ನಗದು ರಹಿತ ಚಿಕಿತ್ಸೆ ನಿವೃತ್ತರಿಗೂ ವಿಸ್ತರಿಸಿ
Team Udayavani, Jan 6, 2020, 4:10 PM IST
ಚಿತ್ರದುರ್ಗ: ನಿವೃತ್ತ ಸರ್ಕಾರಿ ನೌಕರರಿಗೂ ಹಾಲಿ ಸೇವೆ ಸಲ್ಲಿಸುತ್ತಿರುವ ನೌಕರರ ಮಾದರಿಯಲ್ಲಿ ನಗದು ರಹಿತ ಚಿಕಿತ್ಸೆಗೆ ಅವಕಾಶ ಕಲ್ಪಿಸಬೇಕು ಎಂದು ನಿವೃತ್ತ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಲ್. ಬೈರಪ್ಪ ಒತ್ತಾಯಿಸಿದರು.
ನಗರದ ಕೆಇಬಿ ಸಮುದಾಯ ಭವನದಲ್ಲಿ ಭಾನುವಾರ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘದ ವತಿಯಿಂದ ಆಯೋಜಿಸಿದ್ದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಹಾಗೂ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಸೇವೆಯಲ್ಲಿ ಸತತ 30-35 ವರ್ಷ ಕೆಲಸ ಮಾಡಿ ಅನೇಕ ಯೋಜನೆಗಳನ್ನು
ಸಾಕಾರ ಮಾಡಿದ್ದೇವೆ. ಈಗ ಕೆಲಸದಿಂದ ನಿವೃತ್ತಿಯಾಗಿದ್ದು, ನಮಗೂ ನಮ್ಮ ಆರೋಗ್ಯದ ಬಗ್ಗೆ ಕಾಳಜಿಯಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ. ಸರ್ಕಾರಿ ಆಸ್ಪತ್ರೆಗೆ ಯಾವ ಸೌಲಭ್ಯ ಕಲ್ಪಿಸಲಾಗಿದೆ, ಎಲ್ಲಿ ಸರಿಯಾದ
ಚಿಕಿತ್ಸೆ ದೊರೆಯುತ್ತಿದೆ ಎಂದು ಪ್ರಶ್ನಿಸಿದರು.
ಸೇವೆಯಲ್ಲಿರುವ ನೌಕರರಿಗೆ ಸರ್ಕಾರ ತನ್ನ ಸ್ವಂತ ಖರ್ಚಿನಲ್ಲಿ ಉತ್ತಮವಾದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿದೆ. ಆದರೆ ನಿವೃತ್ತರಾದ ನಮಗೆ ಮಾತ್ರ ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ಹೇಳಲಾಗುತ್ತಿದೆ. ಉನ್ನತ ಮಟ್ಟದ ಅ ಧಿಕಾರಿಗಳು ನಿವೃತ್ತ ನೌಕರರನ್ನು ಕಡೆಗಣನೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈಗಿರುವ ಸರ್ಕಾರಿ ನೌಕರರಿಗಿಂತ ನಿವೃತ್ತ ನೌಕರರ ಸಂಖ್ಯೆಯೇ ಹೆಚ್ಚಾಗಿದೆ. ಜಿಲ್ಲೆ ಮತ್ತು ತಾಲೂಕುಗಳಲ್ಲಿ ಸಂಘಟನೆ ಮಾಡಬೇಕಿದೆ. ಇದಕ್ಕಾಗಿ ಹೊಸ ಬೈಲಾ ಸಿದ್ಧಪಡಿಸಲಾಗಿದೆ. ಫೆಬ್ರವರಿಯಲ್ಲಿ ನಡೆಯವ ಕಾರ್ಯಕ್ರಮದಲ್ಲಿ ಅದನ್ನು ಬಿಡುಗಡೆ ಮಾಡಲಾಗುವುದು ಎಂದರು.
ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಕೆ.ಜಿ. ಜಗದೀಶ್ ಮಾತನಾಡಿ, ನಿವೃತ್ತ ನೌಕರರು ಈ ದೇಶದ ಆಸ್ತಿ ಇದ್ದಂತೆ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದ ಸರ್ಕಾರದ
ಕರ್ತವ್ಯ. ಆದ್ದರಿಂದ ಪೊಲೀಸ್ ಇಲಾಖೆ ಸಿಬ್ಬಂದಿಗೆ ಇರುವ ಮಾದರಿಯಲ್ಲಿ ನಗದು ರಹಿತ ಆರೋಗ್ಯ ಭಾಗ್ಯ ಯೋಜನೆಯನ್ನು ನಿವೃತ್ತ ಸರ್ಕಾರಿ ನೌಕರರಿಗೂ ಜಾರಿ
ಮಾಡಬೇಕು ಎಂದು ಆಗ್ರಹಿಸಿದರು.
ನಿವೃತ್ತ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಂಗೇಗೌಡ ಪಾಕೆಟ್
ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಜಿಲ್ಲಾಧ್ಯಕ್ಷ ಆರ್. ರಂಗಪ್ಪ ರೆಡ್ಡಿ ಅಧ್ಯಕ್ಷತೆ
ವಹಿಸಿದ್ದರು. ಅಡಿವೆಪ್ಪ ವೈ. ಬೆಂಡಿಗೇರಿ, ಮಲ್ಲಪ್ಪ ಸಿ ಮುದಕವಿ ಮತ್ತಿತರರು ಇದ್ದರು.