ಖಾತ್ರಿ ಕಾಮಗಾರಿಗೆ ಶಾಸಕ ಗೂಳಿಹಟ್ಟಿ ಚಾಲನೆ
Team Udayavani, Jun 17, 2020, 1:03 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದುರ್ಗ: ಅನ್ಯ ರಾಜ್ಯಕ್ಕೆ ವಲಸೆ ಹೋಗಿ ತವರಿಗೆ ಬಂದ ಕೂಲಿ ಕಾರ್ಮಿಕರು ಹಾಗೂ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಕೆಲಸ ನೀಡುವ ಕಾಮಗಾರಿಗೆ ಶಾಸಕ ಗೂಳಿಹಟ್ಟಿ ಶೇಖರ್ ಸ್ವತಃ ಕೆಲಸ ಮಾಡುವ ಮೂಲಕ ಚಾಲನೆ ನೀಡಿದರು.
ಉದ್ಯೋಗ ಖಾತ್ರಿ ಯೋಜನೆ ಅಡಿ ಜಾನಕಲ್ ಗ್ರಾಪಂ ವ್ಯಾಪ್ತಿಯ ಹಿರೇಹಳ್ಳ ವ್ಯಾಪ್ತಿಯ ಹಳ್ಳದಲ್ಲಿ ಮಣ್ಣು ತೆಗೆಯುವ ಕಾಮಗಾರಿಯನ್ನು ಆರಂಭಿಸಲಾಗಿದೆ. ಹಿರೇಹಳ್ಳ ಜಾನಕಲ್, ದೇವಪುರ, ದೊಡ್ಡಘಟ್ಟ ಗ್ರಾಪಂ ವ್ಯಾಪ್ತಿ ನೂರಾರು ಕಾರ್ಮಿಕರಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಜಾಬ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಈ ಕೆಲಸದಲ್ಲಿ ಪಾಲ್ಗೊಂಡಿದ್ದಾರೆ. ಅನ್ಯ ರಾಜ್ಯದಿಂದ ವಲಸೆ ಬಂದ ಕಾರ್ಮಿಕರಿಗೆ ನರೇಗಾ ಯೋಜನೆ ವರದಾನವಾಗಿದ್ದು, ಸ್ಥಳೀಯರಿಗೂ ಉದ್ಯೋಗಾವಕಾಶ ಕಲ್ಪಿಸಿರುವುದು ಅವರಲ್ಲಿ ಸಂತಸ ತಂದಿದೆ. ಹಿರೇಹಳ್ಳ ಸಂಪೂರ್ಣ ಕಲ್ಲು ಮುಳ್ಳುಗಳಿಂದ ತುಂಬಿದ್ದನ್ನು ಗಮನಿಸಿದ ಶಾಸಕ ಗೂಳಿಹಟ್ಟಿ ಶೇಖರ್, ಆರೇಳು ಜೆಸಿಬಿ ಸಹಾಯದಿಂದ ರಾಜಕಾಲುವೆಯನ್ನು ದುರಸ್ತಿ ಮಾಡಿಸಿ ಕಾಲುವೆ ಮಾರ್ಗ ಮಾಡಿಸಿದ್ದಾರೆ.
ಈಗ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು 4.80 ಲಕ್ಷ ರೂ. ವೆಚ್ಚದಲ್ಲಿ 180 ಮೀಟರ್ ಉದ್ದ ಹಾಗೂ 24 ಮೀಟರ್ ಅಗಲ ಒಂದೂವರೆ ಅಡಿ ಆಳದಲ್ಲಿ ಹೂಳು ತೆಗೆಯುವ ಕಾಮಗಾರಿ ನಡೆಸುವಂತೆ ಸೂಚಿಸಿದ್ದರು. ಅದರಂತೆ ಈಗ ಕಾಮಗಾರಿ ಆರಂಭವಾಗಿದೆ. ಹಿರೇಹಳ್ಳ ವ್ಯಾಪ್ತಿ ಸುಮಾರು 15 ಕಿಮೀ ಇದ್ದು, ಮೂರು ಗ್ರಾಮ ಪಂಚಾಯತ್ ಗಳ ವ್ಯಾಪ್ತಿಗೆ ಒಳಪಡುತ್ತಿದೆ. ಸಂಬಂಧಿಸಿದ ಗ್ರಾಪಂನವರು ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಕಾರ್ಮಿಕರಿಗೆ ಕೆಲಸ ನೀಡುತ್ತಿದ್ದಾರೆ ಎಂದು ತಾಲೂಕು ಉದ್ಯೋಗ ಖಾತ್ರಿ ತಾಂತ್ರಿಕ ಇಂಜಿನಿಯರ್ ಸಂತೋಷ್ ತಿಳಿಸಿದರು.
ಕೋವಿಡ್-19 ನಿಯಂತ್ರಣಕ್ಕೆ ಅಗತ್ಯ ಕ್ರಮ ಹಾಗೂ ಕಾರ್ಮಿಕರ ಸುರಕ್ಷತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾಮಗಾರಿ ಆರಂಭಿಸಲಾಗಿದೆ. ಕೂಲಿಕಾರರಿಗೆ ಒಂದು ಮಾನವ ದಿನ 275 ರೂ. ದಿನಗೂಲಿ ಮತ್ತು ಸಲಕರಣೆ ವೆಚ್ಚ 10 ರೂ. ಸೇರಿ 285 ರೂ. ನೀಡಲಾಗುವುದು ಎಂದು ಜಾನಕಲ್
ಗ್ರಾಪಂ ಪಿಡಿಒ ಶ್ರೀನಿವಾಸ್, ಎಡಿ ರಂಗನಾಥ್ ಮಾಹಿತಿ ನೀಡಿದರು.
ಹೊಸದುರ್ಗ ತಾಲೂಕಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಭೂ ಅಭಿವೃದ್ಧಿ, ಹೂಳೆತ್ತುವ ಕಾಮಗಾರಿ, ಬದು ನಿರ್ಮಾಣ, ಕೃಷಿಹೊಂಡ, ಅರಣ್ಯ ಹಾಗೂ ಜಲ ಸಂರಕ್ಷಣೆಯಂತಹ ಕಾಮಗಾರಿಗಳನ್ನು ಎಲ್ಲಾ ಗ್ರಾಪಂಗಳ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಜಾನಕಿರಾಮ್, ತಾಪಂ ಇಒ
ಅಂತರ್ಜಲ ವೃದ್ಧಿ ಉದ್ದೇಶ ಸೇರಿದಂತೆ ಹಿರೇಹಳ್ಳದಲ್ಲಿ ಉಂಟಾಗುತ್ತಿದ್ದ ನೆರೆ ಹಾವಳಿ ತಡೆಯಲು ಹಳ್ಳದ ಪುನಶ್ಚೇತನ ಕಾರ್ಯ ನಡೆಯುತ್ತಿದೆ. ನಾಲೆ ಪುನಶ್ಚೇತನದ ಜೊತೆಗೆ ಹಳ್ಳದ ಹೂಳು ಎತ್ತುವುದು ಹಾಗೂ ಎರಡು ಕಡೆ ಒಡ್ಡು ಬಲಪಡಿಸಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆ ಜೊತೆಗೆ ವಿವಿಧ ಇಲಾಖೆಗಳ ಅಡಿಯಲ್ಲಿ ಚೆಕ್ ಡ್ಯಾಂ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ.
ಗೂಳಿಹಟ್ಟಿ ಶೇಖರ್, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ