ಮದ್ಯ ಮಾರಾಟಕ್ಕೆ ಸೇವಾಲಾಲ್ ಶ್ರೀ ಆಕ್ಷೇಪ
Team Udayavani, May 4, 2020, 1:41 PM IST
ಚಿತ್ರದುರ್ಗ: ಕೋವಿಡ್ ನಿರ್ಮೂಲನೆಗಾಗಿ ಕಳೆದ ನಲವತ್ತು ದಿನಗಳಿಂದ ದೇಶವನ್ನು ಲಾಕ್ಡೌನ್ ಮಾಡಿದ್ದ ಸರ್ಕಾರ, ಈಗ ಏಕಾಏಕಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದು ನಿಜಕ್ಕೂ ಕೋವಿಡ್ ವೈರಸ್ ಹರಡಲು ದಾರಿ ಮಾಡಿಕೊಟ್ಟಂತಿದೆ ಎಂದು ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
ಭಾನುವಾರ ಪತ್ರಿಕಾ ಭವದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್ಡೌನ್ನಿಂದ ಇಡೀ ದೇಶ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಮದ್ಯ ಮಾರಾಟದಿಂದ ಬರುವ ಆದಾಯದಲ್ಲಿ ಸರ್ಕಾರ ನಡೆಯುವುದಿಲ್ಲ. ಬೇರೆ ಬೇರೆ ಉದ್ದಿಮೆಗಳಿಂದ ಸರ್ಕಾರ ಆದಾಯ ಮೂಲಗಳನ್ನು ಕಂಡುಕೊಳ್ಳಬೇಕೆ ವಿನಃ ಸಮಾಜದ ಸ್ವಾಸ್ತ್ಯ ಹಾಳು ಮಾಡುವ ಕೆಲಸಕ್ಕೆ ಕೈಹಾಕಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಲಾಕ್ಡೌನ್ ಸಂದರ್ಭದಲ್ಲಿ ಕುಡಿತವಿಲ್ಲದೆ ಎಷ್ಟೊ ಬಡ ಕುಟುಂಬಗಳು ನೆಮ್ಮದಿಯಾಗಿ ಜೀವಿಸುತ್ತಿದ್ದವು. ಮದ್ಯಪಾನಕ್ಕೆ ದಾಸರಾಗಿದ್ದ ಬಹಳ ಮಂದಿ ಮದ್ಯವನ್ನೇ ಮರೆತು ಬಿಟ್ಟಿದ್ದರು. ಆದರೆ ಸರ್ಕಾರ ಎಂಎಸ್ಐಎಲ್ ಹಾಗೂ ಎಂಆರ್ಪಿ ಮೂಲಕ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿರುವುದು ಸರಿಯಾದ ಕ್ರಮವಲ್ಲ. ಕೆಂಪು, ಕಿತ್ತಳೆ ಹಾಗೂ ಹಸಿರು ವಲಯವೆಂದು ಮೂರು ಗುಂಪಾಗಿ ರಾಜ್ಯವನ್ನು ವಿಂಗಡಿಸಿ ಹಸಿರು ವಲಯಗಳಲ್ಲಿ ಮಾತ್ರ ಕುಡಿತಕ್ಕೆ ಅವಕಾಶ ಕೊಡುವ ಆತುರವಾದರೂ ಏನಿತ್ತು, ಈಗಲಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಚಿಂತಿಸಿ ಮದ್ಯ ಮಾರಾಟಕ್ಕೆ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮಿತಿ ಜಿಲ್ಲಾಧ್ಯಕ್ಷ ಕೆ.ಜಿ. ಅನಂತಮೂರ್ತಿ ನಾಯ್ಕ, ವಕೀಲ ಕೆ. ವೆಂಕಟೇಶ ನಾಯ್ಕ, ಭೀಮ ನಾಯ್ಕ, ಪದ್ಮಾವತಿ, ರಮೇಶ್ ಇದ್ದರು.