ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳ ಬೇಡಿ
ಹಿತಮಿತವಾದ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ: ನ್ಯಾ| ವಸ್ತ್ರಮಠ
Team Udayavani, Apr 6, 2019, 5:11 PM IST
ಚಿತ್ರದುರ್ಗ: ಯುವ ಸಮುದಾಯ ಮೋಜಿಗಾಗಿ ಬೀಡಿ, ಸಿಗರೇಟು, ಗಾಂಜಾ ಬಳಸಿ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾ ಧೀಶ ಎಸ್.ಬಿ. ವಸ್ತ್ರಮಠ ಹೇಳಿದರು.
ನಗರದ ಸರ್ಕಾರಿ ಮಹಿಳಾ ಕಾಲೇಜು ಮುಂಭಾಗದದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಕೀಲರ ಸಂಘ, ಆರೋಗ್ಯ ಇಲಾಖೆ, ಆಯುಷ್ ಇಲಾಖೆ, ನಗರಸಭೆ, ಪ್ರಥಮ ದರ್ಜೆ ಮಹಿಳಾ ಕಾಲೇಜು,
ವಿಜ್ಞಾನ ಕೇಂದ್ರ, ಬ್ರಹ್ಮಕುಮಾರಿ ಈಶ್ವರಿ ಸಂಸ್ಥೆ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ವಾಸವಿ ಕ್ಲಬ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ
ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಹಿತಮಿತವಾದ ಆಹಾರ ಸೇವಿಸುವುದರಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಹುಟ್ಟಿದ ಮಾನವ ಸರಿಯಾದ ದಾರಿಯಲ್ಲಿ ನಡೆಯಬೇಕು. ಮನುಷ್ಯನಿಗೆ ಅಗತ್ಯವಿಲ್ಲದೆ ವಸ್ತುಗಳನ್ನು ಬಳಸಬಾರದು. ಆರೋಗ್ಯವನ್ನು ಪ್ರತಿ 3 ತಿಂಗಳಿಗೊಮ್ಮೆ ಪರಿಶೀಲಿಸಿಕೊಳ್ಳಬೇಕು ಎಂದರು.
ಸಿಗರೇಟು, ಗಾಂಜಾ ಸೇವಿಸಿ ಜೀವನ ಹಾಳು ಮಾಡಿಕೊಳ್ಳಬಾರದು. ಸಮಾಜದಲ್ಲಿ ಉತ್ತಮವಾಗಿ ಬದುಕಿ ಸಾರ್ವಜನಿಕವಾಗಿ ಕೊಡುಗೆ ನೀಡಬೇಕು. ಆರೋಗ್ಯಕ್ಕಾಗಿ ಪರಿಸರ ಉಳಿಸಬೇಕು. ಮಾನಸಿಕ ಆರೋಗ್ಯ ಚನ್ನಾಗಿರಬೇಕು ಎಂದಾದರೆ ಸರಳವಾಗಿ ಇರಬೇಕು ಎಂದು ಹೇಳಿದರು.
ಯುವ ಸಮೂಹ ದೇಶದ ಆಸ್ತಿ. ಯಾವುದೇ ಒಬ್ಬ ವ್ಯಕ್ತಿ ತನ್ನ ಆದಾಯ ಅರಿತು ಖರ್ಚು ವೆಚ್ಚ ಮಾಡಬೇಕು. ಅದನ್ನು ಬಿಟ್ಟು
ಅನವಶ್ಯಕ ಖರ್ಚು ಮಾಡಿ ಜೀವನ ನಾಶ ಮಾಡಿಕೊಳ್ಳಬಾರದು. ಚಿಕ್ಕ ಪುಟ್ಟ ಕಾಯಿಲೆಗಳು ಎಂದು ನಿರ್ಲಕ್ಷ್ಯ ವಹಿಸಿದರೆ ಮುಂದೆ ಅದೇ ಕಾಯಿಲೆ ದೊಡ್ಡ ಸಮಸ್ಯೆ ಹುಟ್ಟು ಹಾಕಲಿದೆ. ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ಕೂಡಲೇ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿರಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾ ಧೀಶರಾದ ಎಸ್. ಆರ್. ದಿಂಡಿಲಕೊಪ್ಪ ಮಾತನಾಡಿ, ಜೀವನದಲ್ಲಿ ಆರೋಗ್ಯ ಚನ್ನಾಗಿದ್ದರೆ ಏನ್ನನ್ನೂ ಬೇಕಾದರೂ ಗಳಿಸಬಹುದು. ಧೂಮಪಾನ ಮಾಡದೆ ಆರೋಗ್ಯದ ಕಡೆಗೆ ಹೆಚ್ಚು ಒತ್ತು ನೀಡಬೇಕು. ಚಿಕ್ಕ ವಯಸ್ಸಿನಲ್ಲಿ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಜೀವನ ರೂಪಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಮಹಿಳಾ ಕಾಲೇಜಿನ ಪ್ರಾಂಶುಪಾಲ ಬಿ.ಎಂ. ಲಕ್ಷ್ಮೀ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎನ್.ಬಿ. ವಿಶ್ವನಾಥ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಜಯಪ್ರಕಾಶ್, ಆಯುಷ್ ಅಧಿಕಾರಿ ಡಾ| ಶಿವಕುಮಾರ್, ಪರಿಸರವಾದಿ ಎಚ್.ಎಸ್.ಕೆ. ಸ್ವಾಮಿ, ಕಾಲೇಜಿನ ಪ್ರಾಧ್ಯಾಪಕ, ವಿದ್ಯಾರ್ಥಿಗಳು ಭಾಗವಹಿಸಿದ್ದರು.