ಮದ್ಯದಂಗಡಿ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾಬಾಬು ಅವರಿಗೆ ಸೊಂಡೆಕೆರೆ ಮಹಿಳೆಯರ ಒತ್ತಾಯ
Team Udayavani, Jun 7, 2020, 3:24 PM IST
ಸಾಂದರ್ಭಿಕ ಚಿತ್ರ
ಹಿರಿಯೂರು: ನಮ್ಮ ಗ್ರಾಮದ ಮಧ್ಯಭಾಗದಲ್ಲಿ ಮದ್ಯದ ಅಂಗಡಿ ತೆರೆಯಲು ಸಿದ್ಧತೆ ನಡೆಸಲಾಗಿದೆ. ಅದನ್ನು ಈ ಕೊಡಲೇ ಬಂದ್ ಮಾಡಿಸಿ ಇಲ್ಲವಾದರೆ ಊರಿಂದ ಹೊರಗೆ ಹಾಕಿಸಿ ಎಂಬುದಾಗಿ ಗ್ರಾಮದ ಮಹಿಳೆಯರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶಶಿಕಲಾಬಾಬು ರವರನ್ನು ಒತ್ತಾಯಿಸಿದ್ದಾರೆ.
ಜಿಪಂ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸೊಂಡೆಕೆರೆ ಗ್ರಾಮಕ್ಕೆ ಭೇಟಿ ನೀಡಿದ್ದ ಅವರಿಗೆ ಮದ್ಯದಂಗಡಿ ಬಂದ್ ಮಾಡಿಸುವಂತೆ ಒತ್ತಾಯಿಸಿದರಲ್ಲದೆ ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂಬುದಾಗಿ ಎಚ್ಚರಿಸಿದರು. ಅಲ್ಲದೆ ಗ್ರಾಮದಲ್ಲಿ ಸಾಕಷ್ಟು ನೀರಿದ್ದರೂ ನಿರ್ವಹಣೆ ಕೊರತೆಯಿಂದ ನಮಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಶಾಸಕರಿಗೆ, ಜಿಲ್ಲಾಧಿಕಾರಿ, ಜಿಪಂ ಸಿಇಒ, ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಕೊಟ್ಟಿದ್ದರೂ ಪ್ರಯೋಜನವಾಗಿಲ್ಲ. ಎಂಬುದಾಗಿ ತಮ್ಮ ಅಹವಾಲು ಹೇಳಿಕೊಂಡರು.
ಮದ್ಯದ ಬದಲು ಶುದ್ಧ ನೀರು ಕೊಡುವ ವ್ಯವಸ್ಥೆ ಮಾಡಿಸಿ, ಲಾಕ್ಡೌನ್ ಕಾರಣಕ್ಕೆ ರೈತರು, ಕೃಷಿ ಕಾರ್ಮಿಕರ ಬದುಕು ಅತಂತ್ರವಾಗಿದೆ. ನರೇಗಾ ಯೋಜನೆಯಡಿ ಬಡವರಿಗೆ ಕೂಲಿ ಕೊಡಿಸಿ ರೈತರಲ್ಲಿ ತಾರತಮ್ಯ ಮಾಡದೆ ಕೃಷಿ ಹೊಂಡ, ಬದು ನಿರ್ಮಾಣಕ್ಕೆ ಆದೇಶ ನೀಡಿ ಎಂದು ಹಲವು ಗ್ರಾಮಸ್ಥರು ಮನವಿ ಮಾಡಿದರು.
ಸಮಸ್ಯೆ ಆಲಿಸಿದ ಜಿಪಂ ಅಧ್ಯಕ್ಷೆ ಶಶಿಕಲಾಬಾಬು ಅವರು, ಮದ್ಯದಂಗಡಿ ತೆರವುಗೊಳಿಸುವ ಬಗ್ಗೆ ಜಿಲ್ಲಾಧಿಕಾರಿ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು.