ಬಾಕಿ ಅರ್ಜಿ ವಿಲೇವಾರಿಗೆ ತಾಕೀತು
ಸಮನ್ವಯ ಸಮಿತಿ ರಚನೆಗೆ ಸರ್ಕಾರ ಸೂಚನೆಕಚೇರಿಗಳಿಗೆ ಭೇಟಿ ನೀಡಿ
Team Udayavani, Mar 3, 2021, 6:33 PM IST
ಚಿತ್ರದುರ್ಗ: ಸಕಾಲ ಯೋಜನೆಯಡಿ ಫೆಬ್ರವರಿ ತಿಂಗಳ ಅಂತ್ಯಕ್ಕೆ ಬಾಕಿ ಉಳಿದಿರುವ 3990 ಅರ್ಜಿಗಳನ್ನು ಇನ್ನೆರಡು ದಿನಗಳಲ್ಲಿ ವಿಲೇವಾರಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ ಅ ಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಸಕಾಲ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಕಾಲಮಿತಿಯಲ್ಲಿ ಸೇವೆ ಒದಗಿಸಲು ಸಕಾಲ ಸೇವೆಗಳ ಅಧಿ ನಿಯಮ ಜಾರಿಯಾಗಿದೆ. ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಸಕಾಲ ಅರ್ಜಿ ಶೀಘ್ರ ವಿಲೇವಾರಿಗೆ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಸಕಾಲ ಯೋಜನೆ 2011ರಲ್ಲಿ ಜಾರಿಗೆ ಬಂದಿದ್ದು, ಈ ಯೋಜನೆಯಡಿ ನಾಗರಿಕರಿಗೆ ಒದಗಿಸಲಾಗುತ್ತಿರುವ ಸೇವೆಗಳ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ಸಂಬಂಧಪಟ್ಟ ಇಲಾಖೆಗಳು ವಿಲೇವಾರಿ ಮಾಡುವುದರ ಮೂಲಕ ನಾಗರಿಕರಿಗೆ ಸೇವೆ ಒದಗಿಸಬೇಕು ಎಂದರು.
ಸಕಾಲ ಯೋಜನೆಯನ್ನು ಪರಿಣಾಮಕಾರಿ ಆಗಿ ಅನುಷ್ಠಾನಗೊಳಿಸಲು ಜಿಲ್ಲೆಯಲ್ಲಿ ಸಮನ್ವಯ ಸಮಿತಿ ರಚನೆಗೆ ಸರ್ಕಾರ ಸೂಚನೆ ನೀಡಿದೆ. ಈ ಸಮಿತಿಯಲ್ಲಿ ಅಪರ ಜಿಲ್ಲಾ ಧಿಕಾರಿಗಳು ಅಧ್ಯಕ್ಷರಾಗಿದ್ದು, ವಿವಿಧ ಇಲಾಖೆಯ ಗ್ರೂಪ್ ಎ ವೃಂದದ ಅ ಧಿಕಾರಿಗಳು ಸದಸ್ಯರಾಗಿರುತ್ತಾರೆ. ಜಿಲ್ಲಾ ಮಾಹಿತಿ ತಂತ್ರಜ್ಞಾನ ಸಮಾಲೋಚಕರು ಸಂಚಾಲಕರಾಗಿರುತ್ತಾರೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿಗಳು ಪ್ರತಿ ಸೋಮವಾರ ತಮ್ಮ ಹಂತದಲ್ಲಿ ಅಧಿಕಾರಿಗಳ ಸಭೆ ಕರೆದು, ಇ-ಮೇಲ್ ಮೂಲಕ ಸಕಾಲ ಮಿಷನ್ಗೆ ವರದಿ ಕಳುಹಿಸಬೇಕು. ಪರಿಶೀಲನಾ ತಂಡವು ಪ್ರತಿ ಶನಿವಾರ ತಮ್ಮ ವ್ಯಾಪ್ತಿಯ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ, ತಪಾಸಣೆ ನಡೆಸಬೇಕು ಎಂದರು.
ಇಲಾಖಾವಾರು ಬಾಕಿ ಉಳಿದಿರುವ ಅರ್ಜಿಗಳು: ಕೆಎಸ್ಆರ್ಟಿಸಿ ನಿಗಮದಲ್ಲಿ ಒಟ್ಟು 2421 ಅರ್ಜಿಗಳು, ಕಾರ್ಮಿಕ ಇಲಾಖೆಯಲ್ಲಿ ಒಟ್ಟು 1054, ಕಂದಾಯ ಇಲಾಖೆಯಲ್ಲಿ 241, ಸಮಾಜ ಕಲ್ಯಾಣ ಇಲಾಖೆಯಲ್ಲಿ 124, ಬೆಸ್ಕಾಂನಲ್ಲಿ 46, ಸಾರಿಗೆ ಇಲಾಖೆಯಲ್ಲಿ 33, ನಗರಸಭೆಗಳಲ್ಲಿ 13 ಅರ್ಜಿ, ಆರೋಗ್ಯ ಇಲಾಖೆಯಲ್ಲಿ ಒಟ್ಟು 10 ಅರ್ಜಿಗಳು ಬಾಕಿ ಉಳಿದಿವೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಒಟ್ಟು 10 ಅರ್ಜಿಗಳಿದ್ದು, ಚಿತ್ರದುರ್ಗದಲ್ಲಿ 09, ಹೊಳಲ್ಕೆರೆಯಲ್ಲಿ 01 ಅರ್ಜಿ ಬಾಕಿ ಇದೆ.
ಪಟ್ಟಣ ಪಂಚಾಯತ್ನಲ್ಲಿ ಒಟ್ಟು 09 ಅರ್ಜಿಗಳು ಮೊಳಕಾಲ್ಮೂರು ತಾಲೂಕಿನಲ್ಲಿ ಬಾಕಿ ಉಳಿದಿವೆ. ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯಲ್ಲಿ 05 ಅರ್ಜಿಗಳು ಬಾಕಿಯಿದ್ದು, ಚಿತ್ರದುರ್ಗದಲ್ಲಿ 03, ಹಿರಿಯೂರು 01, ಹೊಸದುರ್ಗ 01 ಅರ್ಜಿ ಬಾಕಿ ಇದೆ. ಕಾನೂನು ಮಾಪನ ಶಾಸ್ತ್ರ ಇಲಾಖೆಯಲ್ಲಿ ಒಟ್ಟು 4 ಅರ್ಜಿಗಳು ಚಿತ್ರದುರ್ಗದಲ್ಲಿ ಬಾಕಿ ಇವೆ. ವಿಕಲಚೇತನ ಮತ್ತು ಹಿರಿಯ ನಾಗರಿಕ ಇಲಾಖೆಯಲ್ಲಿ ಒಟ್ಟು 2 ಅರ್ಜಿಗಳು ಚಿತ್ರದುರ್ಗದಲ್ಲಿ ಬಾಕಿ ಇವೆ. ಕೃಷಿ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಭೂಮಾಪನ ಇಲಾಖೆಯಲ್ಲಿ ತಲಾ ಒಂದು ಅರ್ಜಿ ಬಾಕು ಉಳಿದಿವೆ. ಸಕಾಲ ಯೋಜನೆಯಡಿ ಶೇ. 7.68ರಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ. ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.