ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ರಾಜಸ್ಥಾನ ಮೂಲದ ಮೂವರ ಸಾವು
Team Udayavani, Jul 20, 2021, 6:21 PM IST
ಚಿತ್ರದುರ್ಗ: ಹೆದ್ದಾರಿ ಬದಿಯಲ್ಲಿ ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಹಿರಿಯೂರು ತಾಲೂಕಿನ ಐಮಂಗಲ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ರಾಜಸ್ಥಾನ ಮೂಲದ ಜಯರಾಮ್ (35), ಪತ್ನಿ ಸುಶೀಲಾದೇವಿ (30) ಹಾಗೂ 4 ವರ್ಷದ ಮಗು ಕುಲದೀಪ್ ಸರಣ್ ಮೃತಪಟ್ಟಿದ್ದಾರೆ. ಪುತ್ರಿ ಕರುಣಾ ಸರಣ್ (6) ಹಾಗೂ ರಾಕೇಶ್ (28) ಗಾಯಗೊಂಡಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೇಗವಾಗಿ ಬಂದ ಕಾರು ಸಿಮೆಂಟ್ ಲೋಡ್ನೊಂದಿಗೆ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಕಾರು ಲಾರಿಯ ಹಿಂಬದಿಯಲ್ಲಿ ಸಿಲುಕಿಕೊಂಡಿತ್ತು. ಕಾರಿನಲ್ಲಿ ಸಿಲುಕಿದ್ದವರನ್ನು ಕ್ರೇನ್ ಹಾಗೂ ಟ್ರಾÂಕ್ಟರ್ ಬಳಸಿ ಹೊರ ತೆಗೆಯಲಾಗಿದೆ. ಅಪಘಾತದ ಸ್ಥಳಕ್ಕೆ ಬಂದ ಜನ ತಾಯಿಯನ್ನು ಅಪ್ಪಿಕೊಂಡೇ ಮೃತಪಟ್ಟಿದ್ದ ಮಗುವನ್ನು ನೋಡಿ ಮಮ್ಮಲ ಮರುಗಿದರು.
ಮೃತರು ಕಬ್ಬಿಣದ ಗ್ರಿಲ್ ಹಾಕುವ ಕೆಲಸ ಮಾಡುತ್ತಾ ಬೆಂಗಳೂರಿನಲ್ಲಿ ನೆಲೆಸಿದ್ದರು ಎನ್ನಲಾಗಿದೆ. ರಾಜಸ್ಥಾನದಿಂದ ಬೆಂಗಳೂರಿಗೆ ಮರಳುತ್ತಿರುವಾಗ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಎಸ್ಪಿ ಜಿ. ರಾಧಿ ಕಾ, ಎಎಸ್ಪಿ ಎಂ.ಬಿ. ನಂದಗಾವಿ, ಡಿವೈಎಸ್ಪಿ ರೋಷನ್ ಜಮೀರ್, ಹಿರಿಯೂರು ಸಿಪಿಐ ಕೆ. ರಾಘವೇಂದ್ರ, ಐಮಂಗಲ ಠಾಣೆ ಪಿಎಸ್ಐ ಎ. ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.