ವಿವಿಧೆಡೆ ನರೇಗಾ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಒ
Team Udayavani, Mar 17, 2022, 11:20 AM IST
ಮೊಳಕಾಲ್ಮೂರು: ತಾಲೂಕಿನ ನಾನಾ ಗ್ರಾಮ ಪಂಚಾಯಿತಿಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ| ನಂದಿನಿದೇವಿ ಭೇಟಿ ಮಾಡಿ ನರೇಗಾ ಯೋಜನೆಯಲ್ಲಿ ಕೈಗೊಂಡಿರುವ ಕ್ರಿಯಾಯೋಜನೆ ಕುರಿತು ಮಾಹಿತಿ ಪಡೆದರು. ಕೂಲಿಕಾರರಿಗೆ ಕೆಲಸ ನೀಡಿದ್ದಾರೆಯೇ ಇಲ್ಲವೇ ಎಂಬುದರ ಪರಿಶೀಲನೆ ನಡೆಸಿದರು. ತಾಲೂಕಿನ ಹಿರೇಕೆರೆಹಳ್ಳಿ ಅಶೋಕಸಿದ್ದಾಪುರ ಗ್ರಾಮಗಳಿಗೆ ಭೇಟಿ ನೀಡಿ ಬದು ನಿರ್ಮಾಣ, ಕೆರೆ-ಹಳ್ಳ ಅಭಿವೃದ್ಧಿ, ಕೃಷಿ ಹೊಂಡ ಸೇರಿದಂತೆ ನರೇಗಾ ಯೋಜನೆಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಹಿರೇಕೆರೆಹಳ್ಳಿ ಗ್ರಾಮದಲ್ಲಿ ಕೈಗೊಂಡಿರುವ ರಿವಿಟ್ಮೆಂಟ್ , ಕಾಲುವೆ ಅಭಿವೃದ್ಧಿ, ಮೆಟ್ಲಿನ್ಗ್ ರಸ್ತೆ ಅಭಿವೃದ್ಧಿ ಸ್ಥಳಗಳಿಗೆ ತೆರಳಿ ಕೂಲಿಕಾರರ ಜತೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಕಳೆದ ಒಂದು ತಿಂಗಳಿನಿಂದ ಕೂಲಿ ಹಣ ಬಂದಿಲ್ಲ, ಕೂಡಲೇ ನೀಡಬೇಕೆಂದು ಕೂಲಿಕಾರರು ಮನವಿ ಮಾಡಿಕೊಂಡರು. ಅಶೋಕಸಿದ್ದಾಪುರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನರೇಗಾ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಕ್ರಿಯಾ ಯೋಜನೆ ಮಾಹಿತಿ ಪಡೆದು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಕೈಗೊಂಡ ಕೆಲ ಕಾಮಗಾರಿಗಳನ್ನು ವೀಕ್ಷಿಸಿದರು. ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಅಲ್ಲಿ ನಿರ್ಮಿಸಿರುವ ಕಟ್ಟಡವನ್ನು ಪರಿಶೀಲಿಸಿದರು. ಘನತ್ಯಾಜ್ಯ ವಿಲೇವಾರಿಯನ್ನು ಶೀಘ್ರವಾಗಿ ಪ್ರಾರಂಭಿಸುವ ಜೊತೆಗೆ ಕೂಲಿಕಾರರಿಗೆ ನೆರವಾಗಲು ಕುಡಿಯುವ ನೀರು ಹಾಗೂ ಶೌಚಾಲಯ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದರು. ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಿದರು. ಅಂಗನವಾಡಿ ಕೇಂದ್ರಗಳನ್ನು ಸ್ವತ್ಛವಾಗಿಟ್ಟುಕೊಂಡು ಮಕ್ಕಳಿಗೆ ಶುಚಿ ಮತ್ತು ರುಚಿಯಾದ ಆಹಾರ ನೀಡುವುದರೊಂದಿಗೆ ಅಪೌಷ್ಟಿಕತೆ ಕಂಡುಬರದಂತೆ ಜಾಗ್ರತೆ ವಹಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸಿಇಒ ಡಾ| ನಂದಿನಿದೇವಿ, ತಾಲೂಕಿನಲ್ಲಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು ಜಾಬ್ಕಾರ್ಡ್ ಹೊಂದಿದ ಕೂಲಿಕಾರರಿಗೆ ಕೂಲಿ ಕೆಲಸ ನೀಡಬೇಕು. ನರೇಗಾ ಯೋಜನೆಯಲ್ಲಿ ಬದು ನಿರ್ಮಾಣ, ಕೆರೆ ಅಭಿವೃದ್ಧಿ, ಹಳ್ಳ ಅಭಿವೃದ್ಧಿಯಂತಹ ಕಾಮಗಾರಿಗಳಿಗೆ ಆದ್ಯತೆ ನೀಡಿ ಕೂಲಿಕಾರರಿಗೆ ಸಕಾಲಕ್ಕೆ ಕೂಲಿ ಹಣ ವಿತರಿಸಬೇಕು. ನರೇಗಾ ಕಾಮಗಾರಿಗಳಿಗೆ ಯಂತ್ರಗಳ ಬಳಕೆ ಮಾಡದೆ ಜನರಿಂದಲೇ ಕಾಮಗಾರಿ ಪೂರ್ಣಗೊಳಿಸಬೇಕು. ನರೇಗಾ ಕಾಮಗಾರಿಗಳನ್ನು ನಿಯಮಾನುಸಾರ ಜನರಿಗೆ ಅವಕಾಶ ನೀಡದ ಪ್ರಕರಣಗಳು ಕಂಡು ಬಂದಲ್ಲಿ ಸಂಬಂಧಿತ ಅಧಿಕಾರಿಗಳೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಪಿಡಿಒಗಳಿಗೆ ಸೂಚನೆ ನೀಡಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಒ. ಜಾನಕಿರಾಮ, ತಾಪಂ ಸಿಬ್ಬಂದಿ ಮಧುಸೂದನ ಮತ್ತಿತರರು ಇದ್ದರು.