ಕಾನೂನು ಅರಿವಿನಿಂದ ಉತ್ತಮ ಸಮಾಜ ನಿರ್ಮಾಣ
Team Udayavani, Nov 21, 2017, 6:45 PM IST
ಮೊಳಕಾಲ್ಮೂರು: ಕಾನೂನು ಅಭ್ಯಸಿಸುವ ವಿದ್ಯಾರ್ಥಿಗಳಷ್ಟೇ ಕಾನೂನನ್ನು ಓದಿ ತಿಳಿದುಕೊಂಡರೆ ಸಾಲದು. ಎಲ್ಲ ಮಕ್ಕಳೂ
ಕಾನೂನು ಅರಿವು ಮೂಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಶ್ರೀಶೈಲ ಭೀಮಸೇನ ಬಾಗಡಿ ಹೇಳಿದರು.
ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಇವುಗಳ ಸಹಯೋಗದೊಂದಿಗೆ ಕಾನೂನು ಸೇವಾ ಪ್ರಾಧಿಕಾರದ ಸೇವೆ ಮತ್ತು ಸೌಲಭ್ಯಗಳ ಪ್ರಚಾರ ಆಂದೋಲನ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಾನೂನು ಸೌಲಭ್ಯ ನೀಡಲಾಗುತ್ತಿದೆ. ಕ್ಲಿಷ್ಟಕರವಾದ ಸಮಸ್ಯೆಗಳನ್ನು ಕಾನೂನಡಿ ಪರಿಹರಿಸಿಕೊಳ್ಳಬಹುದಾಗಿದೆ. ಕಾನೂನು ಸೇವಾ ಪ್ರಾಧಿಕಾರದ ಸೇವೆ ಮತ್ತು ಸೌಲಭ್ಯಗಳ ಪ್ರಚಾರ ಆಂದೋಲನದ ಮೂಲಕ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸಲಾಗಿದೆ. ಪ್ರಬಂಧ ಸ್ಪರ್ಧೆ, ರ್ಯಾಲಿ ಮತ್ತು ಆಶುಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು ಎಂದರು.
ನ್ಯಾಯವಾದಿ ಕೆ.ಎಂ. ರಾಮಾಂಜನೇಯ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸನ್ಮಾರ್ಗದತ್ತ ಕೊಂಡೊಯ್ಯಬೇಕು. ಚಿಕ್ಕ ವಯಸ್ಸಿನಲ್ಲಿಯೇ ಸಮಾಜ ಮುನ್ನಡೆಸುವ ಜವಾಬ್ದಾರಿ ನೀಡಬೇಕು. ದೇಶದಲ್ಲಿ ಶೇ. 65 ಮತ್ತು ರಾಜ್ಯದಲ್ಲಿ ಶೇ. 67ರಷ್ಟು ಸಾಕ್ಷರತೆ ಇದೆ. ಮಕ್ಕಳನ್ನು ಕೂಲಿ ಕೆಲಸ, ಕೈಗಾರಿಕೆಗಳಲ್ಲಿ ಕೆಲಸಕ್ಕೆ ಕಳುಹಿಸಿ ಬಾಲಕಾರ್ಮಿಕರನ್ನಾಗಿಸದೆ ಉತ್ತಮ ಶಿಕ್ಷಣ ನೀಡಬೇಕು. 18 ವರ್ಷದೊಳಗಿನ ಮಕ್ಕಳು ಬಾಲನ್ಯಾಯ ಮಂಡಳಿಯ ಸೌಲಭ್ಯಗಳನ್ನು ಪಡೆದು ಸತ್ಪಜೆಗಳಾಗಬೇಕು ಎಂದು ಕರೆ ನೀಡಿದರು.
ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಯು. ಅನುರಾಧಾ, ಸಂಗೀತಾ, ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಡಿ.ಎಸ್. ಕೃಷ್ಣ, ಸಮೀನಾಬಾನು ಮಾತನಾಡಿದರು. ಆಶುಭಾಷಣ ಸ್ಪರ್ದೆಯಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಯು. ಅನುರಾಧಾ ಪ್ರಥಮ, ಸಿ. ಸಂಗೀತಾ ದ್ವಿತೀಯ ಹಾಗೂ ಸರ್ಕಾರಿ ಪಪೂ ಕಾಲೇಜಿನ ಡಿ.ಎಸ್. ಕೃಷ್ಣ ತೃತೀಯ ಸ್ಥಾನ ಗಳಿಸಿದರು.
ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಯಶೋದಾ, ಎಂ. ಕಾವ್ಯ, ಸಿ. ಸಂಗೀತಾ, ಡಿ.ಎಸ್. ಕೃಷ್ಣ, ಶಮೀನಾಬಾನು, ಎಸ್ .ಪಿ. ಇಂದ್ರಮ್ಮ ಅವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಪಿ.ಜಿ. ವಸಂತಕುಮಾರ್, ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಸಿದ್ದಪ್ಪ, ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ತಿಮ್ಮಪ್ಪ, ನ್ಯಾಯವಾದಿಗಳಾದ ರಾಜಶೇಖರ ನಾಯಕ, ಎಚ್. ಚಂದ್ರಣ್ಣ, ವಿ.ಜಿ. ಪರಮೇಶ್ವರಪ್ಪ, ಬಿ. ಒಳಮs…, ಅನಸೂಯಾ, ಕೆ.ಬಿ. ಮಲ್ಲಿಕಾರ್ಜುನ, ಕುಮಾರ್ ಮತ್ತಿತರರು ಭಾಗವಹಿಸಿದ್ದರು.