ತುರುವನೂರಲ್ಲಿ ರಥೋತ್ಸವ-ದಾಸಯ್ಯನ ಪವಾಡ
35 ಅಡಿ ಎತ್ತರದ ರಥ ಎಳೆದು ಪುನೀತರಾದ ಭಕ್ತಾದಿಗಳು
Team Udayavani, Feb 28, 2021, 3:47 PM IST
ನಾಯಕನಹಟ್ಟಿ: ತುರುವನೂರು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ದಾಸಯ್ಯನ ಪವಾಡ ಶನಿವಾರ ಸಂಭ್ರಮ ಹಾಗೂ ಸಡಗರದಿಂದ ನೆರವೇರಿತು.
ಬೆಳಗ್ಗೆ 10 ಗಂಟೆಗೆ ತುರುವನೂರು ಆಂಜನೇಯಸ್ವಾಮಿ ಬೃಹತ್ ಮೂರ್ತಿಯನ್ನು ದೇವಾಲಯದಿಂದ ವಿಶೇಷ ಪೂಜೆ ಸಲ್ಲಿಸಿ ತರಲಾಯಿತು. ನಂತರ ರಥದಲ್ಲಿ ಪೂಜಾ ವಿ ಧಿಗಳೊಂದಿಗೆ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಸುಮಾರು 35 ಅಡಿ ಎತ್ತರದ ರಥವನ್ನು ನೂರಾರು ಹೂವುಗಳ ಹಾರಗಳಿಂದ ಅಲಂಕರಿಸಲಾಗಿತ್ತು. ರಥವನ್ನು ಪಾದಗಟ್ಟೆಯವರೆಗೆ ಎಳೆಯಲಾಯಿತು. ಭಕ್ತಾದಿಗಳು ರಥಕ್ಕೆ ಕಾಯಿ,ಬಾಳೆ ಹಣ್ಣು ಅರ್ಪಿಸಿದರು. ಮಾಳಿಗೆ ಬಸವರಾಜ್ 25 ಸಾವಿರ ರೂ.ಗಳಿಗೆ ಹರಾಜಿನಲ್ಲಿ ಪಡೆದರು. ರಥೋತ್ಸವದ ಪ್ರಯುಕ್ತ ರಥಬೀದಿಗೆ ನೀರು ಹಾಕಿ, ತಳಿರು, ತೋರಣಗಳಿಂದ ಅಲಂಕರಿಸಲಾಗಿತ್ತು. ದೇವಾಲಯ ಸಮಿತಿ ವತಿಯಿಂದ ಸಾವಿರಾರು ಭಕ್ತರಿಗೆ ದಾಸೋಹ ಏರ್ಪಡಿಸಲಾಗಿತ್ತು. ಸುತ್ತಲಿನ ಕಡಬನಕಟ್ಟೆ, ತುರುವನೂರು, ಹಾಯ್ಕಲ್ ಸೇರಿದಂತೆ ಸಾವಿರಾರು ಜನರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಸಂಜೆ ದಾಸಯ್ಯನ ಪವಾಡ ಜರುಗಿತು. ಮುಳ್ಳು ಪಲ್ಲಕ್ಕಿಯಲ್ಲಿ ಕುಳಿತಿದ್ದ ದಾಸಯ್ಯನನ್ನು ತುರುವನೂರಿನಿಂದ ದೊಡ್ಡ ಘಟ್ಟಕ್ಕೆ ಮೆರವಣಿಗೆಯಲ್ಲಿ ಕರೆತರಲಾಯಿತು. ಸುಮಾರು ನಾಲ್ಕು ಕಿಮೀ ಪಾದಯಾತ್ರೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ನಂತರ ದೊಡ್ಡ ಘಟ್ಟದ ದೇವಾಲಯದಲ್ಲಿ ದಾಸಯ್ಯ ಮುಳ್ಳು ಪಲ್ಲಕ್ಕಿಯಲ್ಲಿ ಮಲಗಿ ಭಕ್ತರಿಗೆ ದರ್ಶನ ನೀಡಿದರು.