ಸಂತೆ ಮೈದಾನ ಪ್ರವೇಶಕ್ಕೆ ಗುಂಡಿ ಅಡ್ಡಿ!
Team Udayavani, Dec 24, 2019, 3:11 PM IST
ಭರಮಸಾಗರ: ಇಲ್ಲಿನ ಸಂತೆ ಮೈದಾನದ ಪ್ರವೇಶ ದ್ವಾರದಲ್ಲಿ ಚರಂಡಿ ಸಮಸ್ಯೆ ನಿವಾರಿಸಲು ಕಳೆದ ಕೆಲವು ತಿಂಗಳುಗಳ ಹಿಂದೆ ಜೆಸಿಬಿ ಬಳಸಿ ದೊಡ್ಡ ಗುಂಡಿ ತೆಗೆಯಲಾಗಿತ್ತು. ಜನರು ಸಂತೆ ಮೈದಾನ ಪ್ರವೇಶಿಸಲು ಈ ಗುಂಡಿಯೇ ಅಡ್ಡಿಯಾಗಿದೆ!
ಸಂತೆ ಮೈದಾನದ ಪ್ರವೇಶ ದ್ವಾರದ ಬಳಿ ಸುಮಾರು 200 ಮೀಟರ್ ಉದ್ದದ ಚರಂಡಿ ಬಳಿ ಮಳೆಗಾಲದಲ್ಲಿ ವಿಪರೀತ ತ್ಯಾಜ್ಯ ಶೇಖರಣೆಗೊಂಡು ಬ್ಲಾಕ್ ಆಗಿ ರಸ್ತೆ ಮೇಲೆ ಚರಂಡಿ ನೀರು ಹರಿದಿತ್ತು. ಜೆಸಿಬಿ ಬಳಸಿ ಚರಂಡಿಯನ್ನು ಒಡೆದು ನೀರು ಹರಿಯಲು ಕ್ರಮ ಕೈಗೊಳ್ಳಲಾಗಿತ್ತು. “ಜಿಲ್ಲೆಯಲ್ಲೇ ಅತಿ ದೊಡ್ಡ ಸಂತೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭರಮಸಾಗರದ ಸಂತೆ ಪ್ರತಿ ಮಂಗಳವಾರ ನಡೆಯುತ್ತದೆ. ಸುತ್ತಮುತ್ತಲ ಹಳ್ಳಿಗಳು ಸೇರಿದಂತೆ ದಾವಣಗೆರೆ, ಬಳ್ಳಾರಿ ಜಿಲ್ಲೆಗಳಿಂದ ನಾನಾ ವ್ಯಾಪಾರ ನಡೆಸುವವರು ಪ್ರತಿ ವಾರ ಇಲ್ಲಿಗೆ ಆಗಮಿಸುತ್ತಾರೆ. ಅಲ್ಲದೆ ಭರಮಸಾಗರ ಸುತ್ತಮುತ್ತಲಿನ 150ಕ್ಕೂ ಹೆಚ್ಚು ಹಳ್ಳಿಗಳು ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರು, ದಾವಣಗೆರೆ ತಾಲೂಕಿನ 100ಕ್ಕೂ ಹೆಚ್ಚು ಹಳ್ಳಿಗಳ ಜನರು ಇಲ್ಲಿನ ಸಂತೆಯನ್ನು ನೆಚ್ಚಿಕೊಂಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಓಡಾಟ ಇರುವ ಸಂತೆ ಮೈದಾನದ ಮುಖ್ಯ ದ್ವಾರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಪ್ರವೇಶದ್ದೇ ದೊಡ್ಡ ಸಮಸ್ಯೆಯಾಗಿದೆ.
ಸಂತೆ ಪ್ರವೇಶಿಸುವ ದ್ವಾರದಲ್ಲಿ ದೊಡ್ಡ ಗುಂಡಿಯೊಂದು ಸೃಷ್ಟಿಯಾಗಿದೆ. ಇದರಿಂದ ಸಂತೆಗೆ ತೆರಳುವವರು ಗುಂಡಿಯ ಇಕ್ಕೆಲಗಳಲ್ಲಿನ ಸಣ್ಣ ದಾರಿ ಮೂಲಕವೇ ಒಳ ಪ್ರವೇಶಿಸಬೇಕು. ಸಂತೆಗೆ ಮಾರಾಟ ಮಾಡಲು ಬರುವ ವ್ಯಾಪಾರಸ್ಥರು ತಮ್ಮ ಚೀಲಗಳನ್ನು ಕಷ್ಟಪಟ್ಟು ಇಲ್ಲಿನ ಇಕ್ಕಟ್ಟಾದ ರಸ್ತೆಯಲ್ಲಿ ಹೊತ್ತು ಒಳ ಬರಬೇಕು. ಚರಂಡಿಯಲ್ಲಿನ ಗಬ್ಬುವಾಸನೆ ಮಧ್ಯದಲ್ಲಿ ವ್ಯಾಪಾರಸ್ಥರು ವ್ಯಾಪಾರ ಚಟುವಟಿಕೆಗಳನ್ನು ನಡೆಸಬೇಕಾಗಿದೆ.
ಕಳೆದ ಹಲವು ವರ್ಷಗಳಿಂದ ಸಂತೆ ಮೈದಾನದ ಮುಂಭಾಗದಲ್ಲಿ ಹಾದು ಹೋಗಿರುವ ಅಸಮರ್ಪಕ ಚರಂಡಿಯಿಂದಾಗಿ ಸಂತೆಯಲ್ಲಿ ಪಾಲ್ಗೊಳ್ಳುವವರು ಮತ್ತು ಸ್ಥಳೀಯರು ರೋಸಿ ಹೋಗಿದ್ದಾರೆ. ಒಮ್ಮೆ ಚರಂಡಿ ಸ್ವತ್ಛಗೊಳಿಸಿದರೆ ಕೆಲವೇ ದಿನಗಳಲ್ಲಿ ಮತ್ತೆ ಬ್ಲಾಕ್ ಆಗುತ್ತದೆ. ಇದರಿಂದ ದುರ್ವಾಸನೆ ನಿರಂತರವಾಗಿರುತ್ತದೆ.ಇಲ್ಲಿನ ಚರಂಡಿ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪ.
ಮಹಿಳೆಯರು, ವೃದ್ಧರು, ಮಕ್ಕಳು ಸ್ವಲ್ಪ ಯಮಾರಿದರೂ ಸಂತೆ ಪ್ರವೇಶ ದ್ವಾರದಲ್ಲಿ ತೆಗೆಯಲಾಗಿರುವ ಚರಂಡಿ ಗುಂಡಿಯಲ್ಲಿ ಬೀಳಬೇಕಾಗುತ್ತದೆ. ತರಕಾರಿ ಮತ್ತಿತರ ಚೀಲಗಳನ್ನು ಹೊತ್ತು ಇಲ್ಲಿನ ಚರಂಡಿ ರಸ್ತೆ ದಾಟುವುದು ಸಮಸ್ಯೆಯಾಗಿದೆ. ಚರಂಡಿ ಗುಂಡಿಯಿಂದ ರಸ್ತೆಯ ಒಂದು ಬದಿಗೆ ಮಣ್ಣು ಹಾಕಿರುವುದರಿಂದ ಸಂತೆ ಮೈದಾನದ ಒಳಗೆ ವ್ಯಾಪಾರ ಮಾಡಬೇಕಾದ ಹಣ್ಣು, ಸೊಪ್ಪು, ತರಕಾರಿ, ಹೂವು ವ್ಯಾಪಾರಸ್ಥರು ರಸ್ತೆಗೆ ಬರಬೇಕಾಗಿದೆ. ಇದರಿಂದ ವಾರದ ಸಂತೆ ದಿನವಾದ ಮಂಗಳವಾರ ಇಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತದೆ.
ಸಂತೆ ಮೈದಾನಕ್ಕೆ ಕಾಂಪೌಂಡ್, ಸಂತೆ ಕಟ್ಟೆಗಳು, ಸಿಸಿ ರಸ್ತೆ, ಸಿಮೆಂಟ್ ಮೇಲ್ಛಾವಣಿಗಳನ್ನು ಅಳವಡಿಸಿ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಸಂತೆ ಸುತ್ತಲಿನ ಚರಂಡಿಗಳು ಸೇರಿದಂತೆ ಇತರೆ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಬಿಸಾಡುವ ಕಸ ತ್ಯಾಜ್ಯವನ್ನು ಉತ್ತಮವಾಗಿ ವಿಲೇವಾರಿ ಮಾಡುವ ಕಡೆ ಗ್ರಾಮ ಪಂಚಾಯತ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯ ಆಗ್ರಹ.
14ನೇ ಹಣಕಾಸು ಯೋಜನೆಯಡಿ ಒಂದು ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಸಂತೆ ಮೈದಾನದ ಪ್ರವೇಶ ದ್ವಾರದಲ್ಲಿ ಸಿಮೆಂಟ್ ಪೈಪ್ ಅಳವಡಿಸಿ ಚರಂಡಿ ನಿರ್ಮಿಸಲು ಯೋಜನೆ ರೂಪಿಸಿ ಅನುಮೋದನೆಗೆ ಕಳುಹಿಸಿದ್ದೇವೆ. ಶೀಘ್ರದಲ್ಲೇ ಅನುದಾನ ಬಿಡುಗಡೆ ಆಗಲಿದೆ. ಕಾಮಗಾರಿ ಕೈಗೊಂಡು ಸಮಸ್ಯೆ ಪರಿಹರಿಸಲಾಗುವುದು. –ಶ್ರೀದೇವಿ, ಭರಮಸಾಗರ ಗ್ರಾಪಂ ಪಿಡಿಒ
-ಎಚ್.ಬಿ. ನಿರಂಜನ ಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ