ನಾಲೆ-ಕೆರೆ ದುರಸ್ತಿಗೆ ಒತ್ತಾಯಿಸಿ ಮನವಿ ಸಲ್ಲಿಕೆ
Team Udayavani, Apr 21, 2022, 6:02 PM IST
ಮೊಳಕಾಲ್ಮೂರು: ತಾಲೂಕಿನ ರಂಗಯ್ಯನದುರ್ಗ ಜಲಾಶಯದ ಅಡಿಯಲ್ಲಿ ಬರುವ ಎಡ ಮತ್ತು ಬಲ ದಂಡೆ ನಾಲೆಗಳ ದುರಸ್ತಿ ಹಾಗೂ ತಾಲೂಕಿನ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರಂಗಯ್ಯನದುರ್ಗ ಜಲಾಶಯ ವ್ಯಾಪ್ತಿಯ ಕೆರೆಗಳ ಮತ್ತು ಕಾಲುವೆಗಳ ನೀರು ಬಳಕೆದಾರರ ಸಂಘದಿಂದ ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಟಿ. ಸುರೇಶ್ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ರಂಗಯ್ಯನದುರ್ಗ ಜಲಾಶಯದ ನೀರು ಬಳಸಿಕೊಳ್ಳುವ ರೈತರಿಗೆ ಸುಮಾರು 10 ವರ್ಷಗಳಿಂದ ಆರ್.ಡಿ.ಪಿ ಜಲಾಶಯದಲ್ಲಿರುವ ನೀರನ್ನು ಅಚ್ಚುಕಟ್ಟು ಜಮೀನುಗಳಿಗೆ ಬಿಟ್ಟಿರುವುದಿಲ್ಲ. ಪ್ರಸ್ತುತ ಸುಮಾರು 27 ಅಡಿ ನೀರು ಜಲಾಶಯದಲ್ಲಿದ್ದು, ಕುಡಿಯುವ ನೀರಿಗೆ ಮಾತ್ರ ಬಳಸಲಾಗುತ್ತಿದೆ. ಹಾಗಾಗಿ ಜಲಾಶಯದ ಎಡ ಮತ್ತು ಬಲ ದಂಡೆ ನಾಲೆಗಳಲ್ಲಿ ಮುಳ್ಳಿನ ಜಾಲಿಗಿಡಗಳು ಬೆಳೆದಿವೆ. ಇದರಿಂದ ಈ ಎರಡೂ ನಾಲೆಗಳ ಕಾಲುವೆಗಳು ಹಾಳಾಗಿವೆ. ಈ ಜಲಾಶಯದ ನೀರನ್ನು ಇನ್ನಿತರ ಕೆರೆಗಳಿಗೆ ಹೊರಗೆ ಬಿಡಲಾಗದ ಕಾರಣ ಜರೂರಾಗಿ ನಾಲೆಗಳನ್ನು ದುರಸ್ತಿ ಮಾಡಿಕೊಡಬೇಕಾಗಿದೆ. ರಂಗಯ್ಯನದುರ್ಗ ಜಲಾಶಯವು ತುಂಬಿದಲ್ಲಿ ಸುಮಾರು 6 ಸಾವಿರ ಎಕರೆ ಜಮೀನುಗಳಿಗೆ ನೀರುಣಿಸುತ್ತದೆ. ಈ ಜಲಾಶಯವು 33 ಅಡಿಗಳ ಸಾಂದ್ರತೆಯನ್ನು ಹೊಂದಿದೆ. ಪ್ರಸ್ತುತ 27 ಅಡಿಗಳಷ್ಟು ನೀರಿರುವುದರಿಂದ ಬೇಸಾಯ ಮಾಡಿ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬೇಕಾಗಿದೆ. ತಾಲೂಕಿನಲ್ಲಿ ಬರುವ ಕೆರೆಗಳ ನೀರು ಹರಿದು ಬರುವುದರಿಂದ ರಾಜ ಕಾಲುವೆ ಹಾಗೂ ಕೆರೆಗಳಲ್ಲಿ ಬೆಳೆದಿರುವ ಜಂಗಲ್ ಮತ್ತು ಹೂಳು ತೆಗೆಸಿದ್ದಲ್ಲಿ ಕೆರೆಗಳಿಗೆ ಸರಾಗವಾಗಿ ನೀರು ಹರಿದುಬಂದು ಕೆರೆಯಲ್ಲಿ ನೀರು ಶೇಖರಣೆಯಾಗುತ್ತದೆ. ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಬಿ.ಎಸ್. ಐಯ್ಯಣ್ಣ, ಸಿಪಿಐನ ಜಾಫರ್ ಷರೀಫ್, ಜಿ.ಆರ್. ಶ್ರೀನಿವಾಸ್, ವೈ. ಆಂಜನೇಯ, ಗಂಗಮ್ಮ, ಎನ್. ಸಿದ್ದಪ್ಪ, ಬಿ.ಎಚ್. ರುದ್ರಪ್ಪ, ಬಸವರಾಜ್, ಹೊನ್ನೂರಪ್ಪ, ಡಿ. ತಿಪ್ಪೇಸ್ವಾಮಿ, ಮರಿಸ್ವಾಮಿ, ಗೋವಿಂದರಾಜ್, ಪಿ.ಎಸ್.ನಂಜಪ್ಪ, ಎಂ.ಎಸ್. ರಾಜು, ಎನ್. ಮಲ್ಲಿಕಾರ್ಜುನ, ಪಾಪಣ್ಣ, ದುರುಗೇಶ್, ಪೂಜಾರಿ ತಿಪ್ಪೇಸ್ವಾಮಿ, ಕೆ.ಬಿ. ಪಾಪಣ್ಣ, ಬೋರಯ್ಯ ಇತರರು ಇದ್ದರು.