ಬಿಜೆಪಿಗೆ ಗೊತ್ತಿಲ್ಲ ಕಾಂಗ್ರೆಸ್ ಪಕ್ಷದ ಶಕ್ತಿ: ಮಂಜುನಾಥ್
Team Udayavani, Aug 23, 2017, 3:13 PM IST
ಚಿತ್ರದುರ್ಗ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ದೂರವಿಟ್ಟು ಜಾತ್ಯತೀತ ಪಕ್ಷವಾದ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗನ್ನಾಯಕನಹಳ್ಳಿ ಆರ್. ಮಂಜುನಾಥ್ ಮನವಿ ಮಾಡಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕೋಮುವಾದಿ ಬಿಜೆಪಿಗೆ ಕಾಂಗ್ರೆಸ್ ಪಕ್ಷದ ಶಕ್ತಿ ಗೊತ್ತಿಲ್ಲ. ಇಂದಿರಾ ಗಾಂಧಿ ಸೋಲು ಕಂಡಾಗ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಕತೆ ಮುಗಿಯಿತು ಎಂದು ಚೀರಾಡಿದವರೇ ಹೆಚ್ಚು. ಆದರೆ ಕಾಂಗ್ರೆಸ್ ಪಕ್ಷಕ್ಕೆ 130 ವರ್ಷಗಳ ಇತಿಹಾಸವಿದೆ. ಕಾಂಗ್ರೆಸ್ ಸರ್ಕಾರ ಇಡೀ ದೇಶಾದ್ಯಂತ ಅಭಿವೃದ್ಧಿ ಕಾರ್ಯ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷವಾಗಿದೆ. ನಮ್ಮ ಪಕ್ಷದ ಬಗ್ಗೆ ಮಾತನಾಡುವ ಬಿಜೆಪಿಯ ಒಬ್ಬ ಮುಖಂಡರೂ ದೇಶಕ್ಕಾಗಿ ದುಡಿದಿಲ್ಲ. ಬರೀ ಕೋಮು ಸಂಘರ್ಷ ಉಂಟು ಮಾಡಿ ಬಡಾಯಿ ಕೊಚ್ಚುವ ಪಕ್ಷ ಅಂದರೆ ಅದು ಬಿಜೆಪಿ ಎಂದು ವಾಗ್ಧಾಳಿ ನಡೆಸಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಪಕ್ಷವನ್ನು ಚುನಾವಣೆಯಲ್ಲಿ ಹೇಗೆ ಎದುರಿಸಬೇಕೆನ್ನುವ ಪಾಠವನ್ನು ಕಾಂಗ್ರೆಸ್ ಪಕ್ಷ ಕಲಿತಿದೆ. ಬಿಜೆಪಿ ತಂತ್ರಗಳಿಗೆ ಕಾಂಗ್ರೆಸ್ ಪ್ರತಿತಂತ್ರ ಹಣೆಯಲಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮನಸ್ಸು ಮಾಡಿದ್ದರೆ 10 ವರ್ಷಗಳ ಕಾಲ ಪ್ರಧಾನಮಂತ್ರಿಯಾಗಿ ಅಧಿಕಾರ ಅನುಭವಿಸಬಹುದಿತ್ತು. ಆದರೆ ಅವರು ಎಂದೂ ಅಧಿಕಾರಕ್ಕಾಗಿ ಆಸೆ ಪಡಲಿಲ್ಲ. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬಣ್ಣಿಸಿದರು. ಕೋಮುವಾದಿ ಬಿಜೆಪಿಗೆ ಕರ್ನಾಟಕ ರಾಜ್ಯದಿಂದಲೇ ತಕ್ಕ ಉತ್ತರವನ್ನು ಕಾಂಗ್ರೆಸ್ ಪಕ್ಷ ನೀಡಲಿದೆ. ಇಡೀ ರಾಷ್ಟ್ರದಲ್ಲಿ ಬಿಜೆಪಿ ಓಟಕ್ಕೆ ಕಡಿವಾಣ ಹಾಕುವ ಮೂಲಕ ಪಾಠ ಕಲಿಸಲಾಗುತ್ತದೆ. ಗುಜರಾತ್ನಲ್ಲಿ ಕೇವಲ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಬಿಜೆಪಿ ಯಾವ ರೀತಿಯ ಷಡ್ಯಂತ್ರ ಮಾಡಿತು ಎಂಬುದು ಇಡೀ ರಾಷ್ಟ್ರಕ್ಕೆ ತಿಳಿದಿದೆ. ರಾಜ್ಯಸಭಾ ಸ್ಥಾನ ಗೆಲ್ಲಲು ಸಚಿವ ಡಿ.ಕೆ. ಶಿವಕುಮಾರ್ ಮೇಲೆ ಐಟಿ ದಾಳಿ ಮಾಡಿಸಿದರು. ಬಿಜೆಪಿ ಕರ್ನಾಟಕದಲ್ಲಿ ತಲೆ ಎತ್ತದಂತೆ ಮಾಡಲು 2018ರ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ
ಪರಿಗಣಿಸಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಪುಟಿದೇಳುತ್ತಿದೆ. ಅವರು ಪ್ರಣಾಳಿಕೆಯಲ್ಲಿ ಶೇ. 90ಕ್ಕೂ ಹೆಚ್ಚಿನ ಭರವಸೆಗಳನ್ನು ಈಡೇರಿಸಿರುವುದರಿಂದ ಮತದಾರರು ಕಾಂಗ್ರೆಸ್ ಪರ ಒಲವು ತೋರಿಸಿದ್ದಾರೆ. ಆದ್ದರಿಂದ ಸಿ ಫೋರ್ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ
ಬಹುಮತವನ್ನು ಜನತೆ ನೀಡಿದ್ದಾರೆಂದರು. 2018ರ ವಿಧಾನಸಭಾ ಚುನಾವಣೆ ಬರುವ ತನಕ ಪಕ್ಷದ ಸ್ಥಿತಿಗತಿಗಳ ಬಗ್ಗೆ, ಮತದಾರರ ಒಲವು ಯಾವ ಕಡೆ ಇದೆ ಎನ್ನುವುದನ್ನು ತಿಳಿದುಕೊಳ್ಳಲು ಪ್ರತಿ ಎರಡು ತಿಂಗಳಿಗೊಮ್ಮೆ ಕಾಂಗ್ರೆಸ್ ಪಕ್ಷ ಚುನಾವಣಾಪೂರ್ವ ಸಮೀಕ್ಷೆ ನಡೆಸಲಿದೆ ಎಂದು
ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಫಾತ್ಯರಾಜನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್, ನಗರಾಧ್ಯಕ್ಷ ಅಲ್ಲಾಭಕ್Ò, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮೀನಾಕ್ಷಿ, ಎಸ್ಟಿ ಘಟಕದ ಅಧ್ಯಕ್ಷ ಎಚ್.ಅಂಜಿನಪ್ಪ, ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಮನೋಹರ್, ಪ್ರಧಾನ ಕಾರ್ಯದರ್ಶಿ ಶಿವು ಯಾದವ್, ಎಲ್. ತಿಪ್ಪೇಸ್ವಾಮಿ, ಲಕ್ಷ್ಮೀಕಾಂತ್, ಮೋಕ್ಷಾ ರುದ್ರಸ್ವಾಮಿ, ಅಜ್ಜಪ್ಪ, ಮಧು ಪಾಲೇಗೌಡ, ಮಹಡಿ ಶಿವಮೂರ್ತಿ, ಸರ್ದಾರ್ ಪಟೇಲ್, ಬಿ.ಜಿ. ಶ್ರೀನಿವಾಸ್, ಷಣ್ಮುಖಪ್ಪ ಇದ್ದರು.
ಕಾಂಗ್ರೆಸ್ ಪಕ್ಷ ಎಂದೂ ದ್ವೇಷ ರಾಜಕಾರಣ ಮಾಡಿಲ್ಲ. ಎಸಿಬಿಯನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಯಡಿಯೂರಪ್ಪ ಅವರ ಮೇಲೆ ಡಿನೋಟಿಫಿಕೇಷನ್ ದೂರು ಪ್ರಕರಣ ಮಾಡಿ ತನಿಖೆಗೆ ಆದೇಶ ನೀಡಿದ್ದು ಅವರ ಪಕ್ಷದವರೇ ಆದ ಸದಾನಂದ ಗೌಡರು ಎನ್ನುವ ಸತ್ಯವನ್ನು ಯಡಿಯೂರಪ್ಪ ಮತ್ತು ಬಿಜೆಪಿ ಪಕ್ಷದವರು ತಿಳಿದುಕೊಳ್ಳಲಿ.
ಗನ್ನಾಯಕನಹಳ್ಳಿ ಆರ್. ಮಂಜುನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ.