ. ಆದರೆ, ಈ ವರ್ಷ ಮಳೆ ನಿಲ್ಲುವ ಲಕ್ಷಣವೇ ಕಾಣುತ್ತಿಲ್ಲ. ಇದು ಜಿಲ್ಲೆಯ ಜನರನ್ನು ಮತ್ತಷ್ಟು ಕಂಗಾಲಾಗಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
MUST WATCH
ಹೊಸ ಸೇರ್ಪಡೆ
Yugadi: ಯುಗಾದಿ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ